ಕಳಪೆ ಆಹಾರ- ಕೇಟರಿಂಗ್ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ 'ಮಹಾ' ಶಿವಸೇನಾ ಶಾಸಕ
ಮುಂಬೈ ಆಗಸ್ಟ್ 16: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕಾಗಿ ಶಿವಸೇನೆಯ ಶಾಸಕ ಕೇಟರಿಂಗ್ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಏಕನಾಥ್ ಶಿಂಧೆ ಅವರ ಪಾಳೆಯದ ಶಿವಸೇನೆ ಶಾಸಕರೊಬ್ಬರು ಕೇಟರಿಂಗ್ ಸೇವೆಯ ವ್ಯವಸ್ಥಾಪಕರನ್ನು ನಿಂದಿಸಿ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಗೆ ಬಡಿಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಕ್ಕಾಗಿ ಕೇಟರಿಂಗ್ ಮ್ಯಾನೇಜರ್ಗೆ ಶಾಸಕ ಸಂತೋಷ್ ಬಂಗಾರ್ ನಿಂದಿಸಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಂಗಾರ್ ಅವರು ಆಹಾರದ ಗುಣಮಟ್ಟದ ಬಗ್ಗೆ ದೂರು ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಂತರ ಅದನ್ನು ಸ್ವತಃ ಪರಿಶೀಲಿಸಲು ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಬಂಗಾರ್ ಕೇಟರಿಂಗ್ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ್ದಾರೆ.
ಶಾಸಕ ಬಂಗಾರ್ ಮ್ಯಾನೇಜರ್ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಹಲ್ಲೆ ಮಾಡಿದ್ದಾರೆ. ವಿಡಿಯೋದಲ್ಲಿ ಬಂಗಾರ್ ಅವರು ಆಹಾರದ ಗುಣಮಟ್ಟವನ್ನು ಪ್ರಶ್ನಿಸುತ್ತಿರುವುದು ಮತ್ತು ನಂತರ ಆಹಾರ ಸೇವೆಯ ನೇತೃತ್ವ ವಹಿಸಿದ್ದ ವ್ಯವಸ್ಥಾಪಕರಿಗೆ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಂತರ ಮ್ಯಾನೇಜರ್ ಆ, ಆಹಾರ ವಿಲೇವಾರಿ ಆಗಬೇಕಾಗಿರುವ ಬೇಡವಾದ ಆಹಾರದ ಭಾಗವೆಂದು ಹೇಳಿಕೊಂಡರಾದರೂ ಶಾಸಕರೂ ಅವರ ಮಾತನ್ನು ಕೇಳಿಸಿಕೊಂಡಿಲ್ಲ.
ರಾಜ್ಯ ಸರ್ಕಾರದ ಮಧ್ಯಾಹ್ನದ ಬಿಸಿ ಊಟದ ಯೋಜನೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಆಹಾರವನ್ನು ವಿತರಿಸಲಾಗುತ್ತದೆ. ಖಾಸಗಿಯವರಿಗೆ ಕಾರ್ಮಿಕ ಇಲಾಖೆಯೂ ಈ ಆಹಾರದ ವಿತರಣೆಯ ಗುತ್ತಿಗೆಯನ್ನು ನೀಡಿದೆ. ಹಿಂಗೋಲಿ ನಗರದಾದ್ಯಂತ ಕಾರ್ಮಿಕರಿಗಾಗಿ ತಯಾರಾಗುವ ಈ ಆಹಾರವನ್ನು ಗುತ್ತಿಗೆದಾರರ ಆವರಣದಲ್ಲಿ ತಯಾರಿಸಲಾಗುತ್ತದೆ.
ಶಾಸಕರಿಗೆ ಕೂಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಹಾರ ತಯಾರಿಸುವ ಆವರಣಕ್ಕೆ ಶಾಸಕ ಸಂತೊಷ್ ಬಂಗಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂಬಂಧಿತ ಗುತ್ತಿಗೆದಾರರು ಕಾರ್ಮಿಕರಿಗೆ ಬಡಿಸುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಮತ್ತು ಸರ್ಕಾರವು ಸೂಚಿಸಿದ ಮೆನುವನ್ನು ಕಾರ್ಮಿಕರಿಗೆ ನೀಡುತ್ತಿಲ್ಲ ಎಂಬುದು ತನ್ನ ಗಮನಕ್ಕೆ ಬಂದಿದೆ ಎಂದು ಬಂಗಾರ್ ಹೇಳಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಇದಕ್ಕೆ ಕಾರಣರಾದವರನ್ನು ಅಮಾನತು ಮಾಡಿ ಎಂದು ಬಂಗಾರ್ ಹೇಳಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ.