ಕೊರೊನಾ ಹಾಟ್ ಸ್ಪಾಟ್ ನಲ್ಲಿ ರೈಲ್ವೆ ಸಂಚಾರಕ್ಕೆ ಬೇಕಂತೆ ಅನುಮತಿ!
ಮುಂಬೈ, ಮೇ.11: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ನಡುವೆಯೇ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಭಾರತ ಲಾಕ್ ಡೌನ್ ಘೋಷಣೆ ಬಳಿಕ ಐದನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಪ್ರಧಾನಿ ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಾ.ಹರ್ಷವರ್ಧನ್, ರಾಜನಾಥ್ ಸಿಂಗ್ ಸಹ ಉಪಸ್ಥಿತಿ ವಹಿಸಿದ್ದರು.
ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!
ಕೇಂದ್ರ ಸರ್ಕಾರದ ಪ್ರಮುಖರ ಜೊತೆಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಹಾರಾಷ್ಟ್ರದ ಹಸಿರು ವಲಯಗಳಲ್ಲಿ ಇರುವ ಕಾರ್ಖಾನೆಗಳ ಪುನರ್ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದರು. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಬೈನಲ್ಲಿ ಸ್ಥಳೀಯ ರೈಲು ಸಂಚಾರಕ್ಕೆ ಅನುಮತಿ ನೀಡಲು ಸಿಎಂ ಮನವಿ ಮಾಡಿಕೊಂಡರು.
ಕೇಂದ್ರದಿಂದ ಮಾರ್ಗಸೂಚಿ ಘೋಷಿಸುವಂತೆ ಮನವಿ:
ಭಾರತ ಲಾಕ್ ಡೌನ್ ಸಂಬಂಧ ಕೇಂದ್ರ ಸರ್ಕಾರವೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ಘೋಷಿಸಬೇಕು. ರಾಜ್ಯ ಸರ್ಕಾರವು ಅದನ್ನು ಚಾಚು ತಪ್ಪದೇ ಪಾಲಿಸುತ್ತದೆ ಎಂದ ಉದ್ಧವ್ ಠಾಕ್ರೆ, ಜಿಎಸ್ ಟಿ ವಿಚಾರವನ್ನು ಸಹ ಪ್ರಸ್ತಾಪಿಸಿದರು. ಇನ್ನು, ಮುಂಬೈನಲ್ಲಿ ಸ್ಥಳೀಯ ರೈಲು ಸಂಚಾರಕ್ಕೆ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಅದೇ ಮಹಾನಗರ ಮುಂಬೈನಲ್ಲಿ ಸೋಮವಾರ 791 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 14,355ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಇದುವರೆಗೂ ಸೋಂಕಿಗೆ 538 ಮಂದಿ ಪ್ರಾಣ ಬಿಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಮವಾರ ಒಂದೇ ದಿನ 1,230 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 36 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ಒಂದರಲ್ಲೇ 23,401 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇದುವರೆಗೂ 868 ಜನರು ಕೊವಿಡ್-19 ನಿಂದ ಪ್ರಾಣ ಬಟ್ಟಿದ್ದಾರೆ.