Breaking: ಸುಪ್ರೀಂನಲ್ಲಿ ಶಿವಸೇನೆಯ ಶಿಂಧೆ ಬಣಕ್ಕೆ ಹಿನ್ನಡೆ
ಮುಂಬೈ, ಆ.04: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಶಿವಸೇನೆ ಪಕ್ಷದ ಮೇಲಿನ ಹಿಡಿತದ ಹೋರಾಟದಲ್ಲಿ ಗುರುವಾರ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಉದ್ಧವ್ ಠಾಕ್ರೆ ಬಣದ ಪ್ರತಿಸ್ಪರ್ಧಿಯಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಅರ್ಜಿಯನ್ನು ಸದ್ಯಕ್ಕೆ ನಿರ್ಧರಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ರಾಜ್ಯದ ಹಾಲಿ ಸಿಎಂ ಏಕನಾಥ್ ಶಿಂಧೆ ಬಣಗಳ ನಡುವಿನ ಶಿವಸೇನೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಪೈಪೋಟಿ ನಡೆಯುತ್ತಿದೆ. ಶಿವಸೇನೆ ಪಕ್ಷದ ಬಿಲ್ಲು ಬಾಣದ ಚಿಹ್ನೆ ಬಳಸಲು ಎರಡು ಬಣಗಳು ಚುನಾವಣಾ ಆಯೋಗದ ಮೆಟ್ಟಿಲು ಹತ್ತಿವೆ.
ಉದ್ಧವ್ ಠಾಕ್ರೆ ನೇತೃತ್ವದ ಬಣವು ಶಿಂಧೆ ಬಣದ ಅರ್ಜಿಯ ಮೇಲಿನ ನೋಟಿಸ್ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದರೆ, ಪ್ರಕರಣವನ್ನು ಮುಂದೂಡಲು ಅವರ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ಒಳಗೊಂಡಿರುವ ಕೆಲವು ಸಮಸ್ಯೆಗಳನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂದು ಆಗಸ್ಟ್ 8ರ ಸೋಮವಾರರಂದು ನಿರ್ಧರಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಹೂಡಿದ್ದ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರ ಪ್ರಟಗೊಳ್ಳುವವರೆಗೂ, ಪಕ್ಷದ ಮೇಲಿನ ನಿಯಂತ್ರಣದ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯಬೇಕು ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವು ಸುಪ್ರೀಂಕೋರ್ಟ್ಗೆ ಮನವಿ ಮಾಡಿತ್ತು.
ಈ ಹಿಂದೆ ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಉದ್ಧವ್ ಠಾಕ್ರೆ, ತನ್ನ ತಂದೆ ಬಾಳಾ ಠಾಕ್ರೆ ಫೋಟೋಗಳನ್ನು ಬಳಸಿ ಮತ ಭಿಕ್ಷೆ ಪಡೆದಿದ್ದಾರೆ ಎಂದು ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ತಂದೆಯ ಫೋಟೋಗಳನ್ನು ಬಳಸಿಕೊಂಡು ಮತ ಕೇಳಿ ನಮ್ಮ ತಂದೆಯ ಫೊಟೋಗಳನ್ನು ಬಳಸಿಕೊಂಡು ಅಲ್ಲ ಎಂದು ನೇರವಾಗಿಯೇ ಶಿಂಧೆ ಬಣದ ವಿರುದ್ಧ ಕಿಡಿ ಕಾರಿದ್ದಾರೆ.
Recommended Video
ಶಿವಸೇನೆಯ ಮುಖವಾಣಿ ಸಾಮ್ನಾಗೆ ನೀಡಿದ್ದ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ " ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಚಿತ್ರಗಳನ್ನು ಬಳಸಿಕೊಂಡು "ಮತಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ". ಅವರು ನನಗೆ ದ್ರೋಹ ಮಾಡಿದ್ದಾರೆ, ಪಕ್ಷವನ್ನು ಒಡೆದಿದ್ದಾರೆ. ಅವರ ತಂದೆಯ ಚಿತ್ರಗಳನ್ನು ಬಳಸಿ ಮತ ಕೇಳಬೇಕು. ಶಿವಸೇನೆಯ ತಂದೆಯ ಚಿತ್ರಗಳನ್ನು ಬಳಸಿಕೊಂಡು ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿ" ಎಂದು ಹೇಳಿದ್ದರು.