'ಮಲ್ಯ ಮೇಲಿರುವ 'ಆರ್ಥಿಕ ಅಪರಾಧಿ' ಟ್ಯಾಗ್ ಕಳಚಲು ಸಾಧ್ಯವಿಲ್ಲ'
ಮುಂಬೈ, ನವೆಂಬರ್ 29: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
'ತಲೆ ಮರೆಸಿಕೊಂಡಿರುವ ಆರ್ಥಿಕ ಅಪರಾಧಿ' ಎಂದು ಮಲ್ಯರನ್ನು ಘೋಷಿಸುವಂತೆ ಜಾರಿ ನಿರ್ದೇಶನಾಲಯ(ಇಡಿ) ಅರ್ಜಿ ಹಾಕಿದೆ. ಆದರೆ, 'ಇಡಿ' ಹಾಕಿರುವ ಅರ್ಜಿಗೆ ತಡೆ ನೀಡುವಂತೆ ಕೋರಿದ್ದ ವಿಜಯ ಮಲ್ಯ ಅವರ ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯವು ಗುರುವಾರ(ನವೆಂಬರ್ 29)ದಂದು ತಿರಸ್ಕರಿಸಿದೆ.
ಮದ್ಯದ ದೊರೆ ವಿಜಯ್ ಮಲ್ಯ ಅವರು ತಮ್ಮನ್ನು ಆರ್ಥಿಕ ಅಪರಾಧಿ ಎಂದು ಹೊಸ ತಿದ್ದುಪಡಿ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯವು ಕರೆದು, ದೋಷರೋಪಣ ಸಲ್ಲಿಸಲು ಮುಂದಾಗಿರುವುದಕ್ಕೆ ತಡೆ ನೀಡುವಂತೆ ಕೋರಿ, ಕೋರ್ಟಿಗೆ ಕಳೆದ ವಾರ ಹಾಕಿದ್ದ ಅರ್ಜಿ ಕೂಡಾ ತಿರಸ್ಕೃತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡ ಮಲ್ಯ
ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಮಲ್ಯ ಅವರು ಘೋಷಿಸಿದ್ದರು.
ಹೀಗಾಗಿ, ಆರ್ಥಿಕ ಅಪರಾಧಿಗಳನ್ನು ಕುರಿತಂತೆ ರೂಪಿಸಲಾಗಿರುವ ಹೊಸ ನಿಯಮದ ಅನ್ವಯ, ಮಲ್ಯ ಒಡೆತನದ 12.5 ಸಾವಿರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯ ಅರ್ಜಿ ಹಾಕಿದೆ.
ಮಲ್ಯ ಕೈತಪ್ಪಲಿದೆ ಲಂಡನ್ನಿನ ಬಂಗಲೆ, ಚಿನ್ನದ ಕಮೋಡ್!
ಭಾರತದ ಬ್ಯಾಂಕುಗಳಿಗೆ ನೀಡಬೇಕಿರುವ 9,000 ಕೋಟಿ ರು ಸಾಲ ಪಾವತಿ, ಮನಿಲಾಂಡ್ರಿಂಗ್, ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು, ಮುಂದಿನ ತಿಂಗಳು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.