ಕೊರೊನಾಗೆ ಚಿಕಿತ್ಸೆ ದೊರೆಯದೆ 6 ದಿನದ ಹಸುಳೆ ಸಾವು: 3ನೇ ಅಲೆಗೆ ಇದೇನಾ ಸಿದ್ಧತೆ!?
ಮುಂಬೈ, ಜೂನ್ 6: ಕೊರೊನಾ ವೈರಸ್ಗೆ ತುತ್ತಾಗಿದ್ದ ಆರು ದಿನಗಳ ಹಸುಗೂಸು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟದಲ್ಲಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಫಲ್ಘರ್ನಲ್ಲಿ ಈ ಮಗುವಿನ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗೆ ಅಲೆದಾಡಿದರೂ ಜೀವ ಉಳಿಸಲು ಸಾಧ್ಯವಾಗಲೇ ಇಲ್ಲ.
ಮೇ 31ರಂದು ಜನಿಸಿದ್ದ ಮಗು ಕೊರೊನಾ ವೈರಸ್ಗೆ ತುತ್ತಾಗಿತ್ತು. ಆದರೆ ಸೂಕ್ತ ಚಿಕಿತ್ಸೆಗಾಗಿ 3-4 ಆಸ್ಪತ್ರೆಗಳಿಗೆ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕಡೆಗೆ ನಾಸಿಕ್ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತಾದರೂ ಎರಡು ದಿನಗಳ ಚಿಕಿತ್ಸೆಯ ನಂತರ ಮಗು ಕೊರೊನಾ ವೈರಸ್ಗೆ ಪ್ರಾಣವನ್ನು ಕಳೆದುಕೊಂಡಿದೆ.
ಎಚ್ಚರ.. ಕೊರೊನಾ ಸುಲಭವಾಗಿ ಸಾಯಲ್ಲ..! ಸೂತಕದ ನಡುವೆ ಆಹಾರಕ್ಕೂ ಹಾಹಾಕಾರ..!
ಒಂದೆಡೆ ಕೊರೊನಾ ವೈರಸ್ನ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಅಪಾಯವನ್ನು ಉಂಟು ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತದ ಆಸ್ಪತ್ರೆಗಳ ವೈದ್ಯಕೀಯ ಸೌಲಭ್ಯಗಳ ಸಾಮರ್ಥ್ಯದ ಬಗ್ಗೆ ಹಾಗೂ ಮೂರನೇ ಅಲೆಯ ಸಿದ್ಧತೆಯ ಬಗ್ಗೆ ಇಂತಾ ಘಟನೆಗಳು ಅನುಮಾನ ಹೆಚ್ಚಿಸುವಂತೆ ಮಾಡುತ್ತವೆ.
ಅವಧಿಗೆ ಮುನ್ನ ಜನಿಸಿದ್ದ ಮಗು
ಮಹಾರಾಷ್ಟ್ರದ ಫಲ್ಘರ್ ಜಿಲ್ಲೆಯ ಸಫಾಲೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಅವಧಿ ಪೂರ್ವವಾಗಿ ಜನಿಸಿದ ಮಗುವಿನ ತೂಕ ಹೆಚ್ಚಿನ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಿತ್ತು. ಹೀಗಾಗಿ ಚಿಕಿತ್ಸೆಗೆ ಪೂರಕ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಫಲ್ಘರ್ನ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು.
ಮಗುವಿಗೆ ಕೊರೊನಾ ಪಾಸಿಟಿವ್
ಈ ಸಂದರ್ಭದಲ್ಲಿ ಮಗು ಹಾಗೂ ತಾಯಿಗೆ ಕೊರೊನಾ ಪರೀಕ್ಷೆಯನ್ನು ನಡೆಸಿದಾಗ ತಾಯಿಯ ವರದಿ ನೆಗೆಟಿವ್ ಬಂದಿದ್ದು ಮಗು ಕೊರೊನಾ ವೈರಸ್ಗೆ ತುತ್ತಾಗಿತ್ತು. ಹೀಗಾಗಿ ಮಗುವನ್ನು ತಕ್ಷಣವೇ ಫಲ್ಗಾರ್ನ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಯಿತು. ಸೌಲಭ್ಯಗಳ ಕೊರತೆಯ ಕಾರಣದಿಂದಾಗಿ ಮತ್ತೆ ಮಗು ಜವಾಹರ್ ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗುವಿನ ಆರೋಗ್ಯ ಹದಗೆಡುತ್ತಿದ್ದ ಕಾರಣ ಮತ್ತೆ ಸೂಕ್ತವ್ಯವಸ್ಥೆಗಳಿಲ್ಲ ಎಂಬ ಕಾರಣಕ್ಕೆ ನಾಸಿಕ್ನ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ದಾಖಲಿಸಿಲಾಯಿತು.
ಮತ್ತಷ್ಟು ಕ್ಷೀಣಿಸಿತ್ತು ಆರೋಗ್ಯ
ಕೊನೆಯ ಎರಡು ದಿನಗಳಲ್ಲಿ ಮಗುವಿಗೆ ನಾಸಿಕ್ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತು. ಅದಾಗಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದ ಮಗುವಿನ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಿತ್ತು. ಹುಟ್ಟಿದ ಆರು ದಿನಗಳ ನಂತರ ಶನಿವಾರ ನಾಸಿಕ್ನ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ನ ವಿರುದ್ಧದ ಹೋರಾಟದಲ್ಲಿ ಮಗು ಪ್ರಾಣವನ್ನು ಕಳೆದುಕೊಂಡಿದೆ.
ಇದೇನಾ ಮೂರನೇ ಅಲೆಯ ಸಿದ್ಧತೆ!
ಕೊರೊನಾ ವೈರಸ್ನ ಎರಡನೇ ಅಲೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮೂರನೇ ಅಲೆಯ ಭೀತಿಯೂ ಉಂಟಾಗುತ್ತಿದೆ. ಇಂತಾ ಸಂದರ್ಭದಲ್ಲಿ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರಗಳು ನಾವು ಮೂರನೇ ಎದುರಿಸಲು ಸಿದ್ಧತೆಯನ್ನು ನಡೆಸುತ್ತಿರುವುದಾಗಿಯೂ ಹೇಳಿಕೊಳ್ಳುತ್ತಿದೆ. ಆದರೆ ಈ ಘಟನೆ ವ್ಯವಸ್ಥೆಯನ್ನು ಲೋಪಗಳನ್ನು ಎತ್ತಿ ತೋರಿಸುವಂತಿದೆ.