ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್, ಬಾಳಾಸಾಹೇಬ್ ಡಿಸಿಎಂ?
ಮುಂಬೈ, ನವೆಂಬರ್ 21: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದ್ದು, ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲು ಮುಂದಾಗಿವೆ.
ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರ ಹೆಸರು ಕೇಳಿಬರುತ್ತಿದ್ದು, ಉಪಮುಖ್ಯಮಂತ್ರಿ ಹುದ್ದೆಗೆ ಎರಡು ಹೆಸರು ಕೇಳುಬರುತ್ತಿದೆ. ಎನ್ ಸಿಪಿಯಿಂದ ಅಜಿತ್ ಪವಾರ್ ಮತ್ತು ಕಾಂಗ್ರೆಸ್ ನಿಂದ ಬಾಳಾಸಾಹೇಬ್ ಥೋರಟ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶನಿವಾರ ರಾಜ್ಯಪಾಲರಿಗೆ ಪತ್ರ ನೀಡಲಿರುವ ಶಿವಸೇನೆ-ಕಾಂಗ್ರೆಸ್-NCP
ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ 'ಮಹಾ ವಿಕಾಸ್ ಅಘದಿ' ಎಂದು ಹೆಸರಿಡಲಾಗಿದ್ದು, ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮೂರೂ ಪಕ್ಷದ ಮುಖಂಡರು ಪತ್ರ ನೀಡಲಿದ್ದಾರೆ. ಈ ವಾರಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ.
ಮೊದಲಿಗೆ ಶಿವಸೇನೆಯಿಂದ ಮುಖ್ಯಮಂತ್ರಿ ಹುದ್ದೆಗೆ ಶಾಸಕ ಆದಿತ್ಯ ಠಾಕ್ರೆ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿರುವುದರಿಂದ ಎರಡೆರಡು ಪಕ್ಷಗಳನ್ನು ಸರಿದೂಗಿಸಿಕೊಂಡು ಹೋಗುವುದು ರಾಜಕೀಯಕ್ಕೆ ಈಗಷ್ಟೇ ಕಾಲಿಟ್ಟಿರುವ ಆದಿತ್ಯ ಠಾಕ್ರೆ ಅವರಿಗೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಬಹುದು ಎನ್ನಲಾಗುತ್ತಿದೆ.
ಸೇನಾಕ್ಕೆ ಸಿಎಂ ಸ್ಥಾನ, ಎನ್ಸಿಪಿ-ಕಾಂಗ್ರೆಸ್ಸಿಗೆ 2 ಡಿಸಿಎಂ ಹೊಸ ಡೀಲ್?
ಇದಕ್ಕೂ ಮುನ್ನ ಎನ್ ಸಿಪಿ ಮಾತ್ರವೇ ಡೀಸಿಎಂ ಸ್ಥಾನ ಕೇಳಿತ್ತು. ಆದರೆ ಇದೀಗ ಕಾಂಗ್ರೆಸ್ ಸಹ ಡಿಸಿಎಂ ಸ್ಥಾನ ಕೇಳಿದ್ದು ಎರಡೂ ಪಕ್ಷದಿಂದಲೂ ಒಬ್ಬೊಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚೌಹಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಉಪಮುಖ್ಯಮಂಗತ್ರಿಯಾಗಿದ್ದ ಎನ್ ಸಿಪಿ ನಾಯಕ ಅಜಿತ್ ಪವಾರ್ ಮತ್ತೆ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಜೊತೆಗೆ ಕಾಂಗ್ರೆಸ್ ನಿಂದ ಬಾಳಾ ಸಾಹೇಬ್ ತೊರಟ್ ಉಪಮುಖ್ಯಮಂತ್ರಿಯಾಗಲಿದ್ದಾರೆ.