ದಾಭೋಲ್ಕರ್, ಪನ್ಸಾರೆ ಹತ್ಯೆಗಳ ಮಧ್ಯೆ ಸಾಮ್ಯತೆ ಇದೆಯೆಂದ ತನಿಖಾ ಸಂಸ್ಥೆಗಳು
ಮುಂಬೈ, ಜೂನ್ 14: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಗೋವಿಂದ್ ಪನ್ಸಾರೆ ಇವರಿಬ್ಬರ ಹತ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆಗಳಿವೆ ಎಂದು ಸಿಬಿಐ ಹಾಗೂ ಮಹಾರಾಷ್ಟ್ರ ಸಿಐಡಿ ಶುಕ್ರವಾರದಂದು ಬಾಂಬೆ ಹೈ ಕೋರ್ಟ್ ಗೆ ತಿಳಿಸಿದೆ.
ದಾಭೋಲ್ಕರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬೇಕಿದೆ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಹಾಗೂ ಗೌತಮ್ ಪಟೇಲ್ ಅವರಿಗೆ ತಿಳಿಸಲಾಯಿತು.
ನರೇಂದ್ರ ದಾಬೋಲ್ಕರ್ ಹತ್ಯೆಗೆ ಬೆಳಗಾವಿಯಿಂದ ಬೈಕ್ ಕಳವು!
ಆರೋಪಿಗಳು ಕೃತ್ಯಕ್ಕೆ ಬಳಸಿ, ಆ ನಂತರ ಬೇರ್ಪಡಿಸಿ, ಬಿಸಾಡಿರುವ ನಾಲ್ಕು ನಾಡ ಪಿಸ್ತೂಲುಗಳನ್ನು ಇನ್ನೊಂದು ತಿಂಗಳಲ್ಲಿ ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಲಾಗುವುದು. ಥಾಣೆ ಜಿಲ್ಲೆಯ ಸಮೀಪ ಆ ಪಿಸ್ತೂಲುಗಳನ್ನು ಆರೋಪಿಗಳು ಬಿಸಾಡಿದ್ದಾರೆ ಎಂದು ಸಿಬಿಐನಿಂದ ಕೋರ್ಟ್ ಗೆ ಮಾಹಿತಿ ನೀಡಲಾಯಿತು.
ಕಾರ್ಯಾಚರಣೆ ನಡೆಸುವುದಕ್ಕೆ ಸರಕಾರಿ ಸಂಸ್ಥೆಗಳಿಂದ ಅಗತ್ಯ ಅನುಮತಿ ಬೇಕಾಗಿದ್ದು, ಅದಕ್ಕಾಗಿ ಕಾಯುತ್ತಿರುವುದಾಗಿ ಸಿಬಿಐ ವಕೀಲ್ ಅನಿಲ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ. ಈ ಕಾರ್ಯಾಚರಣೆ ಇನ್ನು ನಿಧಾನ ಆಗಬಾರದು ಎಂದು ಪೀಠವು ಸೂಚನೆ ನೀಡಿತು. ಪನ್ಸಾರೆ ಪ್ರಕರಣದಲ್ಲಿ ಮುಖ್ಯ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸಹಚರರಿಗಾಗಿ ಶೋಧ ನಡೆದಿದೆ ಎಂದು ಸಿಐಡಿ ವಕೀಲ ಅಶೋಕ್ ಮುಂಡರಗಿ ಹೇಳಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಅಂಶಗಳಿವೆಯಾ ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳು ಹೌದು ಎಂಬ ಉತ್ತರ ನೀಡಿವೆ. ಇನ್ನು ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಮುಖ್ಯವಾದ ಅಂಶವೊಂದನ್ನು ಒದಗಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿರುವುದನ್ನು ಸಹ ಈ ಸಮಯದಲ್ಲಿ ಹೇಳಲಾಗಿದೆ.
ದಾಭೋಲ್ಕರ್ ಅವರನ್ನು ಆಗಸ್ಟ್ 20, 2013ರಂದು ಗುಂಡಿಟ್ಟು ಹತ್ಯೆ ಮಾಡಲಾಯಿತು. ಇನ್ನು ಪನ್ಸಾರೆ ಅವರ ಮೇಲೆ ಫೆಬ್ರವರಿ 16, 2015ರಲ್ಲಿ ಗುಂಡು ಹಾರಿಸಿದರೆ, ಅದಾಗಿ ನಾಲ್ಕು ದಿನಕ್ಕೆ ಅವರು ಸಾವನ್ನಪ್ಪಿದ್ದರು.