ನಮ್ಮ ಸರ್ಕಾರ ಇಡಿ, ಸಿಬಿಐ ತನಿಖೆಗೆಲ್ಲಾ ಹೆದರುವುದಿಲ್ಲ: ಉದ್ಧವ್ ಠಾಕ್ರೆ
ಮುಂಬೈ, ನವೆಂಬರ್ 27:ನಮ್ಮ ಸರ್ಕಾರವು ಇಡಿ, ಸಿಬಿಐ ತನಿಖೆಗೆಲ್ಲಾ ಹೆದರುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂದರ್ಶನ ನೀಡಿ ಮಾತನಾಡಿದ ಅವರು, ಸರ್ಕಾರಕ್ಕೆ ಜನರ ಆಶೀರ್ವಾದವಿದೆ. ಸರ್ಕಾರವನ್ನು ಇಡಿ, ಸಿಬಿಐಯಂತಹ ತನಿಖೆಗಳಿಂದ ಬೆದರಿಸಲು, ಕುಗ್ಗಿಸುವಂತಹ ಕೀಳು ರಾಜಕೀಯವನ್ನು ತೋರಿಸುವ ಅಗತ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
"ಮಹಾರಾಷ್ಟ್ರದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಯೋಜನೆ"
ಬಿಜೆಪಿ ಹಗೆತನದ ರಾಜಕೀಯದಲ್ಲಿ ತೊಡಗಿದ್ದು, ಮಹಾ ವಿಕಾಸ ಅಘಡಿ(ಎಂವಿಎ) ಸರ್ಕಾರವನ್ನು ಜಾರಿ ನಿರ್ದೇಶನಾಲಯ, ಸಿಬಿಐಯಂತಹ ತನಿಖೆಗಳಿಂದ ಬೆದರಿಸಲು ಸಾಧ್ಯವಿಲ್ಲ ಎಂದರು.
ಮಹಾರಾಷ್ಟ್ರ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಿದ್ದು ಈ ಸಂದರ್ಭದಲ್ಲಿ ಶಿವಸೇನೆ ಮುಖವಾಣಿ ಸಾಮ್ನಾಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಇತ್ತೀಚೆಗೆ ಶಿವಸೇನೆ ಸಂಸದ ಪ್ರತಾಪ್ ಸರ್ನೈಕ್ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ನಡೆದ ದಾಳಿಯಿದು.
ಇದೇ ಸಂದರ್ಭದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ತಮ್ಮ ಸರ್ಕಾರ ಪೂರ್ಣ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ತಮಗೆ ಯಾವ ಸರ್ಕಾರ ಬೇಕು ಎಂದು ಜನತೆ ತೀರ್ಮಾನ ಮಾಡುತ್ತಾರೆ ಎಂದರು.
ಕೆಲವರು ಮೂರು ಪಕ್ಷಗಳು ಒಂದಾಗಲಿಕ್ಕಿಲ್ಲ, ಒಂದಾದರೂ ಹೆಚ್ಚು ಸಮಯ ಉಳಿಯಲಿಕ್ಕಿಲ್ಲ ಎಂದು ಭಾವಿಸಿದರು. ಆದರೆ ನಾವು ಮುಂದುವರೆಯುತ್ತಿದ್ದೇವೆ, ಇನ್ನೂ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದರು.
ಹಗೆ, ದ್ವೇಷದ ದಾರಿ ಹಿಡಿಯುವುದು ನನಗೆ ಇಷ್ಟವಿಲ್ಲ. ಈ ಕೊಳಕು ರಾಜಕೀಯವನ್ನು ನಿಲ್ಲಿಸಿ ಎಂದು ವಿರೋಧ ಪಕ್ಷದ ನಾಯಕರನ್ನು ಉದ್ದೇಶಿಸಿ ಠಾಕ್ರೆ ಮಾತನಾಡಿದರು.