ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ: ಶಿವಸೇನೆಗೆ ಯಾಕೆ ನಡುಕ?
ಮುಂಬೈ, ಆ 20: ಮುಂಬೈ ಪೊಲೀಸರ ಸಾಮರ್ಥ್ಯವನ್ನು ಅವಮಾನಿಸಲಾಗುತ್ತಿದೆ ಎಂದು ಏನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆದಿಯಾಗಿ ಶಿವಸೇನೆಯ ಮುಖಂಡರು ಹೇಳುತ್ತಿದ್ದಾರೋ, ಅದರಲ್ಲಿ ಅನುಮಾನ ಮೂಡುವಂತೆ ಮಾಡುತ್ತಿರುವುದು ಸೇನೆಯ ನಾಯಕರ ಹೇಳಿಕೆಗಳು.
ಬಿಹಾರದ ನಿತೀಶ್ ಕುಮಾರ್ ಸರಕಾರ, ಪ್ರತಿಭಾನ್ವಿತ, ಇನ್ನೂ ಬಾಳಿಬದುಕಬೇಕಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ನಿರ್ಧರಿಸಿತ್ತು. ಇದು, ಬಿಹಾರ ಮತ್ತು ಮಹಾರಾಷ್ಟ್ರ ಸರಕಾರದ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತ್ತು.
ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ
ಈಗ, ಬಿಹಾರ ಸರಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ. ನಟಿ ರಿಯಾ ಚಕ್ರವರ್ತಿ ವಿರುದ್ಧ ನಟ ಸುಶಾಂತ್ ಅವರ ತಂದೆ ಬಿಹಾರದ ಪಾಟ್ನಾದಲ್ಲಿ ದಾಖಲಿಸಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿದ್ದರು.
ಸುಶಾಂತ್ ಸಿಂಗ್ ಪ್ರಕರಣ: ಶಿವಸೇನಾ ಮುಖಂಡನಿಗೆ ಲೀಗಲ್ ನೊಟೀಸ್
ಸುಪ್ರೀಂಕೋರ್ಟ್ ತೀರ್ಪಿಗೆ ವ್ಯಾಪಕ ಸ್ವಾಗತ ದೊರತ ನಂತರ, ಶಿವಸೇನೆಯ ಮುಖಂಡರು ಈ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ವಿನಾಕಾರಣ ಟಾರ್ಗೆಟ್ ಇದರ ಹಿಂದಿದೆ ಎಂದು ಆರೋಪಿಸುತ್ತಿದ್ದಾರೆ. ಇನ್ನು, ಎನ್ಸಿಪಿ ಮುಖಂಡ ಶರದ್ ಪವಾರ್ ಕೂಡಾ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ
ನನ್ನ ಮಗ ಸುಶಾಂತ್ ಸಿಂಗ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ. ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿ, ಸುಶಾಂತ್ ತಂದೆ ಕೆ.ಕೆ. ಸಿಂಗ್ ಕಳೆದ ಜುಲೈ 28 ರಂದು ಪಾಟ್ನಾದಲ್ಲಿ ದೂರು ಸಲ್ಲಿಸಿದ್ದರು. ಪಾಟ್ನಾದಲ್ಲಿ ದಾಖಲಾಗಿದ್ದ ಎಫ್ಐಆರ್ ಸಿಂಧುವಿಲ್ಲ. ಅದನ್ನು ಮುಂಬೈಗೆ ವರ್ಗಾಯಿಸಬೇಕೆಂದು ರಿಯಾ ಮಾಡಿಕೊಂಡ ಮನವಿಯನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿ, ಸಿಬಿಐಗೆ ಕೇಸನ್ನು ವಹಿಸಿತ್ತು.
ಸಿಬಿಐ ಕೇಸ್ ವರ್ಗ
ಸಿಬಿಐಗೆ ಕೇಸ್ ವರ್ಗವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡ ಹೇಳಿದಿಷ್ಟು. " ಸುಶಾಂತ್ ಸಿಂಗ್ ಸಾವಿನ ಪ್ರಕರಣ ಒಂದು ಪಿತೂರಿ, ಆದಿತ್ಯ ಠಾಕ್ರೆಯವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಿದು. ಈ ಕೇಸ್ ಮುಂದಿಟ್ಟುಕೊಂಡು ಶಿವಸೇನೆಯನ್ನು ಬಗ್ಗು ಬಡಿಯುವ ಪ್ರಯತ್ನ ಶುರುವಾಗಿದೆ".
ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶಮುಖ್
ಈ ಬಗ್ಗೆ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶಮುಖ್ ಪ್ರತಿಕ್ರಿಯೆ ನೀಡಿ, "ಸಿಬಿಐ ತನಿಖೆಗೆ ಪಕ್ಷವಾಗಲೀ ಆದಿತ್ಯ ಠಾಕ್ರೆಯಾಗಲೀ ಹೆದರಿಕೊಂಡು ಕೂರುವುದಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಆದಿತ್ಯ ಠಾಕ್ರೆಯವರ ಹೆಸರನ್ನು ಪ್ರಕರಣಕ್ಕೆ ಎಳೆದು ತರಲಾಗಿದೆ. ಇಡೀ ಸಾವಿನ ಪ್ರಕರಣವೇ ಬಹುದೊಡ್ಡ ರಾಜಕೀಯ" ಎಂದು ಹೇಳಿದ್ದಾರೆ.
ಎನ್ಸಿಪಿ ಮುಖಂಡ ಶರದ್ ಪವಾರ್ ಟ್ವೀಟ್
ಇನ್ನು, ಎನ್ಸಿಪಿ ಮುಖಂಡ ಶರದ್ ಪವಾರ್ ಟ್ವೀಟ್ ಮಾಡಿ, "ನರೇಂದ್ರ ದಾಭೋಲ್ಕರ್ ಹತ್ಯೆಯ ತನಿಖೆಯಂತೆ, ಸುಶಾಂತ್ ಸಿಂಗ್ ಅವರ ಕೇಸೂ ಹಳ್ಳ ಹಿಡಿಯಲಿದೆ. ಆರು ವರ್ಷದ ಹಿಂದಿನ ಪ್ರಕರಣವೇ ಇನ್ನೂ ಮುಗಿದಿಲ್ಲ. ಅದೇ ರೀತಿ ಸುಶಾಂತ್ ಕೇಸ್ ಕೂಡಾ ಸಾಗಲಿದೆ ಎಂದು ಭಾವಿಸುತ್ತೇನೆ"ಎಂದು ಪವಾರ್ ಹೇಳಿದ್ದಾರೆ.