ಕೊರೊನಾ ಪ್ರಕರಣಗಳ ಏರಿಕೆ; ಮಹಾರಾಷ್ಟ್ರದ ಮೂರು ನಗರಗಳಲ್ಲಿ ಮತ್ತೆ ಲಾಕ್ಡೌನ್ ಸಾಧ್ಯತೆ
ಮುಂಬೈ, ಫೆಬ್ರವರಿ 18: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದರ್ಭ ಪ್ರಾಂತ್ಯದ ಮೂರು ಪ್ರಮುಖ ನಗರಗಳಲ್ಲಿ ಕಠಿಣ ಲಾಕ್ ಡೌನ್ ವಿಧಿಸುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
ವಿದರ್ಭದ ಯವತ್ಮಾಲ್, ಅಮರಾವತಿ ಹಾಗೂ ಅಕೋಲಾ ನಗರಗಳಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಸರ್ಕಾರ ಲಾಕ್ ಡೌನ್ ವಿಧಿಸಬಹುದು ಎನ್ನಲಾಗಿದೆ.
ಕರ್ನಾಟಕದಲ್ಲಿ ಹೆಚ್ಚಾದ ಕೊರೊನಾ: ಲಾಕ್ಡೌನ್ ಜಾರಿಯಿಲ್ಲ ಆದರೆ ಗಮನಿಸಿ!
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರುತ್ತಿದ್ದು, ಪರಿಸ್ಥಿತಿ ಕುರಿತು ಚರ್ಚೆಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ತುರ್ತು ಸಭೆ ನಡೆಸಿದ್ದಾರೆ. ಯವತ್ಮಾಲ್, ಅಕೋಲಾ ಹಾಗೂ ಅಮರಾವತಿ ಆಡಳಿತಾಧಿಕಾರಿಗಳೊಂದಿಗೆ ಮಾತನಾಡಿದ್ದು, ಕೊರೊನಾ ನಿಯಮಗಳ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಪರಿಸ್ಥಿತಿ ಪರಿಶೀಲನೆಗೆ ಸರ್ಕಾರಿ ವೈದ್ಯರನ್ನು ಅಮರಾವತಿಗೆ ಕಳುಹಿಸಲಾಗಿದ್ದು, ಅವರು ಆ ನಗರದ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನಾಧಿರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.
ಮಹಾರಾಷ್ಟ್ರದಲ್ಲಿ ಬುಧವಾರ 4,787 ಕೊರೊನಾ ಪ್ರಕರಣಗಳು ವರದಿಯಾಗಿವೆ. ಅಮರಾವತಿಯಲ್ಲಿ ದಿನನಿತ್ಯದ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಬುಧವಾರ ಅಮರಾವತಿಯೊಂದರಲ್ಲೇ 230 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕಳೆದ ವಾರವಷ್ಟೇ ಸಿಎಂ ಉದ್ಧವ್ ಠಾಕ್ರೆ, ಜನರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಿದ್ದರೆ ಲಾಕ್ಡೌನ್ನಂಥ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈಚೆಗೆ ಕೇರಳದಿಂದ ರಾಜ್ಯಕ್ಕೆ ಬರುವವರಿಗೂ ಕೊರೊನಾ ನೆಗೆಟಿವ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು.