ವಿಸೇರಾದಲ್ಲಿ ವಿಷ ಇಲ್ಲ, ಸುಶಾಂತ್ ಸಾವು ಪ್ರಕರಣಕ್ಕೆ ತಿರುವು
ಮುಂಬೈ, ಜುಲೈ 27: ಜನಪ್ರಿಯ ನಟ ಸುಶಾಂತ್ ಸಿಂಗ್ ಅವರ ಸಾವಿನ ನಂತರ ಅಭಿನಯದ ಚಿತ್ರ ದಿಲ್ ಬೇಚಾರಾ ಒಟಿಟಿ ವೇದಿಕೆಯಲ್ಲಿ ತೆರೆ ಕಂಡು ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಸುಶಾಂತ್ ಸಾವಿನ ತನಿಖೆ ಮುಂದುವರೆದಿದ್ದು, ಸೆಲೆಬ್ರಿಟಿಗಳ ಇನ್ನೊಂದು ಸುತ್ತಿನ ವಿಚಾರಣೆ ಮುಂದುವರೆದಿದೆ. ಈ ನಡುವೆ ಬಾಂದ್ರಾ ಪೊಲೀಸರು ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದಾರೆ.
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ. ಇದರಲ್ಲಿ ಯಾವುದೇ ರೀತಿ ಸಂಚು ಕಂಡು ಬಂದಿಲ್ಲ, ವಿಷಪ್ರಾಶನವಾಗಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಆದರೆ, ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದು ತನಿಖೆ ಮುಂದುವರೆದಿದೆ.
ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?
ಜುಲೈ 1ರಂದು ಜೆಜೆ ಆಸ್ಪತ್ರೆ ನೀಡಿರುವ ವರದಿಯಲ್ಲೇ ವಿಸೇರಾದಲ್ಲಿ ವಿಷ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ, ಪ್ರಕರಣದ ಸೂಕ್ಷ್ಮತೆ ಹಾಗೂ ಎರಡನೇ ಬಾರಿ ದೃಢಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಸುಶಾಂತ್ ಸಾವು ಕುರಿತು ಬಾಲಿವುಡ್ ಇಬ್ಭಾಗವಾಗಿದೆ. ಅನೇಕ ಸ್ಟಾರ್ ನಟ ನಟಿಯರನ್ನು ಗುಮಾನಿಯಿಂದ ನೋಡುವಂತಾಗಿದೆ. ಜೊತೆಗೆ ಸುಶಾಂತ್ ಕುಟುಂಬಸ್ಥರು ಸಿಬಿಐಗೆ ತನಿಖೆ ವಹಿಸುವಂತೆ ಆಗ್ರಹಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ-ಸರ್ಕಾರಿ ಆಸ್ಪತ್ರೆ
ಸುಶಾಂತ್ ಸಿಂಗ್ ನಿಧನದ ಮರುದಿನ ಪೊಲೀಸರ ಕೈ ಸೇರಿದ್ದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶಾಂತ್ ಅವರು ಉಸಿರುಗಟ್ಟಿ ಸತ್ತಿದ್ದಾರೆ. ಇಲ್ಲಿ ಬೇರೆ ಯಾವುದೇ ರೀತಿಯ ಕೃತ್ಯಗಳು ಕಾಣಿಸುವುದಿಲ್ಲ. ಡಾ. ಆರ್ ಎನ್ ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ, ನೀಡಿದ ವರದಿಯಲ್ಲಿ ನೇಣು ಬಿಗಿದಿದ್ದರಿಂದ 'ಆಸ್ಫಿಕ್ಸಿಯೇಷನ್' (ಉಸಿರುಗಟ್ಟುವಿಕೆ) ಮೂಲಕ ಆದ ಸಾವು ಎಂದು ತಿಳಿಸಿತ್ತು. ಹೀಗಾಗಿ ಇದು ಆತ್ಮಹತ್ಯೆಯೇ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಮುಂಬೈನ ಜೆ. ಜೆ ಆಸ್ಪತ್ರೆ ನೀಡಿರುವ ಎರಡನೇ ವಿಸೇರಾ ವರದಿ ಈಗ ಪೊಲೀಸರ ಕೈ ಸೇರಿದೆ.
ವಿಸೇರಾ ವರದಿ ಅಂದರೇನು? ಏನು ತಿಳಿಯಬಹುದು
ದೇಹದ ಪ್ರಮುಖ ಒಳ ಅಂಗಗಳಲ್ಲಿ ಹೊಕ್ಕಿರಬಹುದಾದ ಹೊರಗಿನ ವಸ್ತು, ಬೇಡದ ವಸ್ತು, ಸಾಯುವ ಸಂದರ್ಭದಲ್ಲಿನ ಒತ್ತಡ, ಧೂಳು, ರಕ್ತಹೆಪ್ಪುಗಟ್ಟುವಿಕೆ, ಬಣ್ಣ ಬದಲಾವಣೆ ಹೀಗೆ ಎಲ್ಲವೂ ತಿಳಿಯಬಹುದು. ಮುಖ್ಯ ಅಂಗಗಳಾದ ಹೃದಯ, ಕರುಳು, ಕಿಬ್ಬೊಟ್ಟೆಯಲ್ಲಿನ ರಾಸಾಯನಿಕಗಳ ವ್ಯತ್ಯಾಸ, ವಿಷ ಸೇವಿಸಿದ್ದರೆ ಆಗಿರುವ ಪರಿಣಾಮದ ವರದಿ ತಿಳಿಯುತ್ತದೆ.
ಆದರೆ, ವಿಸೇರಾ ವರದಿ ಪ್ರಕಾರ, ಸುಶಾಂತ್ ಸಿಂಗ್ ದೇಹದಲ್ಲಿ ಯಾವುದೇ ಬೇಡದ ರಾಸಾಯನಿಕ, ವಿಷ ಇರಲಿಲ್ಲ. ಮರಣೋತ್ತರ ಪರೀಕ್ಷೆಗೆ ಬಂದಾಗ ಶವದ ಮೇಲೆ ಹಗ್ಗದ ಬಿಗಿದ ಗುರುತುಗಳು ಬಿಟ್ಟರೆ, ಬೇರೆ ಗಾಯ, ದೇಹದ ಬಣ್ಣ ಬದಲಾವಣೆ, ಉಗುರುಗಳ ಬಣ್ಣ ಬದಲಾವಣೆ ಯಾವುದರಲ್ಲೂ ವ್ಯತ್ಯಾಸ ಕಂಡು ಬಂದಿರಲಿಲ್ಲ. ಒಟ್ಟಾರೆ, ಸುಶಾಂತ್ ಸ್ವ ಇಚ್ಛೆಯಿಂದ ನೇಣು ಬಿಗಿದುಕೊಂಡಿರಬಹುದು. ದೇಹದಲ್ಲಿ ಕೆಮಿಕಲ್ ಅಂಶದಲ್ಲಿ ಯಾವುದೇ ರೀತಿ ಬಲವಂತವಾಗಿ ವಿಷಪೂರಿತ ಆಹಾರ ಸೇರಿದ ಲಕ್ಷಣವಿಲ್ಲ ಎಂದು ಜೆಜೆ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ
ಐವರು ತಜ್ಞ ವೈದ್ಯರು ನೀಡಿದ ಪೋಸ್ಟ್ ಮಾರ್ಟಂ ವರದಿ
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ವಿಸೇರಾ ವರದಿ ಮಹತ್ವವೇನು? ಸಿಬಿಐ ತನಿಖೆ ಸಾಧ್ಯವೆ?
ಸುಶಾಂತ್ ಸಿಂಗ್ ಪ್ರಕರಣದ ಮರಣೋತ್ತರ ಪರೀಕ್ಷೆ, ವಿಸೇರಾದಲ್ಲಿ ಯಾವುದೇ ವಿಷವಿಲ್ಲ ಎಂಬ ವರದಿ ಮಹತ್ವವಾಗಿದ್ದು, ಸದ್ಯಕ್ಕೆ ಸುಶಾಂತ್ ಆತ್ಮಹತ್ಯೆಯಲ್ಲಿ ಯಾರೊಬ್ಬರ ಕೈವಾಡವಿಲ್ಲ ಎಂದು ತೋರುತ್ತದೆ. ಆದರೆ, ಸುಶಾಂತ್ ಗೆ ಮಾನಸಿಕವಾಗಿ ಹಿಂಸೆ ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಯಾರನ್ನಾದರೂ ಬಂಧಿಸಿ ವಿಚಾರಣೆಗೊಳಪಡಿಸಲು ಬಲವಾದ ಸಾಕ್ಷಿ ಬೇಕಾಗುತ್ತದೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಅಂಥ ಸಾಕ್ಷಿ ಸಿಕ್ಕಿಲ್ಲ. ಬಾಲಿವುಡ್ ಖ್ಯಾತನಾಮರನ್ನು ಪ್ರಶ್ನಿಸಿ, ವರದಿ ಪಡೆದ ಬಳಿಕ ಪೊಲೀಸರು ಅಂತಿಮ ವರದಿ ನೀಡಲಿದ್ದಾರೆ. ಇದಾದ ಬಳಿಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಿಬಿಐ ತನಿಖೆಗಾಗಿ ಮನವಿ ಮಾಡಬಹುದು. ಕುಟುಂಬಸ್ಥರು ಕೂಡಾ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.ಸುಶಾಂತ್ ಸಾವಿನ ಪ್ರಕರಣದಲ್ಲಿ ಹೋರಾಟ ನಡೆಸಲು ಜಸ್ಟೀಸ್ ಫಾರ್ ಸುಶಾಂತ್ ಫೋರಂ ಕೂಡ ಸೃಷ್ಟಿಯಾಗಿದೆ. ಆದರೆ, ಪ್ರಕರಣ ಕೈಗೆತ್ತಿಕೊಳ್ಳುವುದು ಬಿಡುವುದು ಸಿಬಿಐ ಸಂಸ್ಥೆ ನಿರ್ಧಾರಕ್ಕೆ ಬಿಟ್ಟಿದ್ದಾಗಿರುತ್ತದೆ.