ರೈತರ ಬೇಡಿಕೆಗೆ ತಲೆಬಾಗಿದ ಫಡ್ನವೀಸ್; 'ಕಿಸಾನ್ ಲಾಂಗ್ ಮಾರ್ಚ್' ಅಂತ್ಯ?
ಮುಂಬೈ, ಮಾರ್ಚ್ 12: 'ಕಿಸಾನ್ ಲಾಂಗ್ ಮಾರ್ಚ್' ಹೆಸರಿನಲ್ಲಿ ಮಹಾರಾಷ್ಟ್ರದ ಶಕ್ತಿಸೌಧ ಮುಂಬೈಗೆ ತಮ್ಮ ಬೇಡಿಕೆಗಳನ್ನು ಹೊತ್ತು ತಂದಿದ್ದ 35,000 ಕ್ಕೂ ಅಧಿಕ ರೈತರ ಸಂಘಟನಾ ಶಕ್ತಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಲೆಬಾಗಿದ್ದಾರೆ. 170 ಕಿಲೋಮೀಟರ್ ದೂರದ ನಾಸಿಕ್ ನಿಂದ ನಡೆದು ಬಂದ ಅನ್ನದಾತರ ಹೆಚ್ಚಿನ ಬೇಡಿಕೆಗಳನ್ನು ಅವರು ಒಪ್ಪಿಕೊಂಡಿದ್ದಾರೆ.
ರೈತರ ಪ್ರತಿನಿಧಿಗಳ ಜತೆ ಇಂದು 'ವಿಧಾನ ಭವನ್'ನಲ್ಲಿ ನಡೆದ ಸಂಧಾನ ಕಾರ್ಯಕ್ರಮದ ನಂತರ ಪ್ರತಿಕ್ರಿಯೆ ನೀಡಿದ ದೇವೇಂದ್ರ ಫಡ್ನವೀಸ್, "ಅವರ (ರೈತರ) ಹೆಚ್ಚಿನ ಬೇಡಿಕೆಗಳಿಗೆ ನಾವು ಒಪ್ಪಿಕೊಂಡಿದ್ದೇವೆ ಮತ್ತು ಈ ಸಂಬಂಧ ಅವರಿಗೆ ಲಿಖಿತ ಪತ್ರ ನೀಡಿದ್ದೇವೆ," ಎಂದು ಹೇಳಿದರು.
ದೇಶಕ್ಕೆ ಬೇಕಿರುವುದು ಅಭಿವೃದ್ಧಿ, ಜಾತಿಸಂಘರ್ಷವಲ್ಲ: ಫಡ್ನವಿಸ್
ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಮುಖಂಡರು ಮತ್ತು ರೈತರ ಪ್ರತಿನಿಧಿಗಳ ಜತೆ ನಡೆದ ಸಭೆಯ ನಂತರ ಅವರು ಈ ಹೇಳಿಕೆ ನೀಡಿದರು.
ಇನ್ನು ಪ್ರತಿಭಟನಾಕಾರರು ಜತೆ ನಿರಂತರ ಸಂಪರ್ಕದಲ್ಲಿದ್ದ ಮಹಾರಾಷ್ಟ್ರ ಸಚಿವ ಗಿರೀಸ್ ಮಹಾಜನ್ ಪ್ರತಿಕ್ರಿಯೆ ನೀಡಿ, "ನಾವು ರೈತರ ಜತೆ ಧನಾತ್ಮಕ ಸಭೆ ನಡೆಸಿದೆವು. ಇದರಲ್ಲಿ ಅವರ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದೆವು. 12-13 ಬೇಡಿಕೆಗಳನ್ನು ಅವರು ಹೊತ್ತು ಬಂದಿದ್ದರು. ನಾವು ಕೆಲವನ್ನು ಒಪ್ಪಿಕೊಂಡಿದ್ದೇವೆ. ಅವರಿಗೆ ಈ ಸಂಬಂಧ ಲಿಖಿತ ಕರಡನ್ನು ನೀಡಲಿದ್ದೇವೆ. ಬಹುಶಃ ಅವರು ನಮ್ಮ ತೀರ್ಮಾನಗಳಿಂದ ಸಂತುಷ್ಟರಾಗಿದ್ದೇವೆ," ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮುಖ್ಯಮಂತ್ರಿಗಳು ರೈತರ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿ ಬೇಡಿಕೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಲಿದ್ದಾರೆ. 6 ತಿಂಗಳೊಳಗೆ ಇದು ಆರಂಭವಾಗಲಿದೆ ಎಂದು ಇನ್ನೋರ್ವ ಸಚಿವ ವಿ ಸವ್ರಾ ಹೇಳಿದ್ದಾರೆ.
ಆದರೆ ಕೇವಲ ಆಶ್ವಾಸನೆ ನೀಡಿದರೆ ಸಾಕಾಗುವುದಿಲ್ಲ. ಅವುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. "ಬೇಡಿಕೆಗಳನ್ನು ಇಡೇರಿಸುವ ಬಗ್ಗೆ ಕೇವಲ ಭರವಸೆ ನೀಡಿದರೆ ಸಾಕಾಗುವುದಿಲ್ಲ. ಇದೀಗ ಸರಕಾರ ತಾವು ಒಪ್ಪಿಕೊಂಡಿದ್ದ ಅಂಶಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಾಗಿದೆ. ರೈತರ ಕಾಳಜಿ ಬಗ್ಗೆ ಸರಕಾರ ಚಿಂತನೆ ಮಾಡಬೇಕಾಗಿದೆ. ಇದರಿಂದ ಮುಂದಿನ ಬಾರಿ ಅವರು ಬೀದಿಗೆ ಬರುವ ಪರಿಸ್ಥಿತಿ ಉದ್ಭವಿಸುವುದಿಲ್ಲ," ಎಂದಿದ್ದಾರೆ.
ಆದರೆ ಈ ಬಗ್ಗೆ ರೈತರ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಕಿಸಾನ್ ಲಾಂಗ್ ಮಾರ್ಚ್ ಅಂತ್ಯವಾಗಲಿದೆಯೇ ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.