ಮಹಾರಾಷ್ಟ್ರದಲ್ಲಿ ಕುತೂಹಲ ಕೆರಳಿಸಿದ ಇಬ್ಬರು ನಾಯಕರ ಭೇಟಿ
ಮುಂಬೈ, ಸಪ್ಟೆಂಬರ್.27: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಶಿನಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದಾರೆ.
ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ. ಅಲ್ಲದೇ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಮ್ಮಿಬ್ಬರ ಸೈದ್ಧಾಂತಿಕ ಚಿಂತನೆಗಳು ವಿಭಿನ್ನವಾಗಿವೆಯೇ ಹೊರತೂ ನಾವಿಬ್ಬರೂ ವೈರಿಗಳಲ್ಲ. ನಮ್ಮ ಭೇಟಿಯ ಬಗ್ಗೆ ಮುಖ್ಯಮಂತ್ರಿಯವರಿಗೂ ತಿಳಿದಿದೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಫಡ್ನಾವೀಸ್-ಜಾರಕಿಹೊಳಿ ಭೇಟಿ: ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ?
ಮುಂಬೈ ಉಪನಗರದಲ್ಲಿ ಇರುವ ಪಂಚತಾರಾ ಹೋಟೆಲ್ ನಲ್ಲಿ ಸಂಸದ ಸಂಜಯ್ ರಾವತ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಮಾಡಿದ್ದರು. ಶಿವಸೇನೆ ಮತ್ತು ಎನ್ ಸಿಪಿ ನಡುವಿನ ರಾಜಕೀಯ ತಿಕ್ಕಾಟದ ನಡುವೆ ಉಭಯ ನಾಯಕರ ಭೇಟಿಯೂ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿತ್ತು.
ಉಭಯ ನಾಯಕರ ಭೇಟಿ ಹಿಂದೆ ರಾಜಕೀಯವಿಲ್ಲ:
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಭೇಟಿ ಹಿಂದೆ ಯಾವುದೇ ರಾಜಕಾರಣವಿಲ್ಲ ಎಂದು ರಾಜ್ಯದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಟ್ವೀಟ್ ಮಾಡಿದ್ದಾರೆ. ಶಿವಸೇನೆ ಸಂಸದ ಸಂಜಯ್ ರಾವತ್ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ವಿಶ್ಲೇಷಕ ಹೇಮಂತ್ ದೇಸಾಯಿ ನಡೆಸಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿದ್ದರೂ, ಉತ್ತಮ ಬಾಂಧವ್ಯವನ್ನು ಕಳೆದುಕೊಂಡಿಲ್ಲ ಎಂದು ತಿಳಿಸಿರುವುದಾಗಿ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ವರದಿಯಾಗಿದೆ.