ಕೇಂದ್ರ ಸರ್ಕಾರದ ಜತೆಗೆ ದಾವೂದ್ ಸಂಧಾನ ಮಾತುಕತೆ: ಠಾಕ್ರೆ
ಮುಂಬೈ, ಸೆಪ್ಟೆಂಬರ್ 21: ಭೂಗತ ಪಾತಕಿಯಾದ ದಾವೂದ್ ಇಬ್ರಾಹೀಂ, ತಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಆತ ಭಾರತ ಸರ್ಕಾರದೊಂದಿಗೆ ಸಂಧಾನ ಮಾತುಕತೆ ನಡೆಸುತ್ತಿದ್ದಾನೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ನಾಯಕ ರಾಜ್ ಠಾಕ್ರೆ ಹೊಸ ಬಾಂಬ್ ಸಿಡಿಸಿದ್ದಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲೇ ಕಳೆಯುವ ಅಭೀಪ್ಸೆಯಿಂದಾಗಿ ಆತ ಈ ಪ್ರಯತ್ನ ನಡೆಸುತ್ತಿದ್ದಾನೆಂದು ಠಾಕ್ರೆ ತಿಳಿಸಿದ್ದಾರೆ.
ರಾಜಕಾರಣಿಗಳ ರಕ್ಷೆಯಿಂದ 100 ಕೋಟಿ ರು. ಬಾಚಿದ್ದ ದಾವೂದ್ ತಮ್ಮ!
ಫೇಸ್ ಬುಕ್ ನಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಅವರು ಇಂಥದ್ದೊಂದು ವಿಚಾರ ತಿಳಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಅಷ್ಟೇ ಅಲ್ಲ, ದಾವೂದ್ ನನ್ನು ತನ್ನ ಆಡಳಿತ ಕಾಲದಲ್ಲೇ ಭಾರತಕ್ಕೆ ಬರುವಂತೆ ಮಾಡಿದರೆ, ಅದು ಮುಂದಿನ ಚುನಾವಣೆಗಳಲ್ಲಿ ತನಗೆ ಉತ್ತಮ ಮೈಲೇಜ್ ಸಿಗುವುದೆಂಬ ಆಶಯದಲ್ಲಿ ಬಿಜೆಪಿಯೂ ಆ ಬಗ್ಗೆ ಆಸಕ್ತಿ ವಹಿಸಿದೆ ಎಂದು ಅವರು ಹೇಳಿದ್ದಾರೆ.
ದಾವೂದ್ ಸಹೋದರ ಬಿರಿಯಾನಿ ತಿನ್ನೋವರೆಗೂ ಕಾದಿದ್ದ ಪೊಲೀಸರು!
''ದಾವೂದ್ ಈಗ ಪಾಕಿಸ್ತಾನದಲ್ಲೇ ಇದ್ದಾನೆ. ಆದರೆ, ಮುಪ್ಪು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಆತ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾನೆ. ಹಾಗಾಗಿ, ಭಾರತದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆಯಲು ಆತ ಉದ್ದೇಶಿಸಿರುವುದರಿಂದ ಆತನು ಕೇಂದ್ರ ಸರ್ಕಾರದೊಂದಿಗೆ ಸಂಧಾನ ಮಾತುಕತೆಗೆ ಪ್ರಯತ್ನಿಸುತ್ತಿದ್ದಾನೆ. ಮಾತುಕತೆಯೂ ಸಾಗುತ್ತಿದೆ. ಎಲ್ಲಾ ದಾವೂದ್ ಅಂದುಕೊಂಡಂತೆ ನಡೆದರೆ, ಆತ ಶೀಘ್ರದಲ್ಲೇ ಭಾರತಕ್ಕೆ ಬರಬಹುದು'' ಎಂದು ಠಾಕ್ರೆ ಹೇಳಿದ್ದಾರೆ.