ಮರಾಠಾ ಮೀಸಲಾತಿಗೆ ಆಗ್ರಹಿಸಿ ಇಂದು ಮಹಾರಾಷ್ಟ್ರ ಬಂದ್
ಮುಂಬೈ, ಆಗಸ್ಟ್ 09: ಮಹಾರಾಷ್ಟ್ರದ ಪ್ರಮುಖ ಮರಾಠಾ ಸಂಘಟನೆಯಾದ ಸಕಲ ಮರಾಠಾ ಸಮಾಜವು ಇಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದೆ.
ಬಂದ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಮರಾಠಿಗರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಕೋರಿ ಇತ್ತೀಚೆಗಷ್ಟೇ, ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಅದರದೇ ಮುಂದುವರಿದ ರೂಪ ಎಂಬಂತೆ, ಮರಾಠಿಗರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇಂದು ಬಂದ್ ನಡೆಸಲಾಗುತ್ತಿದೆ.
ಮಹಾರಾಷ್ಟ್ರ ಬಂದ್: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು
ಬಂದ್ ಗೆ ಸಕಲ ಮರಾಠ ಸಮಾಜದೊಂದಿಗೆ ವಿವಿಧ ಮರಾಠಾ ಸಂಘಟನೆಗಳು ಬೆಂಬಲ ನೀಡಿವೆ. ಬಂದ್ ಅನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಸಲಾಗುವುದು. ಶಾಂತಿಯುತ ಪ್ರತಿಭಟನೆಯಿಂದಲೇ ಬಂದ್ ನಡೆಯಲಿದೆ, ಹಿಂಸಾಚಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಬಂದ್ ಆಯೋಜಕರು ಭರವಸೆ ನೀಡಿದ್ದಾರೆ. ಆದರೂ ರಾಜ್ಯದಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಮರಾಠ ಮೀಸಲಾತಿಗೆ ಆಗ್ರಹಿಸಿ ಇತ್ತೀಚೆಗಷ್ಟೇ 27 ವರ್ಷ ವಯಸ್ಸಿನ ಕಾಕಾಸಾಹೇಬ್ ಶಿಂಧೆ ಎಂಬ ಯುವಕ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಮರಾಠಾ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು.