ಮಹಾರಾಷ್ಟ್ರದ ಇಬ್ಬರು ವೈದ್ಯರ ಬಳಿ ಕೊರೊನಾ ಸೋಂಕಿಗೆ ಮದ್ದು!
ಮುಂಬೈ, ಮಾರ್ಚ್.19: ಕೊರೊನಾ ವೈರಸ್ ನಿಂದ ಜನರು ನಿತ್ಯ ಭಯದಲ್ಲೇ ಕಾಲ ಕಳೆಯುವಂತಾ ಪರಿಸ್ಥಿತಿ ವಿಶ್ವದಾದ್ಯಂತ ನಿರ್ಮಾಣವಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ನೋಡಿದ ಇಬ್ಬರು ವೈದ್ಯರನ್ನು ಮಹಾರಾಷ್ಟ್ರ ಪೊಲೀಸರು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.
ಕೊರೊನಾ ವೈರಸ್ ಗುಣಪಡಿಸುವಂತಾ ಔಷಧಿಯು ತಮ್ಮಲ್ಲಿ ಇದೆ ಎಂದು ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ವಸೈ ಮತ್ತು ನಾಲಾ ಸೊಪಾರಾ ಪ್ರದೇಶದಲ್ಲಿ ವೈದ್ಯರು ಕೊರೊನಾ ವೈರಸ್ ಗೆ ಔಷಧಿ ತಮ್ಮಲ್ಲಿ ದೊರೆಯುತ್ತದೆ ಎಂದು ಬ್ಯಾನರ್ ಗಳನ್ನು ಹಾಕಿದ್ದರು ಎನ್ನಲಾಗಿದೆ.
ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ
ಭಾರತದಲ್ಲೇ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರು ಮಹಾರಾಷ್ಟ್ರದಲ್ಲಿ ಇದ್ದಾರೆ. 42 ಜನರಿಗೆ ಮಹಾಮಾರಿ ಸೋಂಕು ತಗಲಿರುವುದು ಇದುವರೆಗೂ ದೃಢಪಟ್ಟಿದ್ದು, ಇದರಲ್ಲಿ ಮೂವರು ವಿದೇಶಿಗರು ಇದ್ದಾರೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ:
ಭಾರತದಲ್ಲಿ ಗುರುವಾರ ಒಂದೇ ದಿನ 28 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢ ಪಟ್ಟಿದೆ. ಪಂಜಾಬ್ ನಲ್ಲಿ ಒಬ್ಬ ವ್ಯಕ್ತಿ ಕೊವಿಡ್ 19ಗೆ ಬಲಿಯಾಗಿದ್ದು, 197 ಮಂದಿ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೂ 20 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.