ನಾನು ಮತ್ತು ನನ್ನ ಮಗ ಇಬ್ಬರೂ ಕ್ಲೀನ್ ಇದ್ದೇವೆ: ಉದ್ಧವ್ ಠಾಕ್ರೆ
ಮುಂಬೈ, ಅಕ್ಟೋಬರ್ 26: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ವಿವಾದದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೊದಲ ಬಾರಿಗೆ ಮಾತನಾಡಿದ್ದಾರೆ. ದಸರಾ ಹಬ್ಬದ ಭಾಷಣ ಮಾಡಿರುವ ಉದ್ಧವ್ ಠಾಕ್ರೆ, ಮುಂಬೈ ವಿರುದ್ಧ ಕೀಳಾಗಿ ಮಾತನಾಡಿರುವ ಕಂಗನಾ ರಣಾವತ್ ವಿರುದ್ಧ ಹರಿಹಾಯ್ದಿದ್ದು, ತಮ್ಮ ಮಗ ಆದಿತ್ಯ ಠಾಕ್ರೆ ಹಾಗೂ ಮುಂಬೈ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ.
'ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೊಬ್ಬ ಈಗ ಬಿಹಾರದ ಮಗ. ಅವರು ಇರಬಹುದು. ಆದರೆ ಅವರ ಕಾರಣದಿಂದ ನೀವು ಮಹಾರಾಷ್ಟ್ರದ ಮಕ್ಕಳಿಗೆ ಕಳಂಕ ಉಂಟುಮಾಡಿದ್ದೀರಿ. ನೀವು ನನ್ನ ಮಗ ಆದಿತ್ಯನಿಗೆ ಕೆಟ್ಟ ಹೆಸರು ತಂದಿದ್ದೀರಿ. ಹೀಗಾಗಿ ನೀವೇನೇ ಹೇಳಿದರೂ ನಿಮ್ಮಲ್ಲಿಯೇ ಇಟ್ಟುಕೊಳ್ಳಿ.ನಾವು ಸ್ವಚ್ಛವಾಗಿದ್ದೇವೆ' ಎಂದು ಅವರು ಶಿವಸೇನಾ ಆಯೋಜಿಸಿದ್ದ ದಸರಾ ಸಮಾವೇಶದಲ್ಲಿ ತಮ್ಮ ಮೊದಲ ಭಾಷಣದಲ್ಲಿ ಅವರು ಹೇಳಿದ್ದಾರೆ.
ನಮ್ಮನ್ನು ಕೇಳದೆ ಒಳಗೆ ಬರುವಂತಿಲ್ಲ: ಸಿಬಿಐಗೆ ಮಹಾರಾಷ್ಟ್ರ ತಾಕೀತು!
'ಇಂದು ನಾವು ಹತ್ತುಮುಖಗಳ ಸಾಂಕೇತಿಕ ರಾವಣನನ್ನು ಸುಡುತ್ತಿದ್ದೇವೆ. ರಾವಣ ಒಂದು ಮುಖ ಹೇಳುತ್ತದೆ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಎಂದು' ಮುಂಬೈ ಪೊಲೀಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟೀಕಿಸಿದ್ದ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ.
ಭಾಗವತ್ ಮಾತು ಕೇಳಿ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಕಪ್ಪು ಟೋಪಿ ತೊಟ್ಟ ವ್ಯಕ್ತಿ ಎಂದು ಕರೆದ ಉದ್ಧವ್, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದೇ ಹಿಂದುತ್ವ ಅಲ್ಲ ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತುಗಳನ್ನು ಆಲಿಸುವಂತೆ ಸೂಚಿಸಿದರು. ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡದ ಉದ್ಧವ್ಗೆ ಪತ್ರ ಬರೆದಿದ್ದ ರಾಜ್ಯಪಾಲರು ನೀವು ಜಾತ್ಯತೀತರಾಗಿದ್ದೀರಿ ಎಂದು ಟೀಕಿಸಿದ್ದರು.
ಶಿವಸೈನಿಕರು ಕೆರಳಿದರೆ ನಿಮಗೇ ಕಷ್ಟ
ಸರ್ಕಾರ ಬೀಳಲಿದೆ ಎಂದು ಅನೇಕರು ಹೇಳಿದ್ದರು. ಈಗಲೂ ಹೇಳುತ್ತಿದ್ದಾರೆ. ಧೈರ್ಯವಿದ್ದರೆ ಈ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿ, ನಿಮ್ಮಿಂದ ಸಾಧ್ಯವಾಗದು. ಶಿವಸೇನಾ ಮೌನವಾಗಿದೆ. ಅದು ನಿಮಗೇ ಒಳ್ಳೆಯದು. ಒಂದು ವೇಳೆ ಅವರು ಏನಾದರೂ ಮಾಡಲು ಶುರುಮಾಡಿದರೆ ಶಿವ ಸೈನಿಕರನ್ನು ಎದುರಿಸುವುದು ನಿಮಗೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಪಾಕಿಸ್ತಾನದಲ್ಲಿದ್ದೇವೆಯೇ?
ಎನ್ಡಿಎ ವಿರುದ್ಧ ಹರಿಹಾಯ್ದ ಅವರು, ಬೀಫ್ ನಿಷೇಧ ಮಹಾರಾಷ್ಟ್ರದಲ್ಲಿ ಸಾಧ್ಯವಾಗಿದೆ, ಆದರೆ ಗೋವಾದಲ್ಲಿ ಏಕಿಲ್ಲ? ಈ ಜನರು ನನಗೆ ಹಿಂದುತ್ವ ಬೋಧಿಸುತ್ತಿದ್ದಾರೆ ಎಂದಿದ್ದಾರೆ. ಬಿಹಾರದಲ್ಲಿ ಉಚಿತ ಕೋವಿಡ್ ಲಸಿಕೆ ನೀಡಲು ನೀವು ಹೊರಟಿದ್ದೀರಿ. ಹಾಗಾದರೆ ನಾವು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ನಿತೀಶ್ಗೆ ಬಿಜೆಪಿ ಕೈಕೊಡುತ್ತದೆ
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಶುಭವಾಗಲಿ ಎಂದ ಉದ್ಧವ್, ಹರಿಯಾಣ ಚುನಾವಣೆ ವೇಳೆ ಮುಂದಿನ ಸಿಎಂ ಕುಲದೀಪ್ ಸಿಂಗ್ ಬಿಶ್ನೋಯಿ ಎಂದು ಬಿಜೆಪಿ ಹೇಳಿತ್ತು. ಅದೇ ರೀತಿ ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಬಿಜೆಪಿ ಮಾಡಿತ್ತು. ಈಗ ಬಿಹಾರ ಚುನಾವಣೆಯಲ್ಲಿಯೂ ನಿತೀಶ್ ಕುಮಾರ್ ಅವರೇ ಸಿಎಂ ಎಂದು ಹೇಳುತ್ತಿದ್ದಾರೆ. ಇದೇ ನಿತೀಶ್ 'ಸಂಘ ಮುಕ್ತ ಭಾರತ'ವನ್ನು ಬಯಸಿದ್ದರು ಎಂದು ಟೀಕಿಸಿದ್ದಾರೆ.