ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಬಂಧನ
ಮುಂಬೈ, ಸೆ. 18: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ಮಿಸಿ, ಹೊಸ ಇತಿಹಾಸ ಸೃಷ್ಟಿಸಿದ ಆನಂದ್ ಅಪ್ಪುಗೋಳ್ ಅವರು ಈಗ ಪೊಲೀಸರ ಅತಿಥಿ.
ನಿರ್ಮಾಪಕ ಆನಂದ್ ಅಪ್ಪುಗೊಳ್ ಕಣ್ಣೀರಧಾರೆ
ಆನಂದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯಲ್ಲಿ ಹಣ ತೊಡಗಿಸಿರುವ ಗ್ರಾಹಕರು ಹಣ ವಾಪಸ್ ಮಾಡುವಂತೆ ದುಂಬಾಲು ಬಿದ್ದು, ಪ್ರತಿಭಟನೆ ನಡೆಸಿದ ಸುದ್ದಿ ಈ ಮುಂಚೆ ಓದಿರುತ್ತೀರಿ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಬೆಳಗಾವಿಯಿಂದ ನಾಪತ್ತೆಯಾಗಿದ್ದ ಆನಂದ್ ಅಪ್ಪುಗೋಳ್ ಅವರನ್ನು ಮುಂಬೈನಲ್ಲಿ ಸೋಮವಾರದಂದು ಬಂಧಿಸಿ, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಸರಿ ಸುಮಾರು 300 ಕೋಟಿ ರು ಮೊತ್ತವನ್ನು ಹಿಂತಿರುಗಿಸಲಾಗದೆ ಆನಂದ್ ಪರದಾಡುತ್ತಿದ್ದಾರೆ. 'ಅಪನಗದೀಕರಣದ ನಂತರ ಆಸ್ತಿ ಮಾರಲು ಸಾಧ್ಯವಾಗಿಲ್ಲ. ಎಲ್ಲವನ್ನು ವೈಟ್ ನಲ್ಲೆ ತೋರಿಸಬೇಕಂತೆ, ಅದರಿಂದ ನನಗೆ ನಷ್ಟವಾಗಿದೆ. ಎರಡರಿಂದ ಮೂರು ತಿಂಗಳಲ್ಲಿ ಗ್ರಾಹಕರಿಗೆ ಹಣ ಸಂದಾಯ ಮಾಡುತ್ತೇನೆ. ಗ್ರಾಹಕರು ಯಾರೂ ಧೃತಿಗೆಡಬೇಕಾಗಿಲ್ಲ' ಎಂದು ಆನಂದ್ ಭರವಸೆ ನೀಡಿದ್ದರು. ಆದರೆ, ಅನಂದ್ ಸೇರಿದಂತೆ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು.
ದರ್ಶನ್ ಅಭಿನಯದ ರಾಜ್ಯ ಪ್ರಶಸ್ತಿ ವಿಜೇತ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ನಿರ್ಮಾಪಕರಾದ ಆನಂದ್ ಅವರ ಈ ಸಹಕಾರಿ ಬ್ಯಾಂಕ್ 15ಕ್ಕೂ ಅಧಿಕ ವರ್ಷಗಳಿಂದ 40ಕ್ಕೂ ಅಧಿಕ ಬ್ರ್ಯಾಂಚ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕೆಲ ತಿಂಗಳುಗಳಿಂದ ಬ್ಯಾಂಕ್ ತನ್ನ ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಹಣವನ್ನು ಆನಂದ್ ಅವರು ಬೇರೆ ವ್ಯವಹಾರಕ್ಕೆ ಬಳಸಿರುವ ಬಗ್ಗೆ ಮಾಹಿತಿ ಬಹಿರಂಗವಾದ ಹಿನ್ನಲೆಯಲ್ಲಿ ಗ್ರಾಹಕರ ಆತಂಕಕ್ಕೆ ಒಳಗಾಗಿದ್ದಾರೆ.