ನಟ ಸುಶಾಂತ್ ಕೊಲೆಯಾಗಿದ್ದಾರೆ, ಸ್ವಾಮಿ ನೀಡಿದ 26 ಕಾರಣ
ಮುಂಬೈ, ಜುಲೈ 30: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುಶಾಂತ್ ಸಾವಿನ ತನಿಖೆ ಮುಂದುವರೆದಿದೆ. ಈ ನಡುವೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿ ಸುಶಾಂತ್ ಸತ್ತದ್ದು, ಆತ್ಮಹತ್ಯೆಯಿಂದಲ್ಲ, ಇದು ಕೊಲೆ ಎಂದಿದ್ದಾರೆ.
ಸಂಸದ ಸ್ವಾಮಿ ಅವರ ಟ್ವೀಟ್ ಭಾರಿ ಕುತೂಹಲ ಮೂಡಿಸಿದೆ. ಸುಶಾಂತ್ ಸಾವು ಕೊಲೆ ಎಂದು ಹೇಳಲು 26 ಅಂಶಗಳನ್ನು ಹೊಂದಿರುವ ಪಟ್ಟಿಯುಳ್ಳ ಪೋಟೋ ಹಾಕಿದ್ದಾರೆ.
ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಲವಾಗಿ ಕೂಗು ಕೇಳಿ ಬಂದಿದೆ. ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರುತ್ತೇನೆ ಎಂದಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಪೊಲೀಸ್ ತನಿಖೆ ಮುಂದುವರೆಸಲು ಕೋರ್ಟ್ ಸೂಚಿಸಿದೆ.
ಸುಬ್ರಮಣಿಯನ್ ಸ್ವಾಮಿ ನೀಡಿರುವ ಪ್ರಮುಖ ಕಾರಣ
ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಲ್ಲರೂ ನಂಬಿದ್ದಾರೆ. ಆದರೆ ಅವರ ಕತ್ತಿನ ಸುತ್ತ ಹಗ್ಗ ಬಿಗಿದ ಕಲೆ ಹತ್ಯೆ ಮಾಡಿದ್ದಾಗಿದೆ. ಹತ್ಯೆ ಮಾಡಿ ನೇಣಿಗೆ ಹಾಕಿದ್ದಂತಿದೆ ಎಂದು ಸ್ವಾಮಿ ಹೇಳಿದ್ದಾರೆ. ಸುಶಾಂತ್ ದೇಹದ ಮೇಲೆ ಅಲ್ಲಲ್ಲಿ ಗಾಯದ ಗುರುತುಗಳು ಸೇರಿದಂತೆ ಒಟ್ಟು 26 ಅಂಶಗಳನ್ನು ಸ್ವಾಮಿ ಟ್ವೀಟ್ ಮಾಡಿದ್ದು, ಈ ಎಲ್ಲಾ ಅಂಶಗಳಿಂದ ಇದು ಕೊಲೆ ಎಂದೆನಿಸಿದೆ.
ರಿಯಾ ಚಕ್ರವರ್ತಿ ನಾಪತ್ತೆ
ಈ ನಡುವೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಅವರು ಪಾಟ್ನಾದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ರಿಯಾ ಚಕ್ರವರ್ತಿ ನಾಪತ್ತೆಯಾಗಿದ್ದು, ಮುಂಬೈ ನಿವಾಸದಲ್ಲಿ ಕಂಡು ಬಂದಿಲ್ಲ, ಪಾಟ್ನಾದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸುಶಾಂತ್ ಗೆಳತಿ ರಿಯಾ ವಿರುದ್ಧ ಎಫ್ಐಆರ್ ದಾಖಲು
ಉಸಿರುಗಟ್ಟಿ ಸಂಭವಿಸಿದ ಸಾವು-ಮರಣೋತ್ತರ ಪರೀಕ್ಷೆ
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ವಿಸೇರಾ ಪರೀಕ್ಷಾ ವರದಿಯಲ್ಲಿ ಏನಿದೆ?
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ. ಇದರಲ್ಲಿ ಯಾವುದೇ ರೀತಿ ಸಂಚು ಕಂಡು ಬಂದಿಲ್ಲ, ವಿಷಪ್ರಾಶನವಾಗಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಆದರೆ, ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದು ತನಿಖೆ ಮುಂದುವರೆದಿದೆ.
ಸ್ವಾಮಿ ಹೇಳಿದಂತೆ ತನಿಖೆ ಸಾಧ್ಯವೇ?
ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ಮರಣೋತ್ತರ ಪರೀಕ್ಷೆ ಹಾಗೂ ವಿಸೇರಾ ವರದಿಯಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಹಲವಾರು ಸೆಲೆಬ್ರಿಟಿಗಳು, ಸುಶಾಂತ್ ಆಪ್ತರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರಿಂದ ಸುಶಾಂತ್ ಒಂದು ವೇಳೆ ಆತ್ಮಹತ್ಯೆ ಮಾಡಿದ್ದು ಸಾಬೀತಾದರೂ, ಸಾವಿನ ಕಾರಣವಂತೂ ತಿಳಿಯಲಿದೆ.