ಸೊಹ್ರಾಬುದ್ದಿನ್, ಪ್ರಜಾಪತಿ ಎನ್ಕೌಂಟರ್ ನಕಲಿ : ಸಿಬಿಐ ವಾದ ಅಂತಿಮ
ಮುಂಬೈ, ಡಿಸೆಂಬರ್ 04 : ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಅಂತಿಮ ವಾದವನ್ನು ಮುಕ್ತಾಯಗೊಳಿಸಿರುವ ಸಿಬಿಐ, ಸೊಹ್ರಾಬುದ್ದಿನ್ ಶೇಖ್ ಮತ್ತಿತರರ ಎನ್ ಕೌಂಟರ್ ನಕಲಿ ಎಂದು ಒಪ್ಪಿಕೊಂಡಿದೆ.
ರಾಜಸ್ಥಾನ ಮತ್ತು ಗುಜರಾತ್ ನ ಜಂಟಿ ತಂಡ ಸೊಹ್ರಾಬುದ್ದಿನ್ ನನ್ನು 2005ರಲ್ಲಿ ಮತ್ತು ಆತನ ಹತ್ತಿರದ ಸಹಚರ ತುಳಸಿರಾಮ್ ಪ್ರಜಾಪತಿಯನ್ನು 2006ರಲ್ಲಿ ಎನ್ಕೌಂಟರ್ ಮಾಡಿ ಸಾಯಿಸಿತ್ತು. ಈವೆರಡೂ ಎನ್ಕೌಂಟರ್ ಗಳು ನಕಲಿ ಎಂದು ಸಿಬಿಐ ತಪ್ಪೊಪ್ಪಿಕೊಂಡಿದೆ.
ಸೊಹ್ರಾಬುದ್ದೀನ್ ಎನ್ ಕೌಂಟರ್: ಅನುಮಾನ ಮೂಡಿಸಿದ ಇನ್ಸ್ಪೆಕ್ಟರ್ ಹೇಳಿಕೆ
ಸೊಹ್ರಾಬುದ್ದಿನ್ ಗೆ ಲಷ್ಕರ್-ಇ-ತೈಯ್ಬಾ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕವಿತ್ತು ಮತ್ತು ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರನ್ನು ಹತ್ಯೆಗೈಯಲು ಬರುತ್ತಿದ್ದಾನೆ ಎಂದು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿ ಸತ್ಯಕ್ಕೆ ದೂರವಾದದ್ದು ಎಂದು ಪಬ್ಲಿಕ್ ಪ್ರಾಸಿಕ್ಯುಟರ್ ಬಿಪಿ ರಾಜು ಅವರು ಹೇಳಿದ್ದಾರೆ.
ಪ್ರಾಸಿಕ್ಯುಷನ್ ಪರ ಸಾಕ್ಷಿಯಾಗಿ ವಿಚಾರಣೆಗೊಳಪಟ್ಟ ಉದಯಪುರದ ಅಂದಿನ ಜಿಲ್ಲಾ ವಿಶೇಷ ಬ್ರಾಂಚ್ ನ ಸಬ್ ಇನ್ಸ್ಪೆಕ್ಟರ್ ಆಗಿದ್ದ ಕುಂಭ ಸಿಂಗ್ ಅವರು, ತಮಗೆ ಅಂತಹ ಯಾವುದೇ ಮಾಹಿತಿ ಇರಲಿಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆದರೆ, ಆ ಮಾಹಿತಿಯ ಹಿನ್ನೆಲೆ ತಿಳಿದುಕೊಳ್ಳಲು ಏಕೆ ತನಿಖೆ ನಡೆಸಲಿಲ್ಲ ಎಂದು ನ್ಯಾಯಾಧೀಶ ಎಸ್ ಜೆ ಶರ್ಮಾ ಅವರು ಪ್ರಶ್ನಿಸಿದರು.
ನಕಲಿ ಎನ್ಕೌಂಟರ್ ಬಗ್ಗೆ ಹುಟ್ಟಿಕೊಂಡ ಪ್ರಶ್ನೆ
ಸೂರತ್ ನಿಂದ ಅಹ್ಮದಾಬಾದ್ ಗೆ ಹೋಗಲು ಸೊಹ್ರಾಬುದ್ದಿನ್ ಪಡೆದಿದ್ದ ಟಿಕೆಟ್ ಮೇಲೆ ಯಾವುದೇ ರಕ್ತದ ಕಲೆಯಿರಲಿಲ್ಲ. ಅದು ಸೊಹ್ರಾಬುದ್ದಿನ್ ಜೇಬಲ್ಲಿ ಸಿಕ್ಕಿತ್ತು ಎಂದು ಪೊಲೀಸರು ಮೊದಲಿಗೆ ಹೇಳಿಕೆ ನೀಡಿದ್ದರು. ಆ ಟಿಕೆಟ್ ನಿಜವಾಗಿಯೂ ಸೊಹ್ರಾಬುದ್ದಿನ್ ಗೆ ಸೇರಿದ್ದು ಎಂಬ ಬಗ್ಗೆ ಸಂಶಯ ಮೂಡಿತ್ತು. ಆದರೆ, ಸೊಹ್ರಾಬುದ್ದಿನ್ ನಿಂದ ವಶಪಡಿಸಿಕೊಳ್ಳಲಾದ ಡ್ರೈವಿಂಗ್ ಲೆಸೆನ್ಸ್ ಮತ್ತಿತರ ವಸ್ತುಗಳಿಗೆ ರಕ್ತದ ಕಲೆ ಅಂಟಿಕೊಂಡಿತ್ತು. ಇದು ಸಂಶಯಕ್ಕೆ ಈಡು ಮಾಡಿತ್ತು. ಆತನನ್ನು ನಕಲಿ ಎನ್ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿತ್ತು.
ಉತ್ತರವಿಲ್ಲದ ಹಲವಾರು ಪ್ರಶ್ನೆಗಳು
ವಿಚಾರಣೆಯ ಸಂದರ್ಭದಲ್ಲಿ ಸೊಹ್ರಾಬುದ್ದಿನ್ ಗೆ ಪ್ರಾಣಬೆದರಿಕೆ ಇತ್ತು ಎಂದು ಕನಿಷ್ಠ ನಾಲ್ವರು ಹೇಳಿಕೆ ನೀಡಿದ್ದಾರೆ. ಆತ ಸೂರತ್ ನಿಂದ ಬರುತ್ತಿದ್ದ ಎನ್ನುವುದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ಸೊಹ್ರಾಬುದ್ದಿನ್ ನನ್ನು ಎನ್ಕೌಂಟರ್ ಮಾಡಿದ ಸಂದರ್ಭದಲ್ಲಿ ಆತನ ಬಳಿ ಬೈಕ್ ಹೇಗೆ ಬಂತು? ಯಾರು ಆ ಬೈಕನ್ನು ಅವರಿಗೆ ಕೊಟ್ಟರು ಎಂಬುದನ್ನು ಕೂಡ ಸಾಬೀತುಪಡಿಸಲು ಆರೋಪಿ ಪೊಲೀಸರು ವಿಫಲರಾಗಿದ್ದಾರೆ. ಅಲ್ಲದೆ, 2006ರಲ್ಲಿ ಸೊಹ್ರಾಬುದ್ದಿನ್ ನ ಸಹಚರ ಪ್ರಜಾಪತಿಯ ಎನ್ಕೌಂಟರ್ ಅನ್ನು ಕೂಡ ಪ್ಲಾನ್ ಮಾಡಲಾಗಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯುಟರ್ ರಾಜು ಅವರು ವಾದಿಸಿದರು.
ಸೊಹ್ರಾಬುದ್ದೀನ್ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸೋದರನ ಹೇಳಿಕೆ
ಪ್ರಜಾಪತಿಯದೂ ಪ್ಲಾನ್ಡ್ ಮರ್ಡರ್
ಅಲ್ಲದೆ, ಪ್ರಜಾಪತಿ ಬಳಿಯಿದೆ ಎನ್ನಲಾಗಿದ್ದ ಕಂಟ್ರಿ ಪಿಸ್ತೂಲಿನ ಮೇಲೆ ಪ್ರಜಾಪತಿಯ ಬೆರಳಚ್ಚು ಇರಲಿಲ್ಲ. ಖಾರದ ಪುಡಿಯನ್ನು ಎರಚಿ ಪ್ರಜಾಪತಿ ಪರಾರಿಯಾಗಿದ್ದ ಎಂಬ ಪೊಲೀಸರ ವಾದದಲ್ಲಿಯೂ ಯಾವುದೇ ಸತ್ಯಾಂಶವಿಲ್ಲ ಎಂದು ರಾಜು ವಾದ ಮಂಡಿಸಿದ್ದಾರೆ. ಆತ ಒಂದು ವರ್ಷದ ವರೆಗೆ ಪೊಲೀಸರ ಕಸ್ಟಡಿಯಲ್ಲಿ ಇದ್ದ. ಆತ 2006ರ ನವೆಂಬರ್ 27ರಂದು ಪೊಲೀಸರ ಕಸ್ಟಡಿಯಿಂದ ಪರಾರಿಯಾದ ಮತ್ತು ನವೆಂಬರ್ 28ರಂದು ಬೆಳಿಗ್ಗೆ ಎನ್ಕೌಂಟರ್ ನಲ್ಲಿ ಹತನಾದ. ಪರಾರಿಯಾಗಿ ಕೇವಲ ಅರ್ಧ ದಿನದಲ್ಲಿ ಕಂಟ್ರಿ ಪಿಸ್ತೂಲನ್ನು ಪಡೆಯುವುದು ಹೇಗೆ ಸಾಧ್ಯ? ಎಂದು ರಾಜು ಅವರು ಪ್ರಶ್ನಿಸಿದ್ದಾರೆ.
ರಾಜಕಾರಣಿ ಹತ್ಯೆಯ ಸಂಚಿನ ಆರೋಪ
ಈ ಹೈಪ್ರೊಫೈಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಸಿಬಿಐ ಕೈಗೆತ್ತಿಕೊಂಡಿತ್ತು. 2005ರ ನವೆಂಬರ್ 23ರಂದು ಸೊಹ್ರಾಬುದ್ದಿನ್ ಹತ್ಯೆಯಾಗುವ ಮೂರುದಿನ ಮುಂಚೆ ಆತನನ್ನು ಮತ್ತು ಆತನ ಪತ್ನಿಯನ್ನು ಅಪಹರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಆತ ಗುಜರಾತ್ ನಲ್ಲಿ ಕೋಮು ಸೌಹಾರ್ದ ಕದಡಲೆಂದು ಲಷ್ಕರ್-ಇ-ತೈಬಾ ಮತ್ತು ಐಎಸ್ಐ ಜೊತೆ ಕೈಜೋಡಿಸಿದ್ದ ಮತ್ತು ಪ್ರಭಾವಿ ರಾಜಕಾರಣಿಯನ್ನು ಹತ್ಯೆಗೈಯಲು ಸಂಚು ಹೂಡಿದ್ದ ಎಂಬ ಆರೋಪ ಸೊಹ್ರಾಬುದ್ದಿನ್ ಮೇಲೆ ಪೊಲೀಸರು ಹೊರಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 38 ಜನರನ್ನು ಆರೋಪಿಯನ್ನಾಗಿ ಮಾಡಲಾಗಿದೆ.