ಮುಸ್ಲಿಂ ಸಮುದಾಯದ ಹಿಂಜರಿಕೆ ಹೊಗಲಾಡಿಸಲು ಸಲ್ಮಾನ್ ಖಾನ್ ಮಹಾರಾಷ್ಟ್ರ ಲಸಿಕೆ ರಾಯಭಾರಿ
ಮುಂಬೈ, ನವೆಂಬರ್ 17: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ನೀಡಿಕೆ ವೇಗವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ರನ್ನು ಕೋವಿಡ್ ಲಸಿಕೆ ರಾಯಭಾರಿಯನ್ನಾಗಿ ಮಾಡಲು ಬುಧವಾರ ನಿರ್ಧಾರ ಮಾಡಿದೆ. ಪ್ರಮುಖವಾಗಿ ಮುಸ್ಲಿಂ ಸಮುದಾಯದ ಜನರಲ್ಲಿ ಲಸಿಕೆ ಹಿಂಜರಿಕೆಯನ್ನು ತೊಡೆದು ಹಾಕಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ ರಾಜ್ಯ ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪೆ, "ಮುಸ್ಲಿಂ ಸಮುದಾಯವು ಅಧಿಕವಾಗಿ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಪಡೆಯುವುದರಲ್ಲಿ ಹಿಂಜರಿಕೆಯು ಹೆಚ್ಚಾಗಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವೊಲಿಸಲು ಮಹಾರಾಷ್ಟ್ರ ಸರ್ಕಾರವು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹಾಯವನ್ನು ಪಡೆಯುತ್ತದೆ," ಎಂದು ಹೇಳಿದ್ದಾರೆ.
ಮಹಾ ಚುನಾವಣೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಶಿವಸೇನೆ ಸೇರಿದ್ದೇಕೆ?
"ಮಹಾರಾಷ್ಟ್ರ ಸರ್ಕಾರವು ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮದ ವೇಗವನ್ನು ಇನ್ನಷ್ಟು ಅಧಿಕ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ನೀಡಿಕೆ ವೇಗವಾಗಿ ಸಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ವೇಗದಲ್ಲಿ ಹಿನ್ನೆಡೆ ಇದೆ," ಎಂದು ಕೂಡಾ ಮಹಾರಾಷ್ಟ್ರ ಆರೋಗ್ಯ ಸಚಿವರು ತಿಳಿಸಿದರು.
"ಮುಸ್ಲಿಮರು ಅಧಿಕವಾಗಿರುವ ಪ್ರದೇಶದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯುವಲ್ಲಿ ಹಿಂಜರಿಕೆಯು ಇದೆ. ಆದ್ದರಿಂದ ನಾವು ಸಲ್ಮಾನ್ ಖಾನ್ ಹಾಗೂ ರಾಜಕೀಯ ನಾಯಕರುಗಳ ಸಹಾಯದೊಂದಿಗೆ ಈ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯವನ್ನು ಕೋವಿಡ್ ಲಸಿಕೆ ಪಡೆಯುವಂತೆ ಮನವೊಲಿಕೆ ಮಾಡಲು ಮುಂದಾಗಿದ್ದೇವೆ," ಎಂದು ಮಾಹಿತಿ ನೀಡಿದರು.
ಲಸಿಕೆ ಪಡೆಯಲು ಮುಸ್ಲಿಮರ ಹಿಂಜರಿಕೆ: ಅಧ್ಯಯನ
2021 ರ ಮೇ 1 ರಂದು ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಕೋವಿಡ್ ಲಸಿಕೆಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಆರಂಭದಲ್ಲಿ ಹಲವಾರು ಮಂದಿಗೆ ಕೋವಿಡ್ ಮೂಲಕ ಕೋವಿಡ್ ಲಸಿಕೆಯನ್ನು ಬುಕ್ ಮಾಡುವ ಲಸಿಕೆ ಲಭ್ಯವಿಲ್ಲದ ಕಾರಣ ತೊಂದರೆ ಉಂಟಾಗಿತ್ತು. ದೇಶದಲ್ಲಿ ಕೋವಿಡ್ ಲಸಿಕೆಯ ಕೊರತೆ ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ರಾಜ್ಯಗಳ ಕೈಗೆ ಕೋವಿಡ್ ಲಸಿಕೆ ಅಭಿಯಾನದ ಜವಾಬ್ದಾರಿಯನ್ನು ನೀಡಲಾಯಿತು. ಇನ್ನು YouGov-Mint-CPR Millennial ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ವಿವಿಧ ಧಾರ್ಮಿಕ ಗುಂಪುಗಳಲ್ಲಿ ಕೋವಿಡ್ ಲಸಿಕೆಯನ್ನು ಪಡೆಯುವಲ್ಲಿ ಹಿಂಜರಿಕೆಯು ಇದೆ. ಸಮೀಕ್ಷೆಯ ಪ್ರಕಾರ, 66.7 ಪ್ರತಿಶತ ಹಿಂದೂಗಳು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಇನ್ನೊಂದೆಡೆ ಕೇವಲ ಶೇಕಡ 50 ಪ್ರತಿಶತದಷ್ಟು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ.
ಸಿಹಿಸುದ್ದಿ: ಲಸಿಕೆ ಪಡೆದ ಭಾರತೀಯರಿಗೆ ಸಿಂಗಪುರದಲ್ಲಿಲ್ಲ ಕ್ವಾರಂಟೈನ್
ಇನ್ನು 5.7 ರಷ್ಟು ಹಿಂದೂಗಳಿಗೆ ಲಸಿಕೆ ಬಗ್ಗೆ ಖಚಿತತೆ ಇಲ್ಲ. ಆದರೆ ಶೇಕಡ 13.3 ರಷ್ಟು ಮುಸ್ಲಿಮರಿಗೆ ಕೋವಿಡ್ ಲಸಿಕೆ ಬಗ್ಗೆ ಖಚಿತತೆ ಇಲ್ಲ ಎಂದು YouGov-Mint-CPR Millennial ಸಮೀಕ್ಷೆ ಹೇಳುತ್ತದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಮುಸ್ಲಿಮರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ. "ಧಾರ್ಮಿಕ ನಾಯಕರುಗಳು ಹಾಗೂ ಸಿನೆಮಾ ನಟರುಗಳು ಜನರು ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತಾರೆ. ಆದ್ದರಿಂದ ನಾವು ಧಾರ್ಮಿಕ ನಾಯಕರು ಹಾಗೂ ಸಿನೆಮಾ ನಟರುಗಳ ಸಹಾಯದಿಂದ ಲಸಿಕೆ ಅಭಿಯಾನ ನಡೆಸುತ್ತೇವೆ," ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಲಸಿಕೆ ನೀಡಿಕೆಯಲ್ಲಿ ಮಹಾರಾಷ್ಟ್ರ ಭಾರತದಲ್ಲೇ ಎರಡನೇ ಸ್ಥಾನ!
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರವಾಗಿ ಮಹಾರಾಷ್ಟ್ರವು ಕೋವಿಡ್ ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಮಹಾರಾಷ್ಟ್ರದಲ್ಲಿ ಈವರೆಗೆ 10,41,16,963 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 3,43,01,735 ಮಂದಿಗೆ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇನ್ನು ನವೆಂಬರ್ ಅಂತ್ಯದಲ್ಲಿ ಮುಂಬೈ ಎಲ್ಲಾ ಲಸಿಕೆ ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ ನಗರವಾಗಲಿದೆ ಎಂದು ಆರೋಗ್ಯ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video