ಸಿಎಎ ಬಗ್ಗೆ ಮಾತು: ಠಾಣೆಗೆ ಕರೆದೊಯ್ದು ಧಮ್ಕಿ ಹಾಕಿದ ಊಬರ್ ಚಾಲಕ
ಮುಂಬೈ, ಫೆಬ್ರವರಿ 07: ಕವಿ, ಹಾಡುಗಾರ ಬಪ್ಪಾದಿತ್ಯಾ ಸರ್ಕಾರ್ ಅವರನ್ನು ಊಬರ್ ಚಾಲಕನೊಬ್ಬ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಂಧಿಸುವಂತೆ ಒತ್ತಾಯಿಸಿದ್ದಾನೆ.
ಜೈಪುರದಿಂದ ಮುಂಬೈ ಗೆ ಬಂದಿದ್ದ ಬಪ್ಪಾದಿತ್ಯಾ ಊಬರ್ ಬುಕ್ ಮಾಡಿದ್ದಾರೆ. ಊಬರ್ ನಲ್ಲಿ ಕೂತು ಗೆಳೆಯನಿಗೆ ಕರೆ ಮಾಡಿ ಶಾಹೀನ್ ಬಾಗ್, ಜೈಪುರದಲ್ಲಿ ನಡೆದ ಸಿಎಎ ಪ್ರತಿಭಟನೆಯ ಬಗ್ಗೆ ಮಾತನಾಡಿದ್ದಾರೆ.
'ಶಾಹೀನ್ ಬಾಗ್ ನ ಲಾಲ್ ಸಲಾಮ್ ಘೋಷಣೆಗಳು ಕೆಲವರಿಗೆ ಅಸಮಾಧಾನ ತಂದಿದೆ, ಮುಂಬೈ-ಜೈಪುರದ ಪ್ರತಿಭಟನೆಗಳು ಜನರ ಪ್ರತಿಭಟನೆಗಳಾಗಿರಬೇಕು' ಎಂದಿತ್ಯಾದಿ ಮಾತುಗಳನ್ನು ಬಪ್ಪಾದಿತ್ಯಾ ಅವರು ಗೆಳೆಯನೊಂದಿಗೆ ಮಾತನಾಡಿದ್ದಾರೆ.
ಸ್ವಲ್ಪ ದೂರ ಹೋದ ನಂತರ ಊಬರ್ ಚಾಲಕ, 'ಸರ್ ಎಟಿಎಂ ಗೆ ಹೋಗಿ ಬರುತ್ತೇನೆ' ಎಂದು ಹೇಳಿ ಕಾರು ಇಳಿದು ಹೋದವ, ಇಬ್ಬರು ಪೊಲೀಸರನ್ನು ಕರೆದುಕೊಂಡು ಬಂದು, 'ಬಂಧಿಸಿ ಇವನನ್ನು ಇವನು ಮುಂಬೈ ಗೆ ಬೆಂಕಿ ಇಡುತ್ತಾನಂತೆ' ಎಂದು ಜೋರಾಗಿ ಕೂಗಾಡಿದ್ದಾನೆ.
ಪೊಲೀಸರು ಕವಿ ಬಪ್ಪಾದಿತ್ಯಾರನ್ನು ಠಾಣೆಗೆ ಕರೆದೊಯ್ದು ಹಲವು ಪ್ರಶ್ನೆಗಳನ್ನು ಮಾಡಿದ್ದಾರೆ. ಬಪ್ಪಾದಿತ್ಯಾ 'ನಾನು ಮುಂಬೈ ಗೆ ಬೆಂಕಿ ಹಚ್ಚುತ್ತೇನೆ' ಎಂದಿದ್ದರೆ ನನ್ನನ್ನು ಬಂಧಿಸಿ ಅಡ್ಡಿಯಿಲ್ಲ ಎಂದೇ ಹೇಳಿದ್ದಾರೆ.
ಈ ಸಮಯದಲ್ಲಿ ಊಬರ್ ಚಾಲಕ, ಬಪ್ಪಾದಿತ್ಯಾರನ್ನು 'ದೇಶದ್ರೋಹಿ, ನೀವು ದೇಶವನ್ನು ಹಾಳು ಮಾಡುತ್ತೀರಿ, ನಾವು ನೋಡಿಕೊಂಡು ಸುಮ್ಮನಿರುತ್ತೇವೆ ಎಂದುಕೊಂಡಿರಾ?' ಎಂದದ್ದಲ್ಲದೇ ಹಲವು ಪದಗಳನ್ನು ಬಳಸಿ ನಿಂದಿಸಿದ್ದಾನೆ.
'ನಿನ್ನನ್ನು ಬೇರೆ ಎಲ್ಲಿಗೆ ಬೇಕಾದರೂ ನಾನು ಕರೆದುಕೊಂಡು ಹೋಗಬಹುದಿತ್ತು. ಆದರೆ ಠಾಣೆಗೆ ಕರೆದುಕೊಂಡು ಬಂದಿದ್ದೇನೆ ಸಂತೋಶಪಡು' ಎಂದು ಎಚ್ಚರಿಕೆಯನ್ನೂ ನೀಡಿದ್ದಾನೆ. ಊಬರ್ ಚಾಲಕನ ಈ ಮಾತು ಕೇಳಿ ಭಯಗೊಂಡಿದ್ದಾಗಿ ಬಪ್ಪಾದಿತ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬಪ್ಪಾದಿತ್ಯಾರನ್ನು ಪ್ರಶ್ನೆ ಮಾಡಿದ ಪೊಲೀಸರು, 'ನೀವು ತಮಟೆಯನ್ನು ಏಕೆ ಇಟ್ಟುಕೊಂಡಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಬಪ್ಪಾದಿತ್ಯಾ, ತಾವು ಕವಿ, ಹಾಡುಗಾರ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೂ ಸುಮಾರು ಗಂಟೆ ನಡೆದ ವಿಚಾರಣೆಯಲ್ಲಿ ಈ ಪ್ರಶ್ನೆಯನ್ನು ಆಗಾಗ್ಗೆ ಪೊಲೀಸರು ಮಾಡಿದ್ದಾರೆ.
ಪೊಲೀಸರು ಶಾಂತವಾಗಿಯೇ ವರ್ತಿಸಿದರು ಎಂದು ಬರೆದಿರುವ ಬಪ್ಪಾದಿತ್ಯಾ, 'ಪೊಲೀಸರು ನನ್ನ ತಂದೆಯ ಉದ್ಯೋಗ, ಅವರ ಸಂಬಳ, ನಾನು ಉದ್ಯೋಗ ಮಾಡದೆ ಹೇಗೆ ಹಣ ಸಂಪಾದಿಸುತ್ತೇನೆ, ಯಾವ ರೀತಿಯ ಕವನಗಳನ್ನು ಬರೆಯುತ್ತೇನೆ' ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು ಎಂದು ಬರೆದುಕೊಂಡಿದ್ದಾರೆ.
'ನೀವು ಕೆಂಪು ಶಾಲು ಹಾಕಿಕೊಂಡು, ತಮಟೆ ಹಿಡಿದುಕೊಂಡು ಓಡಾಡಬೇಡಿ, ಸಮಯ ಸರಿ ಇಲ್ಲ, ಏನಾದರೂ ಹೆಚ್ಚು ಕಡಿಮೆ ಆಗಬಹುದು' ಎಂದು ಪೊಲೀಸರು ಬಪ್ಪಾದಿತ್ಯಾ ಗೆ ಸಲಹೆ ನೀಡಿದ್ದಾರೆ.
ಊಬರ್ ಚಾಲಕನ ಧಮ್ಕಿಯಿಂದ ಆತಂಕಕ್ಕೆ ಒಳಗಾಗಿದ್ದ ಬಪ್ಪಾದಿತ್ಯಾ ನಂತರ ತಮ್ಮ ಹೋಟೆಲ್ ರೂಂ ಬದಲಾಯಿಸಿದ್ದಾರೆ.