ಮೋದಿ ಆಡಳಿತದಲ್ಲಿ ತ್ರಿವರ್ಣಧ್ವಜ ಹಾರಿಸಿದ್ದಕ್ಕಿಂತ ಹೊದಿಸಿದ್ದೇ ಹೆಚ್ಚು, ಶಿವಸೇನೆ
ಮುಂಬೈ, ಫೆ 18: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಗೆ ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದರೆ, ಶಿವಸೇನೆ, ಪ್ರಧಾನಿ ಮೋದಿಯವರನ್ನು ಕಟು ಶಬ್ದದಿಂದ ಟೀಕಿಸುವುದನ್ನು ಮುಂದುವರಿಸಿದೆ.
ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ
ಪೊಲ್ವಾಮಾ ಘಟನೆಯನ್ನು ಉಲ್ಲೇಖಿಸಿ, ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಮೋದಿ ಸರಕಾರದ ಕಾರ್ಯವೈಖರಿಯ ಬಗ್ಗೆ ಟೀಕಾಪ್ರಹಾರ ಮಾಡಿರುವ ಶಿವಸೇನೆ, ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಿಂತ ಹೆಚ್ಚಾಗಿ, ಮೋದಿ ಸರಕಾರ ಯೋಧರ ಶವಪೆಟ್ಟಿಗೆಗೆ ಹೊದಿಸಿದ್ದೇ ಹೆಚ್ಚು ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಸಿಆರ್ ಪಿಎಫ್ ಮೇಲೆ ಉಗ್ರರ ದಾಳಿಯ ಐದು ದಿನಗಳ ನಂತರ ಶಿವಸೇನೆಯಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ. ದೇಶದಲ್ಲಿ ಯುದ್ದದ ಯಾವುದೇ ವಾತಾವರಣವಿಲ್ಲ, ಆದರೂ ನಮ್ಮ ಯೋಧರು ಶತ್ರುಗಳಿಂದ ಹುತಾತ್ಮರಾಗುತ್ತಿರುವುದು ವಿಷಾದನೀಯ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.
ಲೋಕ ಸಮರ: ಬಿಜೆಪಿ-ಶಿವಸೇನಾ ಮೈತ್ರಿ, ಅಮಿತ್ ಶಾ ಚಾಣಾಕ್ಷ ನಡೆ
ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ದೂಷಿಸಿಕೊಂಡು ಇರುವ ಬದಲು, ದೇಶಕ್ಕಾಗಿ ನಾವು ಒಗ್ಗಟ್ಟಾಗಬೇಕಿದೆ, ನಮ್ಮ ಸೈನಿಕರಿಗೆ ನಾವು ಬಲತುಂಬ ಬೇಕಾಗಿದೆ. ಪುಲ್ವಾಮಾ ಘಟನೆಯ ರೀತಿಯ ದಾಳಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲೂ ಆಗಿತ್ತು. ಆದರೆ, ಆ ವೇಳೆ ನರೇಂದ್ರ ಮೋದಿ ಕಾಂಗ್ರೆಸ್ ಸರಕಾರವನ್ನು ಟೀಕಿಸುವುದರಲ್ಲಿ ನಿರತರಾಗಿದ್ದರು ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
ದೇಶದ ಪ್ರತಿಯೊಬ್ಬ ನಾಗರೀಕನು ಕೇಂದ್ರ ಸರಕಾರದ ಮುಂದಿನ ನಡೆ ಏನಿರಲಿದೆ ಎಂದು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. 1971ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಯಾವರೀತಿ ಶತ್ರು ರಾಷ್ಟ್ರದ ಮೇಲೆ, ಪ್ರತೀಕಾರ ತೀರಿಸಿಕೊಂಡಿದ್ದರು ಎನ್ನುವುದನ್ನು ಪ್ರಧಾನಿ ಅರಿತುಕೊಳ್ಳಬೇಕು ಎಂದು ನರೇಂದ್ರ ಮೋದಿಗೆ ಸಲಹೆಯನ್ನು ನೀಡಲಾಗಿದೆ.
1971ರಲ್ಲಿ ಭಾರತದ ಸೈನಿಕರು ಲಾಹೋರ್ ಗೆ ನುಗ್ಗಿ, ಲಕ್ಷಾಂತರ ಪಾಕಿಸ್ತಾನಿಗಳು ಮಂಡಿಯೂರುವಂತೆ ಮಾಡಿದ್ದರು ಎಂದು ಅಂದಿನ ಘಟನೆಯನ್ನು ತಮ್ಮ ಸಂಪಾದಕೀಯದಲ್ಲಿ ಶಿವಸೇನೆ ಉಲ್ಲೇಖಿಸಿದೆ.