ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ: ಕಿಡಿಕಾರಿದ ಕಾಂಗ್ರೆಸ್, ಎನ್ಸಿಪಿ
ಮುಂಬೈ, ಆ 4: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆಯುತ್ತಿದೆ. ಈ ನಡುವೆ, ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಬಿಹಾರ ಸರಕಾರ ವಹಿಸಿದೆ.
ಈ ಸಂಬಂಧ ನಿತೀಶ್ ಕುಮಾರ್ ಸರಕಾರದ ವಿರುದ್ದ ಕಿಡಿಕಾರಿರುವ ಮಹಾರಾಷ್ಟ್ರದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ, ಬಿಹಾರ ಸರಕಾರದ ಕ್ರಮವನ್ನು ಕಟುವಾಗಿ ಟೀಕಿಸಿವೆ. ಸುಶಾಂತ್ ಆತ್ಮಹತ್ಯೆಗೂ, ಕೊರೊನಾಗೂ ಎರಡು ಪಕ್ಷಗಳ ಮುಖಂಡರು, ಒಂದಕ್ಕೊಂದು ಸಂಬಂಧ ಕಲ್ಪಿಸಿದ್ದಾರೆ.
ಸುಶಾಂತ್ ಸಿಂಗ್ ಕೇಸ್: ಸಿಬಿಐಗೆ ಶಿಫಾರಸು ಮಾಡಿದ ಬಿಹಾರ ಸಿಎಂ
"ಬಿಹಾರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ, ಜನರ ಗಮನವನ್ನು ಬೇರಡೆ ಸೆಳೆಯಲು ನಿತೀಶ್ ಕುಮಾರ್ ಸರಕಾರ ಈ ರೀತಿಯ ನಾಟಕವನ್ನು ಆಡುತ್ತಿದೆ"ಎಂದು ಎನ್ಸಿಪಿ ವಕ್ತಾರ, ಸಚಿವರೂ ಆಗಿರುವ ನವಾಬ್ ಮಲಿಕ್ ಆರೋಪಿಸಿದ್ದಾರೆ.
"ನಮ್ಮ ರಾಜ್ಯದ ಹಕ್ಕಿನ ಮೇಲೆ ಮಾಡಿರುವ ಅತಿಕ್ರಮಣವಿದು"ಎಂದು ಆರೋಪಿಸಿರುವ ಮಲಿಕ್, "ಬಿಹಾರ ಸರಕಾರ, ಸುಶಾಂತ್ ಆತ್ಮಹತ್ಯೆಯ ವಿಚಾರದಲ್ಲಿ ವಿನಾ ಕಾರಣ ಮೂಗು ತೂರಿಸುತ್ತಿದೆ"ಎಂದು ಮಲಿಕ್ ಸಿಟ್ಟಾಗಿದ್ದಾರೆ.
"ಮುಂಬೈ ಪೊಲೀಸರು ಸಾಮರ್ಥ್ಯವನ್ನು ಪ್ರಶ್ನಿಸುವಂತಿದೆ ಬಿಹಾರ ಸರಕಾರದ ನಿರ್ಧಾರ. ನಮ್ಮ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಲಾಭ ತೆಗೆದುಕೊಳ್ಲಬೇಡಿ"ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಎಚ್ಚರಿಸಿದ್ದಾರೆ.
ಸುಶಾಂತ್ ಸಿಂಗ್ ಕೇಸ್: ಗೆಳತಿ ರಿಯಾ ಚಕ್ರವರ್ತಿಗೆ ಬಂಧನದ ಭೀತಿ!
ಮುಂಬೈ ಪೊಲೀಸರು ಬಿಹಾರ ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಈ ಕೇಸ್ ಅನ್ನು ಸಿಬಿಐಗೆ ವರ್ಗಾಯಿಸುವ ನಿರ್ಧಾರಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಂದಿದ್ದರು.
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮುಂಬೈ ಮತ್ತು ಪಾಟ್ನಾ ಎರಡು ಕಡೆ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ. ಪಾಟ್ನಾದಲ್ಲಿ ಸುಶಾಂತ್ ಸಿಂಗ್ ತಂದೆ ಅವರು, ರಿಯಾ ಚಕ್ರವರ್ತಿ ಸೇರಿದಂತೆ ಆರು ಜನರ ವಿರುದ್ಧ ದೂರು ನೀಡಿದ್ದಾರೆ.