ಜನವರಿ 26ರಿಂದ ಶಾಲೆಗಳಲ್ಲಿ ಸಂವಿಧಾನದ ಮುನ್ನುಡಿ ಓದುವುದು ಕಡ್ಡಾಯ
ಮುಂಬೈ, ಜನವರಿ 22: ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲಿ ಜನವರಿ 26ರಿಂದ ಸಂವಿಧಾನದ ಮುನ್ನುಡಿ ಓದುವುದನ್ನು ಕಡ್ಡಾಯ ಮಾಡಲಾಗಿದೆ.
ಪ್ರತಿದಿನ ಬೆಳಗ್ಗೆ ಶಾಲೆ ಆರಂಭವಾಗಿ ಪ್ರಾರ್ಥನೆ ವೇಳೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನದ ಮುನ್ನಡಿಯನ್ನು ಓದಿ ಹೇಳಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ.
ಇದರೊಂದಿಗೆ ಗಣರಾಜ್ಯೋತ್ಸವ ದಿನದಿಂದ ಅಂದರೆ ಭಾರತದ ಸಂವಿಧಾನ ಜಾರಿಗೆ ಬಂದ ದಿನವೇ ಮಹಾರಾಷ್ಟ್ರದ ಎಲ್ಲಾ ಶಾಲೆಗಳು ಪ್ರತಿದಿನ ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ಸಂವಿಧಾನದ ಮುನ್ನುಡಿಯನ್ನು ಪಠಿಸಬೇಕಿದೆ.
ಏಳು ವರ್ಷದ ಹಿಂದಿನ ಆದೇಶ
ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಎನ್ಸಿಪಿ ಸರ್ಕಾರವು 2013ರಲ್ಲಿ ಇಂತಹದೊಂದು ಆದೇಶ ಹೊರಡಿಸಿತ್ತು. ಆದರೆ ನಂತರ ಬಂದಿದ್ದ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ಇದನ್ನು ಜಾರಿ ಮಾಡಿರಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಆದೇಶ ಅನುಷ್ಠಾನಕ್ಕೆ ಮುಂದಾಗಿದೆ.
ಮಕ್ಕಳಿಗೆ ಸಂವಿಧಾನದ ಅರಿವು ಅಗತ್ಯ
ದೇಶದ ಜವಾಬ್ದಾರಿಯುತ ಹಾಗೂ ಜಾಗೃತ ನಾಗರಿಕಾಗುವ ಮುನ್ನ ಸಂವಿಧಾನ ಹಾಗೂ ಸಂವಿಧಾನ ಮುನ್ನಡಿಯಲ್ಲಿರುವ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಹಿಂದೆ ನಮ್ಮ ಸರ್ಕಾರ ಆದೇಶವನ್ನು ಮಾಡಿದ್ದರೂ ಬಿಜೆಪಿ ಇದನ್ನು ಅನುಷ್ಠಾನ ಮಾಡಿರಲಿಲ್ಲ. ಆದರೆ ಈಗ ಮತ್ತೆ ನಮ್ಮ ಮಾತನ್ನು ಉಳಿಸಿಕೊಳ್ಳುವ ಸಮಯ ಬಂದಿದೆ ಎಂದು ಮಹಾರಾಷ್ಟ್ರ ಸಚಿವ ವರ್ಷಾ ಗಾಯಕ್ವಾಡ್ ತಿಳಿಸಿದ್ದಾರೆ.
ಮೌನಕ್ಕೆ ಜಾರಿದ ಬಿಜೆಪಿ
ಬಿಜೆಪಿ ಸರ್ಕಾರ ಸಂವಿಧಾನ ಮುನ್ನಡಿ ಓದುವ ಆದೇಶವನ್ನು ಜಾರಿಮಾಡಲು ಬಿಜೆಪಿ ಹಿಂದೇಟು ಹಾಕಿತ್ತು ಕಾಂಗ್ರೆಸ್ ಟೀಕಿಸಿದೆ. ಆದರೆ ಈ ಟೀಕೆಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನಾವಶ್ಯಕವಾಗಿ ವಿವಾದದಲ್ಲಿ ಸಿಲುಕುವುದು ಬೇಡ ಎನ್ನುವ ತೀರ್ಮಾನಕ್ಕೆ ಬಿಜೆಪಿ ಬಂದಂತಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಪೌರತ್ವ ಕಾಯ್ದೆ ವಿವಾದವನ್ನು ಸಂವಿಆನ ವಿರೋಧಿ ಎಂದು ಹೇಳುತ್ತಿರುವ ಕಾಂಗ್ರೆಸ್ ಇದನ್ನು ಕೂಡ ಬಿಜೆಪಿ ಇರುದ್ಧದ ಹೋರಾಕ್ಕೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾದಂತಿದೆ.
ಸಂವಿಧಾನದ ಮುನ್ನುಡಿಯಲ್ಲೇನಿದೆ?
'ಭಾರತದ ಜನರಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ನಿರ್ಧರಿಸಿದ್ದೇವೆ. ಮತ್ತು ಅದರ ಸಮಸ್ತ ನಾಗರಿಕರಿಗೆ:
ಸಾಮಾಜಿಕ , ಆರ್ಥಿಕ ಮತ್ತು ಸಾಮಾಜಿಕ ನ್ಯಾಯ:ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ:
ಸ್ಥಾನಮಾನ ಹಾಗೂ ಅವಕಾಶ, ಸಮಾನತೆ:
ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಮತ್ತು ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರನ್ನು ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ, ನಮ್ಮ ಸಂವಿಧಾನ ಸಭೆಯಲ್ಲಿ 1949 ರ ನವೆಂಬರ್ ತಿಂಗಳ 26ರನೇ ತಾರೀಖಾದ ಈ ದಿವಸ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮವನ್ನು ಅರ್ಪಿಸಿಕೊಂಡಿದ್ದೇವೆ''.