ಸುಶಾಂತ್ ಸಿಂಗ್ ಕೇಸ್: ಮಹೇಶ್ ಭಟ್ ಹೇಳಿಕೆ ಪಡೆದ ಪೊಲೀಸರು
ಮುಂಬೈ, ಜುಲೈ 27: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಂದು ನಿರ್ಮಾಪಕ ಮಹೇಶ್ ಭಟ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ 12ರ ಸಮಯಕ್ಕೆ ಸಾಂತಾ ಕ್ರೂಜ್ ಪೊಲೀಸ್ ಠಾಣೆಗೆ ಆಗಮಿಸಿದ ಮಹೇಶ್ ಭಟ್, ಸುಶಾಂತ್ ಪರಿಚಯ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸುಶಾಂತ್ ಸಿಂಗ್ ಕೇಸ್: ಪೊಲೀಸರ ವಿಚಾರಣೆಗೆ ಹಾಜರಾದ ಖ್ಯಾತ ನಿರ್ಮಾಪಕ
ಈ ಕುರಿತು ಭಾನುವಾರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಮಹೇಶ್ ಭಟ್ ವಿಚಾರಣೆಗೆ ಒಳಪಡಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಸೋಮವಾರ ನಿರ್ಮಾಪಕ ಭಟ್ ಪೊಲೀಸ್ ಠಾಣೆಗೆ ಬಂದಿದ್ದರು.
'ಸುಶಾಂತ್ ಸಿಂಗ್ ಅವರನ್ನು ಇದುವರೆಗೂ ಕೇವಲ ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ. 2018ರಲ್ಲಿ ಸುಶಾಂತ್ ನನ್ನನ್ನು ನೋಡಲು ಮನೆಗೆ ಬಂದಿದ್ದರು. ಎರಡನೇ ಸಲ ಅವರಿಗೆ ಹುಷಾರಿರಲಿಲ್ಲ ಎಂದು ಫೆಬ್ರವರಿ 2020ರಲ್ಲಿ ಅವರ ಮನೆಗೆ ಹೋಗಿದ್ದೆ' ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ.
ಇನ್ನು ಸಡಕ್ 2 ಚಿತ್ರದಲ್ಲಿ ಆಫರ್ ನಿರಾಕರಿಸಿದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಮಹೇಶ್ ಭಟ್, ''ಸಡಕ್ 2 ಸಿನಿಮಾದಲ್ಲಿ ಸುಶಾಂತ್ ಅವರಿಗೆ ಆಫರ್ ಕೊಟ್ಟೆ ಇರಲಿಲ್ಲ, ಅವರನ್ನು ಸಿನಿಮಾದಲ್ಲಿ ನಟಿಸುವಂತಹ ಯಾವುದೇ ಸಾಧ್ಯತೆ ಇರಲಿಲ್ಲ. ಮೊದಲೇ ನಿರ್ಧರಿಸಿದಂತೆ ಸಂಜಯ್ ದತ್ ಈ ಚಿತ್ರದ ನಾಯಕರಾಗಿದ್ದರಿ'' ಎಂದು ಹೇಳಿದ್ದಾರೆ.
ಇನ್ನು ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ನಿರ್ಮಾಪಕ ಕರಣ್ ಜೋಹರ್ ಅವರನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.