TRP ಹಗರಣ; ಬಾರ್ಕ್ ಸಿಇಒಗೆ ಮತ್ತೆ ಜಾಮೀನು ನಿರಾಕರಣೆ
ಮುಂಬೈ, ಜನವರಿ 20: ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಇನ್ನಷ್ಟು ವಿಚಾರಣೆ ಅಗತ್ಯವಿರುವ ಕಾರಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಅರ್ಜಿ ನಿರಾಕರಿಸುತ್ತಿದ್ದಂತೆ ದಾಸ್ ಗುಪ್ತಾ ಸೆಷನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಆ ಅರ್ಜಿಯೂ ತಿರಸ್ಕೃತಗೊಂಡಿದೆ.
ಟಿಆರ್ಪಿ ಹಗರಣ; ಅರ್ನಬ್ ಗೋಸ್ವಾಮಿಯಿಂದ ಲಕ್ಷ ಲಕ್ಷ ಲಂಚ?
ಕಳೆದ ಡಿಸೆಂಬರ್ 24ರಂದು ದಾಸ್ ಗುಪ್ತಾರನ್ನು ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ರಿಪಬ್ಲಿಕ್ ಹಾಗೂ ಆರ್ ಭಾರತ್ ಚಾನೆಲ್ ಗಳಿಗೆ ನೆರವಾಗಲು ಕೆಲವು ಚಾನೆಲ್ ಗಳ ಟಿಆರ್ ಪಿ ತಿರುಚಿ ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು.
ರಿಪಬ್ಲಿಕ್ ಟಿ.ವಿ. ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರೊಂದಿಗೆ ಇವರು ನಿರಂತರ ಸಂಪರ್ಕದಲ್ಲಿದ್ದರು. ರಿಪಬ್ಲಿಕ್ ಟಿ.ವಿ.ಗೆ ಟಿಆರ್ ಪಿ ಸಿಗುವಂತೆ ಮಾಡುವ ಸಲುವಾಗಿ ಆರು ಬಾರಿ ಇಬ್ಬರೂ ಭೇಟಿಯಾಗಿದ್ದರು. ಜೊತೆಗೆ ಟಿಆರ್ಪಿ ಮಾಪನದ ಗೌಪ್ಯ ಮಾಹಿತಿಯನ್ನು ಅರ್ನಬ್ ಗೋಸ್ವಾಮಿಯೊಂದಿಗೆ ದಾಸ್ ಗುಪ್ತಾ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಈಚೆಗೆ ಫೆಬ್ರುವರಿ 26, 2019ರಲ್ಲಿ ನಡೆದ ಬಾಲಾಕೋಟ್ ದಾಳಿ ಸಂಬಂಧ ಅರ್ನಬ್ ಗೋಸ್ವಾಮಿ ಹಾಗೂ ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್ ಸೋರಿಕೆಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.