ಸರ್ಕಾರದಿಂದ 'ಕಾಶ್ಮೀರಿ ಫೈಲ್' ಪ್ರಚಾರ ದುರದೃಷ್ಟಕರ: ಪ್ರಸ್ತುತ ಗಲಭೆ ಉಲ್ಲೇಖಿಸಿದ ಶರದ್ ಪವಾರ್
ಅಮರಾವತಿ, ಏಪ್ರಿಲ್ 11: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಹಲವಾರು ಕೋಮು ಸಂಘರ್ಷಗಳನ್ನು ಉಲ್ಲೇಖ ಮಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ವಿಚಾರಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರದಲ್ಲಿರುವವರು ಸಿನಿಮಾವನ್ನು ಪ್ರಚಾರ ಮಾಡಿರುವುದು ದುರದೃಷ್ಟಕರ ಎಂದು ಹೇಳಿದರು.
ಭಾನುವಾರ ಎನ್ಸಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಧಾರ್ಮಿಕ ನೆಲೆಯಲ್ಲಿ ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪ ಮಾಡಿದರು. ಇಂಧನ ಹೆಚ್ಚಳ ಮತ್ತು ಹಣದುಬ್ಬರವು ಗಂಭೀರ ಪ್ರಮಾಣದಲ್ಲಿದ್ದಾಗ, ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎನ್ಸಿಪಿ ಮುಖಂಡರು ಆರೋಪ ಮಾಡಿದರು.
The Kashmir Files: 'ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿಯಿಂದ ಸಿನಿಮಾ ಪ್ರಚಾರ'
"ಹಿಂದೂಗಳನ್ನು ಹೇಗೆ ಹಿಂಸಿಸಲಾಯಿತು. ಒಂದು ಸಣ್ಣ ಸಮುದಾಯವು ಸಮಸ್ಯೆಯನ್ನು ಎದುರಿಸಿದಾಗ ಬಹುಸಂಖ್ಯಾತ ಸಮುದಾಯವು ಅವರ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ಚಲನಚಿತ್ರವು ತೋರಿಸಿದೆ. ಬಹುಸಂಖ್ಯಾತ ಸಮುದಾಯವು ಮುಸ್ಲಿಮರಾಗಿದ್ದರೆ ಹಿಂದೂ ಸಮುದಾಯದಲ್ಲಿ ಅಭದ್ರತೆಯ ಭಾವನೆ ಉಂಟಾಗುತ್ತದೆ," ಎಂದು ಈ ಸಿನೆಮಾದ ಬಗ್ಗೆ ಶರದ್ ಪವಾರ್ ವಿವರಿಸಿದ್ದಾರೆ.
ದೇಶದ ಕೋಮು ಪರಿಸ್ಥಿತಿಯ ಬಗ್ಗೆ ಶರದ್ ಪವಾರ್ ಕಳವಳ
"ಈ ಅಭದ್ರತೆಯನ್ನು ಸೃಷ್ಟಿಸಲು ಇಂದು ಯೋಜಿತ ಪಿತೂರಿ ನಡೆಯುತ್ತಿದೆ. ದುರದೃಷ್ಟವಶಾತ್, ದೇಶದಲ್ಲಿ ಅಧಿಕಾರದಲ್ಲಿರುವವರು ಈ ಚಿತ್ರವನ್ನು ವೀಕ್ಷಿಸಲು ಜನರಿಗೆ ಮನವಿ ಮಾಡಿದರು," ಎಂದು ಶರದ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪ್ರಸ್ತುತ ಇರುವ ದೇಶದ ಕೋಮು ಪರಿಸ್ಥಿತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.
"ಕಾಶ್ಮೀರಿ ಪಂಡಿತರ ಮೇಲಿನ ದಾಳಿಯ ಹೊಣೆಗಾರಿಕೆಯಿಂದ ಬಿಜೆಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದು-ಮುಸ್ಲಿಂ ನಡುವೆ ಬಿರುಕು ಸೃಷ್ಟಿಯಾಗುತ್ತಿರುವುದು ಕಳವಳಕಾರಿ ಸಂಗತಿ. ಹಾಗಾಗಿ ಸಮಾಜದ ಎಲ್ಲ ವರ್ಗಗಳ ಹಿತಾಸಕ್ತಿ ಕಾಪಾಡುವ ನಂಬಿಕೆ ಇರುವವರು ಒಂದಾಗುವುದು ತೀರಾ ಅಗತ್ಯವಾಗಿದೆ," ಎಂದು ಶರದ್ ಪವಾರ್ ಅಭಿಪ್ರಾಯಿಸಿದರು.
ವಿಧಾನಸಭೆ ಚುನಾವಣೆಯ ಮೇಲೆ ಬಿಜೆಪಿ ಕಣ್ಣು
ಈ ಹಿಂದೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪ ಮಾಡಿದ್ದಾರೆ. ಚಿತ್ರದಲ್ಲಿ ಹಲವಾರು "ಕಠಿಣ ಸತ್ಯಗಳನ್ನು" ಹತ್ತಿಕ್ಕುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಕೂಡಾ ಆರೋಪಿಸಿದ್ದಾರೆ.
ಗುಜರಾತ್: ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ: ಓರ್ವ ಸಾವು
ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ 'ರೋಖ್ಥೋಕ್'ನಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್, ಕಾಶ್ಮೀರಕ್ಕೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಜೆಪಿಯ ಭರವಸೆಯಾಗಿದೆ. ಆದರೆ 370 ನೇ ವಿಧಿಯನ್ನು ರದ್ದುಗೊಳಿಸಿದರೂ ಅದೇ ಸಂಭವಿಸಿಲ್ಲ. ಅದು ಯಾರ ವೈಫಲ್ಯ ಎಂದು ತಿಳಿಯಬೇಕು," ಎಂದು ಉಲ್ಲೇಖ ಮಾಡಲಾಗಿದೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದ ಪ್ರಮುಖ ಪ್ರಚಾರಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಕೂಡಾ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದರು. ಬಿಜೆಪಿಯ ಮೇಲೆ ದಾಳಿ ಮಾಡಿದ ರಾಜ್ಯಸಭಾ ಸದಸ್ಯರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದೊಂದಿಗೆ ಸಂಯೋಜಿಸುವ ಭರವಸೆ ಏನಾಯಿತು ಎಂದು ಎನ್ಡಿಎ ಕೂಟಕ್ಕೆ ಪ್ರಶ್ನೆ ಮಾಡಿದ್ದಾರೆ.
"ಕಾಶ್ಮೀರದಲ್ಲಿ ಹಿಂದೂ ಪಂಡಿತರ ಪಲಾಯನ, ಅವರ ಹತ್ಯೆಗಳು, ಅವರ ಮೇಲೆ ನಡೆದ ದೌರ್ಜನ್ಯಗಳು ಮತ್ತು ಅವರ ಕೋಪವು ಒಬ್ಬರ ಮನಸ್ಸನ್ನು ಕಲಕುವ ಕಥೆಯನ್ನು ಆಧರಿಸಿದೆ. ಆದರೆ ಅದಕ್ಕಿಂತಲೂ ಹೆಚ್ಚು ತೊಂದರೆಯುಂಟುಮಾಡುವುದು (ಕಥೆ) ಮತ್ತೆ ಹಿಂದೂ-ಮುಸ್ಲಿಮರನ್ನು ವಿಭಜಿಸುವ ಪ್ರಯತ್ನವಾಗಿದೆ. ಹಾಗೆಯೇ ಮುಂಬರುವ ಚುನಾವಣೆಗಳನ್ನು ಗೆಲ್ಲುವ ಪ್ರಯತ್ನ ಇದರಲ್ಲಿ ಇದೆ," ಎಂದರು. "ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳನ್ನು ಗೆಲ್ಲಲು ಕಾಶ್ಮೀರಿ ಪೈಲ್ಸ್ ಅನ್ನು ಬಿಡುಗಡೆ ಮಾಡಲಾಗಿದೆ," ಎಂದು ಕೂಡಾ ದೂರಿದ್ದಾರೆ.
Recommended Video