ಶಿವಸೇನಾ ಜೊತೆ ಮೈತ್ರಿಗೆ ಸೋನಿಯಾ ಗಾಂಧಿ ಅಸ್ತು: ಬಿಜೆಪಿ ಬೆಸ್ತು
ಮುಂಬೈ, ನವೆಂಬರ್ 20: ಕೊನೆಗೂ ಶಿವಸೇನಾ ಜೊತೆ ಸೇರಿ ಸರ್ಕಾರ ರಚಿಸಲು ಕಾಂಗ್ರೆಸ್ ಒಪ್ಪಿದೆ. ಈ ಬಗ್ಗೆ ಸೋನಿಯಾ ಗಾಂಧಿ 'ತಾತ್ವಿಕ ಒಪ್ಪಿಗೆ' ಸೂಚಿಸಿದ್ದು, ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.
ಶಿವಸೇನಾ ಪಕ್ಷದ ಜೊತೆ ಮೈತ್ರಿ ಸಾಧ್ಯವಿಲ್ಲವೆಂದು ಕೆಲವು ದಿನಗಳ ಹಿಂದಷ್ಟೆ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತ್ತು. ಆದರೆ ಈಗ ತನ್ನ ನಿಲವು ಬದಲಾಯಿಸಿದ್ದು, ಎನ್ಸಿಪಿ ಒತ್ತಾಯದಿಂದಾಗಿ ಶಿವಸೇನಾ ಜೊತೆ ಕೈಜೋಡಿಸಲು ಕಾಂಗ್ರೆಸ್ ಒಪ್ಪಿದೆ ಎನ್ನಲಾಗುತ್ತಿದೆ.
ಶಿವಸೇನಾ ನೇತೃತ್ವದಲ್ಲೇ ಮಹಾರಾಷ್ಟ್ರ ಸರ್ಕಾರ ರಚನೆ: ಸಂಜಯ್ ರಾವತ್
ಡಿಸೆಂಬರ್ ಮೊದಲ ವಾರದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಆಗಲಿದೆ ಎಂದು ಇಂದಷ್ಟೆ ಶಿವಸೇನಾ ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವೆಂಬಂತೆ ಸೋನಿಯಾ ಗಾಂಧಿ ಸಹ ಶಿವಸೇನಾ ಜೊತೆ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಸುಲೆ ಅವರ ದೆಹಲಿ ನಿವಾಸದಲ್ಲಿ ಇಂದು ಸಂಜೆ ಎನ್ಸಿಪಿ ಮುಖಂಡರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದು, ಸರ್ಕಾರ ರಚನೆ ಬಗ್ಗೆ ಅಂತಿಮ ಹಂತದ ಮಾತುಕತೆಗಳು ನಡೆಯಲಿವೆ.
ಶಿವಸೇನಾ ಜೊತೆ ಮೈತ್ರಿಗೆ ಸೋನಿಯಾ ಗಾಂಧಿ ಅವರನ್ನು ಶರದ್ ಪವಾರ್ ಅವರೇ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ಮೈತ್ರಿಯ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳು, ಸಮನ್ವಯ ಸಮಿತಿ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆ ಆಗಿವೆ.
ಶರದ್ ಪವಾರ್-ನರೇಂದ್ರ ಮೋದಿ ಭೇಟಿ: ಮಹಾರಾಷ್ಟ್ರ ಬಿಕ್ಕಟ್ಟಿಗೆ ಅಂತ್ಯ?
ಕೊನೆಯ ಹಂತದ ಮಾತುಕತೆಗಳು ಸರಳವಾಗಿ ಮುಗಿದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಯ ಸರ್ಕಾರವು ಮಹಾರಾಷ್ಟ್ರದಲ್ಲಿ ರಚನೆ ಆಗಲಿದೆ.
ಅಕ್ಟೋಬರ್ 21 ರಂದು ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶೀವಸೇನಾ ಮೈತ್ರಿಯು ಕ್ರಮವಾಗಿ 105 ಮತ್ತು 56 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಯು ಕ್ರಮವಾಗಿ 44 ಮತ್ತು 54 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಇದರಿಂದಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು.
ಪವಾರ್ ಹೇಳಿದ್ದು ಅರ್ಥ ಮಾಡಿಕೊಳ್ಳಲು ನೂರು ಜನ್ಮ ಬೇಕು
ಶಿವಸೇನಾ-ಬಿಜೆಪಿ ಮೈತ್ರಿ ಮುರಿದುಬಿದ್ದ ಕಾರಣ ಶೀವಸೇನಾ-ಎನ್ಸಿಪಿ-ಕಾಂಗ್ರೆಸ್ ಒಟ್ಟುಗೂಡಿ ಸರ್ಕಾರ ರಚನೆಗೆ ಕೈ ಹಾಕಿವೆ.