ಛತ್ರಪತಿ ಶಿವಾಜಿ ಸಮಾಧಿ ಇರುವ ಪ್ರದೇಶ ಅಭಿವೃದ್ಧಿಗೆ 20 ಕೋಟಿ
Recommended Video
ಮುಂಬೈ, ನವೆಂಬರ್.28: ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದ್ಧವ್ ಠಾಕ್ರೆ ರೈತಪರ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸಂಜೆಯಷ್ಟೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಮೊದಲ ಸಂಪುಟ ಸಭೆ ನಡೆಸಿದರು.
ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಿತು. ಈ ವೇಳೆ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳ ಶಾಸಕರು ಉಪಸ್ಥಿತರಿದ್ದರು.
ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣ ಚಿತ್ರಣ
ಛತ್ರಪತಿ ಶಿವಾಜಿ ಹೆಸರಿನಲ್ಲಿ ಪದಗ್ರಹಣ ಮಾಡಿದ ಉದ್ಧವ್ ಠಾಕ್ರೆ, ಛತ್ರಪತಿ ಶಿವಾಜಿಯ ಸಮಾಧಿ ಸ್ಥಳವಿರುವ ರಾಯಗಢ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು. ಅಲ್ಲದೇ, ಶಿವಾಜಿ ಸಮಾಧಿಯಿರುವ ರಾಯಗಢ ಅಭಿವೃದ್ಧಿಗೆ 20 ಕೋಟಿ ರೂಪಾಯಿ ನೀಡಿರುವ ಬಗ್ಗೆ ತಿಳಿಸಿದರು.
ರೈತಪರ ಆಡಳಿತ ನಡೆಸುವ ಭರವಸೆ:
ಮೊದಲ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ರೈತರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಮೈತ್ರಿ ಸರ್ಕಾರ ಆಡಳಿತ ನಡೆಸಲಿದೆ. ಮುಂಬರುವ ದಿನಗಳಲ್ಲಿ ರೈತಪರ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ತ್ರಿಪಕ್ಷ 'ಮಹಾ' ಸರ್ಕಾರ ರಚನೆ: ಠಾಕ್ರೆ ಸಂಪುಟ ಸೇರಿದವರ ಪಟ್ಟಿ
ಇನ್ನು, ಈಗಾಗ್ಲೆ ಘೋಷಿಸಿರುವ ಮೂರು ಪಕ್ಷಗಳ ಸಾಮಾನ್ಯ ಯೋಜನಾ ಪಟ್ಟಿಯಲ್ಲಿರುವ ಅಂಶಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಸೇರಿದಂತೆ ಆರು ಮಂದಿ ಸದಸ್ಯರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸಾಮಾನ್ಯ ಯೋಜನಾ ಪಟ್ಟಿಯಲ್ಲಿನ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭರವಸೆ ನೀಡಿದರು.