ಸೋನು ನಿಗಮ್ ಗೆ ಉಗ್ರರಿಂದ ಜೀವ ಬೆದರಿಕೆ
ಮುಂಬೈ, ಫೆಬ್ರವರಿ 05: ಬಾಲಿವುಡ್ಡಿನ ಜನಪ್ರಿಯ ಗಾಯಕ ಸೋನು ನಿಗಮ್ ಅವರಿಗೆ ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಗಾಯಕ ಸೋನು ನಿಗಮ್ ಹಾಗೂ ಇಬ್ಬರು ಬಿಜೆಪಿ ನಾಯಕರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಮುಂಬೈ ಪೊಲೀಸರು ಸೋಮವಾರ ಪ್ರಕಟಿಸಿದ್ದಾರೆ.
ಕೆಲ ಮೂಲಭೂತವಾದಿ ಸಂಘಟನೆಗಳು ಸೋನು ಹತ್ಯೆಗೆ ಸಂಚು ರೂಪಿಸಿವೆ, ಹೀಗಾಗಿ, ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಮಹಾರಾಷ್ಟ್ರದ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
ಹೀಗಾಗಿ ಸೋನು ನಿಗಮ್ ಹಾಗೂ ಮಹಾರಾಷ್ಟ್ರ ಬಿಜೆಪಿಯ ಫೈರ್ ಬ್ರಾಂಡ್ ಶಾಸಕರಾದ ರಾಮ್ ಕದಂ ಹಾಗೂ ಆಶೀಶ್ ಶೆಲಾರ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ ಗಾಯಕ ಸೋನು ನಿಗಮ್!
ಮುಸ್ಲಿಮರ ಅಜಾನ್ ಪ್ರಾರ್ಥನೆಯಿಂದ ಬೆಳಗ್ಗೆ ನಿದ್ದೆ ಹಾಳಾಗುತ್ತಿದೆ ಎಂದು ಈ ಹಿಂದೆ ಸೋನು ನಿಗಮ್ ಟ್ವೀಟ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ಪರ ವಿರೋಧ ಚರ್ಚೆಗಳು ನಡೆದಿತ್ತು. ಇದಲ್ಲದೆ, ರಾಷ್ಟ್ರಗೀತೆ ಬಗ್ಗೆ ಸೋನು ನೀಡಿದ್ದ ಹೇಳಿಕೆ ಕೂಡಾ ಹಲವರ ಕಣ್ಣು ಕೆಂಪಗೆ ಮಾಡಿತ್ತು.
'ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಆಜಾನ್ ಗೆ ಎಚ್ಚರಗೊಳ್ಳಲಿ?' ಈ ಒತ್ತಾಯ ಪೂರ್ವಕ ಮತ ಪದ್ಧತಿ ಭಾರತದಲ್ಲಿ ಕೊನೆಗೊಳ್ಳಲಿದೆ. ಎಂದು ಸೋನು ನಿಗಂ ಟ್ವೀಟ್ ಮಾಡಿದ್ದರು.