ಸುನಾಮಿ ಬರಲಿದೆ: ಜನರಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ
ಮುಂಬೈ, ನವೆಂಬರ್ 23: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೀದಿಬೀದಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗುಂಪುಗೂಡಿದ ಜನರು ಕೊರೊನಾ ವೈರಸ್ ಅನ್ನೇ ಕೊಂದು ಹಾಕಬಹುದು ಎಂದು ಭಾವಿಸಿರಬೇಕು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಲೇವಡಿ ಮಾಡಿದ್ದಾರೆ. ಹಬ್ಬದ ಅವಧಿಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಮರೆತು ಮನೆಯಿಂದ ಹೊರಬಂದು ಗುಂಪುಗೂಡಿರುವ ಜನರ ವಿರುದ್ಧ ಹರಿಹಾಯ್ದಿರುವ ಅಜಿತ್ ಪವಾರ್, ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಲು ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Recommended Video
ಮುಂದಿನ 8-10 ದಿನಗಳವರೆಗೆ ಸರ್ಕಾರವು ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದು, ಲಾಕ್ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿ ಮುಂಬೈ ನಡುವೆ ರೈಲು ಹಾಗೂ ವಿಮಾನ ಸೇವೆ ಸ್ಥಗಿತಕ್ಕೆ ನಿರ್ಧಾರ
ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ದೀಪಾವಳಿಯಂದು ಗುಂಪುಗೂಡಿದ್ದ ಜನರ ವಿರುದ್ಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಸ್ ಸೋಂಕಿನ ಹರಡುವಿಕೆಯ ಎರಡನೆಯ ಅವಧಿ ಸುನಾಮಿಯಂತೆಯೇ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
'ಲಸಿಕೆ ಬಂದ ಕೂಡಲೇ ನಮಗೆ 25 ಕೋಟಿ ಡೋಸ್ಗಳಷ್ಟು ಲಸಿಕೆ ಬೇಕಾಗಲಿದೆ' ಎಂದು ಅವರು ಹೇಳಿದ್ದಾರೆ. ಲಸಿಕೆ ಬರುವವರೆಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸ್ವಚ್ಛವಾಗಿ ಇರಿಸುವುದೇ ನಮಗೆ ಇರುವ ಕೇವಲ ಮೂರು ಪರಿಹಾರಗಳಾಗಿವೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ: ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೊನೆಗೂ ಅನುಮತಿ
'ದೀಪಾವಳಿ ಸಂದರ್ಭದಲ್ಲಿ ಭಾರಿ ದೊಡ್ಡ ಗುಂಪುಗಳು ಕಾಣಿಸಿದ್ದವು. ಬೀದಿಗಳಲ್ಲಿನ ಜನರು ವೈರಸ್ ಸಾಯಿಸಬಹುದು ಎನಿಸುವಂತಿತ್ತು. ಗಣೇಶ ಚತುರ್ಥಿ ಸಂದರ್ಭದಲ್ಲಿಯೂ ಇದೇ ರೀತಿ ಪರಿಸ್ಥಿತಿ ಇತ್ತು. ರಾಜ್ಯದಲ್ಲಿ ಎರಡನೆಯ ಅಲೆ ಅಪ್ಪಳಿಸಬಹುದು ಎಂಬ ಮುನ್ಸೂಚನೆ ನೀಡಲಾಗುತ್ತಿದೆ. ನಾವು ಸಂಬಂಧಿತ ಇಲಾಖೆಗಳ ಜತೆ ಮಾತನಾಡುತ್ತಿದ್ದೇವೆ. ಮುಂದಿನ 8-10 ದಿನಗಳವರೆಗೆ ಸನ್ನಿವೇಶವನ್ನು ಅವಲೋಕಿಸುತ್ತೇವೆ. ಲಾಕ್ಡೌನ್ ಕುರಿತು ಮುಂದಿನ ನಿರ್ಧಾರಗಳನ್ನು ಬಳಿಕ ತೆಗೆದುಕೊಳ್ಳುತ್ತೇವೆ' ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಜನರನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸದ ಉದ್ಧವ್ ಠಾಕ್ರೆ, ಜನರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ. 'ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನನಗೆ ಸಲಹೆ ನೀಡಲಾಗುತ್ತಿದೆ. ಆದರೆ ಕಾನೂನುಗಳನ್ನು ತರುವ ಬಗ್ಗೆ ನನಗೆ ನಂಬಿಕೆ ಇಲ್ಲ. ಜನರೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು' ಎಂದು ತಿಳಿಸಿದ್ದಾರೆ.