ಸುಶಾಂತ್ ಸಿಂಗ್ ಸಾವು ಖಂಡಿತಾ ಆತ್ಮಹತ್ಯೆಯಲ್ಲ, ಕೊಲೆ: ಆಂಬುಲೆನ್ಸ್ ಚಾಲಕ
ಮುಂಬೈ, ಸೆಪ್ಟೆಂಬರ್ 29: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣ ನಡೆದು ಮೂರೂವರೆ ತಿಂಗಳಾಗಿದೆ. ಆದರೆ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸುಶಾಂತ್ ಸಾವಿನಿಂದ ಎಲ್ಲರ ಗಮನ ಈಗ ಡ್ರಗ್ಸ್ ಪ್ರಕರಣದತ್ತ ತಿರುಗಿದೆ. ಇತ್ತ ಸಿಬಿಐ ತನಿಖೆಯಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ತನಿಖಾ ಸಂಸ್ಥೆ ಸ್ಪಷ್ಟೀಕರಣವನ್ನೂ ನೀಡಿದೆ.
ಸುಶಾಂತ್ ಸಾವಿನ ಸುತ್ತ ದಿನಕ್ಕೊಂದು ಬಗೆಯ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಅನೇಕ ಊಹಾಪೋಹಗಳೂ ಹರಿದಾಡುತ್ತಿವೆ. ಸುಶಾಂತ್ ಸಾಯುವ ಕೆಲವೇ ದಿನಗಳ ಮುನ್ನ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡೂ ಘಟನೆಗಳಿಗೆ ಸಂಬಂಧವಿದೆ. ದಿಶಾ ಅವರದ್ದೂ ಆತ್ಮಹತ್ಯೆಯಲ್ಲ, ಅದು ಕೊಲೆ ಎಂಬ ಆರೋಪವೂ ಇದೆ. ಈ ನಡುವೆ ಏಮ್ಸ್ ವಿಧಿ ವಿಜ್ಞಾನ ವರದಿ ಸಲ್ಲಿಕೆಯಾಗಿದ್ದು, ಸುಶಾಂತ್ ದೇಹದಲ್ಲಿ ಯಾವುದೇ ವಿಷದ ಅಂಶ ಕಂಡುಬಂದಿಲ್ಲ ಎಂದು ತಿಳಿಸಿದೆ.
ಸುಶಾಂತ್ ರಜಪೂತ್ ಪ್ರಕರಣ: ಸಿಬಿಐಗೆ ವರದಿ ಸಲ್ಲಿಸಿದ ಏಮ್ಸ್ ಸಮಿತಿ, ಸಾವಿಗೆ ನಿಜವಾದ ಕಾರಣ ಬಹಿರಂಗ ಸಾಧ್ಯತೆ!
ಸುಶಾಂತ್ ಮೃತಪಟ್ಟ ದಿನದಂದು ಅವರ ನಿವಾಸದಿಂದ ಕೂಪರ್ ಆಸ್ಪತ್ರೆಗೆ ಸಾಗಿಸಿದ ಆಂಬುಲೆನ್ಸ್ ಚಾಲಕ, ಇದು ಆತ್ಮಹತ್ಯೆಯಲ್ಲ. ನಿಸ್ಸಂಶಯವಾಗಿ ಇದೊಂದು ಕೊಲೆ ಎಂದು ಪುನರುಚ್ಚರಿಸಿದ್ದಾನೆ. ಈ ಹಿಂದೆಯೂ ಚಾಲಕ ಇದು ಆತ್ಮಹತ್ಯೆಯಲ್ಲ. ಘಟನೆ ನಡೆದ ರೀತಿ ನೋಡಿದಾಗ ಅದು ಕೊಲೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿಕೆ ನೀಡಿದ್ದ. ಮುಂದೆ ಓದಿ.
ಸುಶಾಂತ್ ಕಾಲು ಮುರಿದಿತ್ತು
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಆಂಬುಲೆನ್ಸ್ ಚಾಲಕ, 'ಅಲ್ಲಿ ಎಲ್ಲವೂ ಅನುಮಾನಾಸ್ಪದವಾಗಿ ಕಾಣಿಸುತ್ತಿತ್ತು. ಅದು ಖಂಡಿತಾ ಆತ್ಮಹತ್ಯೆಯಲ್ಲ, ಕೊಲೆ. ನನಗೆ ಕಂಡಿದ್ದನ್ನು ಹೇಳಿದ್ದೇನೆ. ಅದು ಕೊಲೆ. ಈಗ ಡ್ರಗ್ಸ್ ಆಯಾಮ ಬೆಳಕಿಗೆ ಬಂದಿದೆ. ಮುಂದೆ ಕೊಲೆಯ ಸಂಗತಿ ಕೂಡ ಬಹಿರಂಗವಾಗಲಿದೆ. ಸುಶಾಂತ್ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದರೆ ಅವರ ಕಾಲು ಮುರಿದು ಹೋಗಲು ಸಾಧ್ಯವೇ ಇಲ್ಲ' ಎಂದಿದ್ದಾನೆ.
ಅಲ್ಲಿ ಬೆಳಕು ಸರಿಯಾಗಿರಲಿಲ್ಲ
'ಶವದ ಪರೀಕ್ಷೆ ನಡೆಸಿದ ಕೊಠಡಿಯಲ್ಲಿ ಬೆಳಕು ಸರಿಯಾಗಿ ಇರಲಿಲ್ಲ. ಮಂದ ಬೆಳಕಿನ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಏನು ನಡೆಯುತ್ತಿತ್ತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇದೊಂದು ಕೊಲೆ ಎಂದು ಮಾತ್ರ ಸ್ಪಷ್ಟವಾಗಿ ಹೇಳುತ್ತೇನೆ' ಎಂದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ಮೊದಲ ಹೇಳಿಕೆ
ಯಾವುದೇ ಬಗೆಯ ವಿಷ ಕಂಡುಬಂದಿಲ್ಲ
ಏಮ್ಸ್ ವೈದ್ಯರ ತಂಡವು ಸಿಬಿಐಗೆ ತನ್ನ ವರದಿ ಸಲ್ಲಿಕೆ ಮಾಡಿದ್ದು, ಸುಶಾಂತ್ ಅವರ ದೇಹದಲ್ಲಿ ಯಾವುದೇ ರೀತಿಯ ಜೈವಿಕ ಅಥವಾ ಅಜೈವಿಕ ವಿಷ ಪತ್ತೆಯಾಗಿಲ್ಲ ಎಂದು ತಿಳಿಸಿದೆ ಎನ್ನಲಾಗಿದೆ. ಸುಶಾಂತ್ ಅವರ ಮರಣೋತ್ತರ ಪರೀಕ್ಷೆ ವರದಿ ಹಾಗೂ ಅಂಗಾಂಶ ವರದಿಗಳನ್ನು ಕೂಡ ಅಧ್ಯಯನಕ್ಕೆ ಒಳಪಡಿಸುವಂತೆ ಸಿಬಿಐ ಮನವಿ ಮಾಡಿದೆ.
ಶವಪರೀಕ್ಷೆ ವರದಿಯಲ್ಲಿ ಲೋಪ
ಮುಂಬೈನ್ ಕೂಪರ್ ಆಸ್ಪತ್ರೆ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ಲೋಪಗಳಿರುವುದನ್ನು ಏಮ್ಸ್ ಸಮಿತಿ ಕಂಡುಹಿಡಿದಿದೆ. ಸುಶಾಂತ್ ಪ್ರಕರಣವನ್ನು 'ಆತ್ಮಹತ್ಯೆಗೆ ಪ್ರಚೋದನೆ' ಆಯಾಮದಿಂದ ಸಿಬಿಐ ತನಿಖೆ ಮುಂದುವರಿಸಲಿದೆ ಎಂದು ಮೂಲಗಳು ತಿಳಿಸಿವೆ.