ಪಕ್ಷ ಬಿಡೋರು ಬಿಡಲಿ, ಹೊಸದಾಗಿ ಪಕ್ಷ ಕಟ್ತೀವಿ: ಉದ್ಧವ್ ಠಾಕ್ರೆ
ತಮ್ಮ ಪಕ್ಷದ ಪಾಲಿಕೆ ಸದಸ್ಯರ ಸಭೆಯನ್ನು ಆನ್ಲೈನ್ನಲ್ಲಿ ಉದ್ದೇಶಿಸಿ ಶುಕ್ರವಾರ ರಾತ್ರಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಶಿವಸೇನಾ ಕಾರ್ಯಕರ್ತರ ಪಡೆಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅಭಿಮಾನ ತೋರ್ಪಡಿಸಿದ್ದಾರೆ.
ಭಿನ್ನಮತೀಯ ನಾಯಕ ಏಕನಾಥ್ ಶಿಂದೆಯಾಗಲೀ ಬಿಜೆಪಿಯಾಗಲೀ ತಾಕತ್ತಿದ್ದರೆ ಶಿವಸೇನಾ ಕಾರ್ಯಕರ್ತರ ಪಡೆಯನ್ನು ಸೆಳೆದುಕೊಳ್ಳಲಿ ಎಂದೂ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ. ಶಿವಸೇನಾ ಪಕ್ಷವನ್ನು ಒಡೆಯಲು ಬಿಜೆಪಿಯಿಂದ ಅಸಾಧ್ಯ ಎಂದೂ ಠಾಕ್ರೆ ಸಿಡಿಗುಟ್ಟಿದ್ದಾರೆ.
ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!
ಶಿವಸೇನಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಭಿನ್ನಮತೀಯರನ್ನು ತರಾಟೆಗೆ ತೆಗೆದುಕೊಂಡ ಸಿಎಂ, "ನೀವೆಲ್ಲರೂ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ನಾವು ಈ ಭಿನ್ನಮತೀಯರಿಗೆ ಟಿಕೆಟ್ ಕೊಟ್ಟೆವು. ಆದರೂ ನೀವು ಶ್ರಮ ಪಟ್ಟು ಇವರನ್ನು ಗೆಲ್ಲಿಸಿದಿರಿ. ಗೆದ್ದಾಗ ಬಳಿಕ ಇವರಿಗೆ ಈಗ ಅಸಮಾಧಾನ ಶುರುವಾಗಿದೆ. ಈ ಸಂಕಷ್ಟ ಕಾಲದಲ್ಲಿ ನೀವು ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದೀರಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು" ಎಂದು ಹೇಳಿದರು.
ಬಿಜೆಪಿಯಿಂದ ಒತ್ತಡ ತಂತ್ರ
ಶಿವಸೇನಾದ ಭಿನ್ನಮತೀಯರಿಗೆ ಮೇಲೆ ಬಿಜೆಪಿ ಒತ್ತಡ ಹಾಕುತ್ತಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
"ಮೈತ್ರಿ ಪಕ್ಷಗಳ ಮೇಲಿನ ದೂರುಗಳ ಬಗ್ಗೆ ವಿಚಾರಿಸುವಂತೆ ನಾನು ಏಕನಾಥ್ ಶಿಂದೆಗೆ ತಿಳಿಸಿದ್ದೆ. ಬಿಜೆಪಿ ಜೊತೆ ಸೇನಾ ಕೈಜೋಡಿಸಬೇಕೆಂದು ಈ ಶಾಸಕರು ಒತ್ತಡ ಹಾಕುತ್ತಿದ್ದಾರೆಂದು ಶಿಂದೆ ನನಗೆ ತಿಳಿಸಿದರು. ಈ ಶಾಸಕರನ್ನು ನನ್ನ ಬಳಿ ಕರೆತನ್ನಿ, ಮಾತನಾಡೋಣ ಅಂತ ನಾನು ಹೇಳಿದೆ.
"ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತು. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈ ಭಿನ್ನಮತೀಯರಲ್ಲಿ ಅನೇಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅವರು ಬಿಜೆಪಿಗೆ ಹೋದರೆ ದೋಷಮುಕ್ತವಾಗುತ್ತಾರೆ, ನಮ್ಮ ಜೊತೆ ಇದ್ದರೆ ಜೈಲಿಗೆ ಹೋಗುತ್ತಾರೆ. ಇದೆಂಥ ಮೈತ್ರಿ?" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸಿಎಂ ಠಾಕ್ರೆ ಬಣದ ಶಾಸಕರಿಂದ ಮಹತ್ವದ ಸಭೆ
ಸಿಎಂ ಆಗುತ್ತೀರಾ, ಹೋಗಿ
ಏಕನಾಥ್ ಶಿಂದೆ ಬಿಜೆಪಿಗೆ ಬೆಂಬಲ ಕೊಡಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದ ಮಹಾರಾಷ್ಟ್ರ ಸಿಎಂ, ಬಿಜೆಪಿ ಜೊತೆಗೆ ಹೋಗಿ ಡಿಸಿಎಂ ಆದರೆ ಏನು ಉಪಯೋಗ ಎಂದು ಕೇಳಿದ್ಧಾರೆ.
"ಶಿವಸೇನಾ ಪಕ್ಷದ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಆಗುತ್ತಾರೆಂದರೆ ಬಿಜೆಪಿ ಜೊತೆ ಬೇಕಾದರೆ ಹೋಗಲಿ. ನೀವು ಡಿಸಿಎಂ ಆಗಲು ಅಲ್ಲಿಗೆ ಹೋಗುತ್ತಿದ್ದೀರೆಂದರೆ, ನನಗೆ ಹೇಳಿದ್ದರೆ ನಾನೇ ಉಪಮುಖ್ಯಮಂತ್ರಿ ಸ್ಥಾನ ಕೊಡಿಸುತ್ತಿದ್ದೆ" ಎಂದು ಏಕನಾಥ್ ಶಿಂದೆಗೆ ಸಿಎಂ ಪರೋಕ್ಷವಾಗಿ ಕಿವಿ ಹಿಂಡಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಲೂ ಸಿದ್ಧ
ಸಿಎಂ ಸ್ಥಾನಕ್ಕೆ ಯಾವಾಗ ಬೇಕಾದರೂ ಬಿಡಲು ಸಿದ್ದಗೊಂಡು ರಾಜೀನಾಮೆ ಪತ್ರ ಬರೆದು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದ ಉದ್ಧವ್ ಠಾಕ್ರೆ, ಈಗ ಪಕ್ಷದ ಅಧ್ಯಕ್ಷ ಸ್ಥಾನ ಕೂಡ ಬಿಡಲು ತಯಾರಿರುವುದಾಗಿ ಹೇಳಿದ್ದಾರೆ.
"ಪಕ್ಷ ಮುನ್ನಡೆಸಲು ನಾನು ಅಸಮರ್ಥನಿದ್ದೇನೆ ಅಂತ ಶಿವಸೇನಾ ಕಾರ್ಯಕರ್ತರಿಗೆ ಅನಿಸಿದಲ್ಲಿ ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ" ಎಂದು ಠಾಕ್ರೆ ತಿಳಿಸಿದ್ದಾರೆ.
"ಶಿವಸೇನಾ ಎಂಬುದು ಒಂದು ಸಿದ್ಧಾಂತ, ತತ್ವ. ಹಿಂದೂ ವೋಟ್ ಬ್ಯಾಂಕ್ ಅನ್ನು ಬೇರೆ ಪಕ್ಷದೊಂದಿಗೆ ಹಂಚಿಕೊಳ್ಳಲು ಬಯಸದ ಬಿಜೆಪಿ ಶಿವಸೇನೆಯನ್ನು ಮುಗಿಸಲು ಪ್ರಯತ್ನಿಸುತ್ತಿದೆ" ಎಂದು ಅವರು ಶಂಕಿಸಿದ್ದಾರೆ.
ಪಕ್ಷ ಬಿಡೋರು ಬಿಡಲಿ
ಭಿನ್ನಮತೀಯರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಠಾಕ್ರೆ, "ಈ ಬಂಡಾಯದ ಗುಂಪಿಗೆ ಬಿಜೆಪಿಯನ್ನು ಸೇರುವುದು ಬಿಟ್ಟರೆ ಸದ್ಯ ಬೇರೆ ಆಯ್ಕೆ ಇಲ್ಲ. ಒಂದು ವೇಳೆ ಸರಕಾರ ರಚಿಸಲು ಯಶಸ್ವಿಯಾದರೂ ಅದು ಹೆಚ್ಚು ಕಾಲ ಇರುವುದಿಲ್ಲ. ಯಾಕೆಂದರೆ ಬಹುತೇಕ ಶಾಸಕರಿಗೆ ಮನಃಪೂರ್ವಕವಾಗಿ ಸಮಾಧಾನ ಇಲ್ಲ. ಈ ಭಿನ್ನಮತೀಯರಿಗೆ ಮುಂದಿನ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಯೂ ಇಲ್ಲ" ಎಂದು ಹೇಳಿದ್ದಾರೆ.
ಏಕನಾಥ್ ಶಿಂದೆ ಮತ್ತು ಬಿಜೆಪಿಗೆ ಸವಾಲು ಹಾಕಿದ ಮಹಾರಾಷ್ಟ್ರ ಮುಖ್ಯಮಂತ್ರಿ, "ನೀವು ಚುನಾವಣೆಯಲ್ಲಿ ಅಯ್ಕೆಯಾದ ಜನರನ್ನು ತೆಗೆದುಕೊಂಡು ಹೋಗಿದ್ದೀರಿ. ನಿಮಗೆ ಧೈರ್ಯ ಇದ್ದರೆ ನಿಮ್ಮನ್ನು ಗೆಲ್ಲಿಸಿದವರನ್ನು ತೆಗೆದುಕೊಂಡು ಹೋಗಿರಿ" ಎಂದು ಕಾರ್ಯಕರ್ತರ ಬಗ್ಗೆ ಸವಾಲು ಹಾಕಿದ್ದಾರೆ.
"ಯಾರು ಬೇಕಾದರೂ ಮುಕ್ತವಾಗಿ ಪಕ್ಷವನ್ನು ಬಿಡಬಹುದು.... ನಾನು ಹೊಸ ಶಿವಸೇನಾ ಪಕ್ಷವನ್ನು ಕಟ್ಟುತ್ತೇನೆ" ಎಂದು ಉದ್ಧವ್ ಠಾಕ್ರೆ ಘೋಷಿಸಿದ್ಧಾರೆ.
ಮಹಾರಾಷ್ಟ್ರ ಬಿಕ್ಕಟ್ಟು ಏನು?
ಮಹಾರಾಷ್ಟ್ರದಲ್ಲಿ ಶಿವಸೇನಾದೊಳಗೆ ದೊಡ್ಡ ಭಿನ್ನಮತ ಎದ್ದಿದೆ. ಏಕನಾಥ್ ಶಿಂದೆ ನೇತೃತ್ವದಲ್ಲಿ ೪೦ಕ್ಕೂ ಹೆಚ್ಚು ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಶಿವಸೇನಾ ಪಕ್ಷ ಬಿಜೆಪಿಗೆ ಬೆಂಬಲ ನೀಡಿ ಸರಕಾರ ರಚಿಸಬೇಕೆಂಬುದು ಏಕನಾಥ್ ಶಿಂದೆಯ ಪ್ರಮುಖ ಬೇಡಿಕೆ. ಶಿವಸೇನೆ ಹಿಂದುತ್ವ ಸಿದ್ಧಾಂತವನ್ನು ಬಲಿಕೊಟ್ಟು ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದೆ ಎಂಬುದು ಇವರ ಪ್ರಮುಖ ಅಸಮಾಧಾನ. ಈ ಮಧ್ಯೆ ೧೬ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಉಪಸಭಾಪತಿಗೆ ಶಿವಸೇನಾ ಪಕ್ಷ ದೂರು ಕೊಟ್ಟಿದೆ.
(ಒನ್ಇಂಡಿಯಾ ಸುದ್ದಿ)