ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!
ಔರಂಗಾಬಾದ್ (ಮಹಾರಾಷ್ಟ್ರ), ಸೆಪ್ಟೆಂಬರ್ 23: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಇರುವ ದೂರದ ಹಳ್ಳಿಯೊಂದರ ಶಾಲೆಯ ವರದಿ ಇದು. ವಿದ್ಯಾರ್ಥಿಗಳ ಜೀವಕ್ಕೆ ಪ್ರಮಾದ ಎನ್ನುವಂತಿದ್ದ ನೀರಿದ್ದ ಹಳ್ಳವೊಂದನ್ನು ದಾಟಲು ಶಿಕ್ಷಕರು- ಪೋಷಕರೇ ಸೇರಿ ಬಿದಿರಿನ ಸೇತುವೆಯನ್ನು ನಿರ್ಮಿಸಿದ್ದಾರೆ.
ಅದೊಂದು ಪ್ರಾಥಮಿಕ ಶಾಲೆ. ಅಜಂತಾ ಸತ್ಮಲಾ ಬೆಟ್ಟ ಪ್ರದೇಶದದಲ್ಲಿ ಇರುವ ನಿಮ್ ಚೌಕಿ ಖೋರೆ ಹಳ್ಳಿಯಲ್ಲಿ ಈ ಶಾಲೆ ಇದ್ದು, ಹದಿನೆಂಟು ವರ್ಷದ ಹಿಂದೆ ಆರಂಭವಾಗಿದೆ. ಇಲ್ಲಿಗೆ ಹದಿನೈದು ವಿದ್ಯಾರ್ಥಿಗಳು ಸುಮಾರು ಎರಡು ಕಿಲೋಮೀಟರ್ ದೂರದಿಂದ ಬರುತ್ತಿದ್ದಾರೆ.
ಇಂಗ್ಲಿಷ್ ಭಾಷೆಯಿಂದ ಉಳಿದುಕೊಂಡ ಕನ್ನಡ ಸರಕಾರಿ ಶಾಲೆಯಿದು!
ಮುಂಗಾರಿನ ಸಮಯದಲ್ಲಿ ನೀರು ಹರಿಯುವ ಹಳ್ಳದಲ್ಲಿ ನೀರಿನ ಮಟ್ಟ ವಿಪರೀತ ಹೆಚ್ಚಾಗುತ್ತದೆ. ಆ ನೀರಿನ ಹಳ್ಳವನ್ನು ದಾಟಿಯೇ ಮಕ್ಕಳು ಶಾಲೆಗೆ ಬರಬೇಕು. ಕೆಲವೊಮ್ಮೆ ಅದು ಮೂರು ಅಡಿಗೂ ಹೆಚ್ಚು ಹರಿಯುತ್ತದೆ. ಅಂಥ ಅಪಾಯಕಾರಿ ಸನ್ನಿವೇಶದಲ್ಲೂ ಮಕ್ಕಳು ಹಳ್ಳ ದಾಟಿಕೊಂಡು ಬರುತ್ತಿದ್ದರು.
ಎಷ್ಟೋ ಬಾರಿ ಈ ಶಾಲೆಯು ಮುಂಗಾರಿನ ಸಮಯದಲ್ಲಿ ವಿದ್ಯಾರ್ಥಿಗಳೇ ಇಲ್ಲದೇ ನಡೆಯುತ್ತಿತ್ತು. ಈಚೆಗೆ ಔರಂಗಾಬಾದ್ ಜಿಲ್ಲಾ ಪರಿಷದ್ ಕೇಂದ್ರದಲ್ಲಿ 'ಡಿಸೈನ್ ಫಾರ್ ಚೇಂಜ್' ಎಂಬ ಕಾರ್ಯಕ್ರಮದಲ್ಲಿ ಹಲವು ಶಿಕ್ಷಕರು ಭಾಗಿಯಾಗಿದ್ದರು. ಆ ವೇಳೆ ಒಂದು ಸೇತುವೆ ನಿರ್ಮಾಣ ಮಾಡುವುದಕ್ಕೆ ನಿರ್ಧಾರ ಮಾಡಲಾಯಿತು ಎನ್ನುತ್ತಾರೆ ಶಿಕ್ಷಕರಾದ ದತ್ತಾ ದೇವೂರೆ.
ಆ ನಂತರ ಶಿಕ್ಷಕರಿಬ್ಬರು ಪೋಷಕರ ಬಳಿ ಈ ವಿಚಾರ ಪ್ರಸ್ತಾವ ಮಾಡಿದ್ದಾರೆ. ಸಹಾಯಕ್ಕೆ ಮನವಿ ಮಾಡಿದ್ದಾರೆ. ಬಿದಿರು, ಬೈಂಡಿಂಗ್ ವೈರ್ ತಂದು ಒಂದು ವಾರದಲ್ಲಿ ಸೇತುವೆ ಸಿದ್ಧವಾಗಿದೆ. ಇದಕ್ಕೆ ಆಗಿರುವ ಖರ್ಚು ಐವತ್ತು ರುಪಾಯಿ. ಅದು ಬೈಂಡಿಂಗ್ ವೈರ್ ಗೆ ಆದ ಖರ್ಚು ಮಾತ್ರ.
ಮುಂಗಾರಿನಲ್ಲಿ ನೀರಿನ ಹಳ್ಳ ದಾಟುವಾಗ ಕೆಲವು ಸಲ ನಮ್ಮ ಪುಸ್ತಕ ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು. ಯೂನಿಫಾರ್ಮ್ ತುಂಬ ಮಣ್ಣು ಮಣ್ಣು. ಜತೆಗೆ ಒದ್ದೆಯಾಗಿರುತ್ತಿತ್ತು. ಅವೆಲ್ಲ ಇನ್ನು ಮುಂದೆ ಆಗಲ್ಲ ಅನ್ನೋದೇ ಸಮಾಧಾನ ಎನ್ನುತ್ತಾನೆ ವಿದ್ಯಾರ್ಥಿ ಪ್ರದೀಪ್ ಬಗುಲ್.