ಅಣ್ಣಾ ಹಜಾರೆ ನಿಲುವಾದರೂ ಏನು?; ಶಿವಸೇನೆಯಿಂದ ಟೀಕೆ
ಮುಂಬೈ, ಜನವರಿ 30: ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಶುಕ್ರವಾರ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಣ್ಣಾ ಹಜಾರೆ ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಘೋಷಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ, ಈ ವಿಚಾರದಲ್ಲಿ ಅಣ್ಣಾ ಹಜಾರೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದೆ.
ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ
ರೈತರ ಪರವಾಗಿ ಅಣ್ಣಾ ಹಜಾರೆ ನಿಲ್ಲುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರು ಹಿಂದೆ ಸರಿದರು. ಅವರ ನಿಲುವು ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಶಿವಸೇನಾ ಸಂಪಾದಕೀಯ "ಸಾಮ್ನಾ"ದಲ್ಲಿ ತಿಳಿಸಲಾಗಿದೆ.
ರೈತರ ಚಳವಳಿಯನ್ನು ಹತ್ತಿಕ್ಕಲಾಗುತ್ತಿದೆ ಹಾಗೂ ರೈತರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ ಎಂದು ಕೇಂದ್ರದ ಮೇಲೆ ವಾಗ್ದಾಳಿ ದಾಳಿ ನಡೆಸಿರುವ ಶಿವಸೇನೆ, ಅಣ್ಣಾ ಹಜಾರೆ ಅರಂಭಿಕದಲ್ಲಿ ಬೆಂಬಲ ಘೋಷಿಸಿ ಧೈರ್ಯ ತಂದಿದ್ದರು. ಆದರೆ ಈಗ ಆಗಿದ್ದೇ ಬೇರೆ. ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಣ್ಣಾ ಬೆಂಬಲ ನೀಡುತ್ತಿದ್ದಾರೆಯೇ? ಅವರು ಯಾರ ಕಡೆ ನಿಂತಿದ್ದಾರೆ ಎಂಬುದೂ ತಿಳಿಯುತ್ತಿಲ್ಲ. ಮಹಾರಾಷ್ಟ್ರಕ್ಕಾದರೂ ಈ ಸಂಗತಿ ತಿಳಿದಿರಬೇಕು ಎಂದು ಟೀಕಿಸಿದೆ.
ವಯಸ್ಸಾದ ರೈತರು ಪ್ರತಿಭಟನೆಯಲ್ಲಿದ್ದಾರೆ. ಅವರ ಪರ ಅಣ್ಣಾ ಹಜಾರೆ ನಿಲ್ಲಬೇಕಿತ್ತು. ಬಿಜೆಪಿ ನಾಯಕರೊಂದಿಗೆ ಸೇರಿ ಆಟ ಆಡಬಾರದಿತ್ತು ಎಂದು ಆರೋಪಿಸಿದ್ದಾರೆ.
ಶುಕ್ರವಾರ, ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡ ಅಣ್ಣಾ ಹಜಾರೆ, ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆ ಹೋರಾಟ ಕೈಬಿಟ್ಟಿದ್ದೇನೆ ಎಂದು ಘೋಷಿಸಿದ್ದರು.
ಮೂರು ವರ್ಷಗಳಿಂದಲೂ ರೈತರ ಪರ ನಾನು ಹೋರಾಟ ಮಾಡುತ್ತಿದ್ದೇನೆ. ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು 50%ಗೆ ಏರಿಸಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಈ ಬಗ್ಗೆ ನನಗೆ ಪತ್ರ ಕೂಡ ಬಂದಿದೆ. ಹೀಗಾಗಿ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದು ಅಣ್ಣಾ ಹಜಾರೆ ತಿಳಿಸಿದ್ದರು.
ಅಣ್ಣಾ ಹಜಾರೆ ಹೀಗೆ ದಿಢೀರ್ ನಿರ್ಧಾರ ಬದಲಿಸಿದ್ದನ್ನು ಟೀಕಿಸಿರುವ ಶಿವಸೇನೆ. "ಬರೀ ಬಿಜೆಪಿ ಭರವಸೆಗಳಿಂದ ತೃಪ್ತಿ ಪಟ್ಟುಕೊಂಡುಬಿಡುತ್ತಾರೆ, ಅದೇ ಇಲ್ಲಿನ ಸಮಸ್ಯೆ" ಎಂದು ಹೇಳಿದ್ದಾರೆ.