Breaking: ಮಹಾರಾಷ್ಟ್ರ; ಭಾರಿ ಶಸ್ತ್ರಾಸ್ತ್ರಸಹಿತ ಬೋಟ್ ಪತ್ತೆ
ಮುಂಬೈ, ಆಗಸ್ಟ್ 18: ಮಹಾರಾಷ್ಟ್ರದ ಹರಿಹರೇಶ್ವರ ಬೀಚ್ ಮತ್ತು ರಾಯಗಢದ ಕರಾವಳಿಯ ಭಾರದ್ಖೋಲ್ನಲ್ಲಿ ಅಪರಿಚಿತ ಬೋಟ್ಗಳು ಪತ್ತೆಯಾಗಿವೆ. ಹರಿಹರೇಶ್ವರ ಬೀಚ್ನಲ್ಲಿ ಪತ್ತೆಯಾದ ಬೋಟ್ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ.
ಬೋಟ್ನಲ್ಲಿ ಮೂರು ಆಕ್ರಮಣಕಾರಿ ರೈಫಲ್ಗಳು, ಎಕೆ -47 ಮತ್ತು 1 0 ಜೀವಂತ ಮದ್ದುಗುಂಡುಗಳ ಪೆಟ್ಟಿಗೆಗಳು ಪತ್ತೆಯಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಶಂಕಿತ ದೋಣೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆ ಮತ್ತು ಸಮೀಪದ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.
"ಲೈಫ್ ಬೋಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದಾಗ ಎರಡೂ ಹಡಗುಗಳಲ್ಲಿ ಮನುಷ್ಯರು ಇರಲಿಲ್ಲ. ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ಕಡಲು ಮಂಡಳಿಗೆ ಈ ಬಗ್ಗೆ ತಿಳಿಸಲಾಗಿದೆ. ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿ ದೋಣಿ ಪತ್ತೆಯಾಗಿದೆ. ಇದನ್ನು ಮೊದಲು ಸ್ಥಳೀಯರು ಗಮನಿಸಿದ್ದು, ನಂತರ ಬೋಟ್ ಇರುವ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
"ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಯಗಡದ ಶ್ರೀವರ್ಧನ್ನ ಹರಿಹರೇಶ್ವರ ಮತ್ತು ಭಾರದ್ಖೋಲ್ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ದಾಖಲೆಗಳನ್ನು ಹೊಂದಿರುವ ಕೆಲವು ದೋಣಿಗಳು ಪತ್ತೆಯಾಗಿವೆ. ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಎಟಿಎಸ್ ಅಥವಾ ರಾಜ್ಯ ಏಜೆನ್ಸಿಯ ಎಸ್ಪಿಎಲ್ ತಂಡವನ್ನು ತುರ್ತಾಗಿ ನೇಮಿಸುವಂತೆ ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇನೆ" ಎಂದು ಸ್ಥಳೀಯ ಶ್ರೀವರ್ಧನ್ (ರಾಯಗಡ) ಶಾಸಕಿ ಅದಿತಿ ತಟ್ಕರೆ ತಿಳಿಸಿದರು.
"ನಾಳೆ ದಹಿ ಹಂಡಿ ಹಬ್ಬವಿದೆ. ಗಣೇಶೋತ್ಸವಕ್ಕೆ ಕೇವಲ 10 ದಿನಗಳು ಮಾತ್ರ ಇವೆ. ಈ ಹಬ್ಬಗಳ ಸಂದರ್ಭದಲ್ಲಿ ಜನರು ಇಲ್ಲಿಗೆ ಹೆಚ್ಚಿಗೆ ಬರುತ್ತಾರೆ. ಭದ್ರತೆಯು ಒಂದು ಪ್ರಮುಖ ವಿಷಯವಾಗಿದೆ" ಎಂದು ಶಾಸಕಿ ಹೇಳಿದರು.
'ಭಯೋತ್ಪಾದನೆ ಅಂಶಕ್ಕೆ ಯಾವುದೇ ದೃಢೀಕರಣವಿಲ್ಲ. ಬೋಟ್ಗಳು ದೊರಕಿವೆ. ನಾವು ಯಾವುದನ್ನು ಸುಮ್ಮನೆ ತಳ್ಳಿಹಾಕುವುದಿಲ್ಲ, ಎಲ್ಲಾ ಅಂಶಗಳನ್ನು ತನಿಖೆ ಮಾಡುತ್ತೇವೆ. ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ' ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
Recommended Video