ಕೋಶ್ಯಾರಿ-ಉದ್ಧವ್ ಸಂಘರ್ಷ ತೀವ್ರ: ರಾಜ್ಯಪಾಲರ ವಿಮಾನ ಪ್ರಯಾಣಕ್ಕೆ ಅನುಮತಿ ನೀಡದ ಮಹಾರಾಷ್ಟ್ರ
ಮುಂಬೈ, ಫೆಬ್ರವರಿ 11: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ನಡುವಿನ ಸಂಘರ್ಷ ಮತ್ತೊಮ್ಮೆ ಭುಗಿಲೆದ್ದಿದೆ. ಸರ್ಕಾರ ರಚನೆಯಾದ ಸಂದರ್ಭದಿಂದಲೂ ಇಬ್ಬರ ಮಧ್ಯೆ ಆಡುತ್ತಿದ್ದ ಅಸಮಾಧಾನದ ಹೊಗೆ ಮತ್ತಷ್ಟು ದಟ್ಟವಾಗುವ ಲಕ್ಷಣಗಳು ಕಂಡುಬಂದಿವೆ. ಡೆಹ್ರಾಡೂನ್ಗೆ ತೆರಳಲು ರಾಜ್ಯಪಾಲ ಕೋಶ್ಯಾರಿ ಅವರು ರಾಜ್ಯ ಸರ್ಕಾರದ ವಿಮಾನ ಬಳಸುವುದಕ್ಕೆ ಉದ್ಧವ್ ಠಾಕ್ರೆ ಗುರುವಾರ ಅನುಮತಿ ನಿರಾಕರಿಸಿದ್ದಾರೆ.
ಮುಂಬೈ ವಿಮಾನನಿಲ್ದಾಣದ ಲಾಂಜ್ನಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಕಾದಿದ್ದ ರಾಜ್ಯಪಾಲರು, ಬಳಿಕ ವಿಮಾನವೇರಿದ ನಂತರವೂ ಹದಿನೈದು ನಿಮಿಷ ಕಾದಿದ್ದರು. ಇದರ ಬಳಿಕ ವಿಮಾನದ ಕ್ಯಾಪ್ಟನ್, ವಿಮಾನ ಚಲಾಯಿಸಲು ತಮಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಬೇಸರಗೊಂಡ ಕೋಶ್ಯಾರಿ ಉತ್ತರಾಖಂಡಕ್ಕೆ ವಾಣಿಜ್ಯ ವಿಮಾನದಲ್ಲಿ ಟಿಕೆಟ್ ಪಡೆದು ತೆರಳಿದರು.
ರಾಜ್ಯಪಾಲರ ಕಚೇರಿಯು ಈ ಪ್ರಯಾಣದ ಬಗ್ಗೆ ರಾಜ್ಯ ಸರ್ಕಾರಕ್ಕೆ ಒಂದು ವಾರದ ಹಿಂದೆಯೇ ಮಾಹಿತಿ ನೀಡಿತ್ತು. ಆದರೂ ಅನುಮತಿ ಸಿಗದೆ ಇರುವುದು ಅಸ್ವಾಭಾವಿಕ ನಡೆ ಎಂದು ಮೂಲಗಳು ತಿಳಿಸಿವೆ. ಮುಂದೆ ಓದಿ.
ಮಾಹಿತಿ ಇಲ್ಲ ಎಂದ ಅಜಿತ್ ಪವಾರ್
ರಾಜ್ಯಪಾಲರಿಗೆ ವೈಮಾನಿಕ ಸೇವೆ ನೀಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದು ತಮಗೆ ತಿಳಿದಿಲ್ಲ. ಈ ಬಗ್ಗೆ ಸಚಿವಾಲಯಕ್ಕೆ ತೆರಳಿ ಅವರಿಂದ ಮಾಹಿತಿ ಪಡೆಯುವುದಾಗಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೇವಾಲಯ ತೆರೆಯುವ ವಿವಾದ
ಕೋವಿಡ್ ಲಾಕ್ಡೌನ್ ಸಡಿಲಗೊಂಡ ಬಳಿಕ ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮರು ತೆರೆಯುವ ವಿಚಾರವಾಗಿ ಕೋಶ್ಯಾರಿ ಮತ್ತು ಉದ್ಧವ್ ನಡುವೆ ಅಕ್ಟೋಬರ್ ತಿಂಗಳಲ್ಲಿ ತೀವ್ರ ವಾಗ್ಯುದ್ಧ ನಡೆದಿತ್ತು. ದೇಶದ ಬೇರೆ ರಾಜ್ಯಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಮತಕ್ಕಾಗಿ ಹಿಂದುತ್ವ ಪ್ರತಿಪಾದಿಸುತ್ತಿದ್ದ ಮುಖ್ಯಮಂತ್ರಿ ಜಾತ್ಯತೀತರಾಗಿದ್ದಾರೆ ಎಂದು ಕೋಶ್ಯಾರಿ ವ್ಯಂಗ್ಯಭರಿತ ಪತ್ರ ಬರೆದಿದ್ದು ವಿವಾದ ಸೃಷ್ಟಿಸಿತ್ತು.
ಉದ್ಧವ್ ಹುದ್ದೆಗೆ ಕಂಟಕ
ಇದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಉದ್ಧವ್ ಠಾಕ್ರೆ ಅವರನ್ನು ರಾಜ್ಯ ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡುವ ರಾಜ್ಯ ಸಂಪುಟದ ಶಿಫಾರಸ್ಸನ್ನು ಒಪ್ಪಿಕೊಳ್ಳಲು ಕೋಶ್ಯಾರಿ ನಿರಾಕರಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳ ಒಳಗೆ ವಿಧಾನಸಭೆ ಅಥವಾ ವಿಧಾನಪರಿಷತ್ನಿಂದ ಆಯ್ಕೆಯಾಗದೆ ಹೋಗಿದ್ದರೆ ಉದ್ಧವ್ ಹುದ್ದೆಗೆ ಸಂವಿಧಾನದ ನಿಯಮದಡಿ ಸಂಚಕಾರ ಬರುತ್ತಿತ್ತು.
ಚರ್ಚೆಗೆ ಗ್ರಾಸವಾದ ಕೋಶ್ಯಾರಿ ನಡೆಗಳು
ಕೋಶ್ಯಾರಿ ಅನೇಕ ವಿವಾದಾತ್ಮಕ ನಿರ್ಧಾರಗಳಿಂದ ಚರ್ಚೆಗೊಳಗಾಗಿದ್ದಾರೆ. ಕೆಲವು ಬಾರಿ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ರಾಜ್ಯ ಸಂಪುಟದ ಸಭೆಯ ನಿರ್ಧಾರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ತಮ್ಮ ಕಚೇರಿಯನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನಾ ನೇತೃತ್ವದ ಮುಂಬೈ ಪಾಲಿಕೆ ವಿರುದ್ಧ ದೂರು ನೀಡಿದ್ದ ನಟಿ ಕಂಗನಾ ರಣಾವತ್ ಜತೆ ಚರ್ಚೆ ನಡೆಸಿದ್ದು, ಉದ್ಧವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಶಿವಸೇನಾದಿಂದ ಹಲ್ಲೆಗೊಳಗಾಗಿದ್ದ ನಿವೃತ್ತ ನೌಕಾಧಿಕಾರಿಯನ್ನು ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.