'ಫೋಟೋ ಶೂಟ್ಗಾಗಿ ಹೆಲಿಕಾಪ್ಟರ್ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ' - ಉದ್ದವ್ ಠಾಕ್ರೆ ಟೀಕೆ
ಮುಂಬೈ, ಮೇ 22: ತೌಕ್ತೆ ಚಂಡಮಾರುತದಿಂದಾಗಿ ಗುಜರಾತ್ನಲ್ಲಿ ಸಾಕಷ್ಟು ಹಾನಿಗೊಳಗಾಗಿದ್ದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಇದನ್ನು ಟೀಕಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ 'ಫೋಟೋ ಶೂಟ್ಗಾಗಿ ಹೆಲಿಕಾಪ್ಟರ್ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಭೇಟಿ ನೀಡಿದ್ದ ವಿಚಾರದಲ್ಲಿ ಬಿಜೆಪಿಯು ಟೀಕಿಸಿತ್ತು. ಬಿಜೆಪಿಯ ಈ ಟೀಕೆಗೆ ತಿರುಗೇಟು ನೀಡಿದ ಉದ್ಧವ್ ಠಾಕ್ರೆ, ತಾನು ಕನಿಷ್ಠ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಗಮನಿಸಿದ್ದೇನೆ, ಹೆಲಿಕಾಪ್ಟರ್ನಲ್ಲಿ ಕೂತು ವೈಮಾನಿಕ ಸಮೀಕ್ಷೆ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.
ಚಂಡಮಾರುತ ತೌಕ್ತೆ ಭೀತಿ, ಕರಾವಳಿಯ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ
ಉದ್ದವ್ ಠಾಕ್ರೆ ತೌಕ್ತೆ ಚಂಡಮಾರುತದ ಪರಿಣಾಮದ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಶುಕ್ರವಾರ ಕೊಂಕಣದ ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಭೇಟಿ ನೀಡಿ, ನಷ್ಟದ ಬಗ್ಗೆ ಎರಡು ದಿನಗಳಲ್ಲಿ ಮೌಲ್ಯಮಾಪನ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆದರೆ, ಮಹಾರಾಷ್ಟ್ರದ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉದ್ದವ್ ಠಾಕ್ರೆ ಕೇವಲ ಮೂರು ಗಂಟೆಗಳ ಕಾಲ ಸ್ಥಳದಲ್ಲಿ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲರು ಎಂದು ನನಗೆ ಆಶ್ಚರ್ಯವಾಗಿದೆ ಎಂದು ಟೀಕಿಸಿದ್ದರು.
ಈ ಟೀಕೆಗೆ ತಿರುಗೇಟು ನೀಡಿರುವ ಉದ್ದವ್ ಠಾಕ್ರೆ, ನಾನು ನಾಲ್ಕು ಗಂಟೆಗಳ ಕಾಲ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರೆ ಪರವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಹಿನ್ನೆಲೆ ನಾನು ಕನಿಷ್ಠ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಪೋಟೋ ಶೂಟ್ಗಾಗಿ ಹೆಲಿಕಾಪ್ಟರ್ನಲ್ಲಿ ತೆರಳುತ್ತಿಲ್ಲ. ನಾನೇ ನನಗೆ ಛಾಯಾಗ್ರಾಹಕ ಎಂದು ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ.
ಇನ್ನು ನಾನು ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಲು ಇಲ್ಲಿಗೆ ಬಂದಿಲ್ಲ ಎಂದು ಕೂಡಾ ಟಾಕ್ರೆ ಹೇಳಿದ್ದಾರೆ.
ತೌಕ್ತೆ ಚಂಡಮಾರುತ: ಗುಜರಾತ್ಗೆ 1000 ಕೋಟಿ ರೂ, ನೆರವು ಘೋಷಿಸಿದ ಪ್ರಧಾನಿ ಮೋದಿ
ಸೋಮವಾರ ರಾತ್ರಿ ಗುಜರಾತ್ನಲ್ಲಿ ಭೂಕುಸಿತ ಉಂಟು ಮಾಡಿದ ತೌಕ್ತೆ ಚಂಡಮಾರುತವು ಪಶ್ಚಿಮ ಕರಾವಳಿಯ ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಮೇಲೆ ಪರಿಣಾಮ ಬೀರಿದೆ.
(ಒನ್ಇಂಡಿಯಾ ಸುದ್ದಿ)