ಅಯ್ಯಯ್ಯೋ, ಮಮತಾರನ್ನೇ ಮರೆತರಾ ಶಿವಸೇನೆ ನಾಯಕರು?
ಮುಂಬೈ, ನವೆಂಬರ್.28: ಮಹಾರಾಷ್ಟ್ರದಲ್ಲಿ ನಡೆದ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ಏನೋ ನಡೆಯಿತು. ಶಿವಸೇನೆ ಆಚರಿಸಿದ ಹಬ್ಬದಲ್ಲಿ ಘಟಾನುಘಟಿ ನಾಯಕರೇ ಭಾಗವಹಿಸಿದ್ದರು. ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಒಬ್ಬ ಆಪ್ತರನ್ನೇ ಶಿವಸೇನೆ ಮರೆತು ಬಿಟ್ಟಿದೆ.
ಹೌದು, ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಪ್ತ ನಾಯಕಿಯನ್ನೇ ಶಿವಸೇನೆ ಆಹ್ವಾನಿಸಿರಲಿಲ್ಲವಂತೆ. ಇದನ್ನು ಸ್ವತಃ ಆ ಪಕ್ಷದ ಸದಸ್ಯರೇ ಹೇಳಿಕೊಂಡಿದ್ದಾರೆ. ನಮ್ಮ ಪಕ್ಷದ ಮುಖ್ಯಸ್ಥರನ್ನು ಆಹ್ವಾನಿಸಿದ್ದರೆ ಖಂಡಿತವಾಗಿಯೂ ಅವರು ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಆದರೆ, ಆ ಕಡೆಯಿಂದ ಯಾವುದೇ ಆಹ್ವಾನ ಬಂದಿರಲಿಲ್ಲ ಎಂದು ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್ ನಡೆಗೆ ಶಹಬ್ಬಾಶ್ ಎಂದ ಮಮತಾ ಬ್ಯಾನರ್ಜಿ!
ಅಷ್ಟಕ್ಕೂ ಶಿವಸೇನೆ ಮರೆತಿದ್ದು ಯಾವುದೋ ಸಣ್ಣ ಪಾರ್ಟಿ ಮುಖಂಡರನ್ನು ಅಲ್ಲವೇ ಅಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲಕ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು. ಹೌದು, ಈ ಬಗ್ಗೆ ಟಿಎಂಸಿಯ ರಾಜ್ಯಸಭಾ ಮುಖಂಡ ದೇರೆಕ್ ಒಬ್ರಿಯನ್ ಹೇಳಿಕೆ ನೀಡಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನವೆಂಬರ್.28ರಂದು ನಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ದೇರೆಕ್ ಒಬ್ರಿಯನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟ್ ಬ್ಯಾನ್ ನೀತಿ ವಿರೋಧಿಸುವಲ್ಲಿ ಶಿವಸೇನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬೆಂಬಲ ಸೂಚಿಸಿದ್ದರು. ಸಾಕಷ್ಟು ವಿಷಯಗಳಲ್ಲಿ ಶಿವಸೇನೆ ಜೊತೆಗೆ ದೀದಿ ಉತ್ತಮ ಬಾಂಧವ್ಯ ಹೊಂದಿದ್ದರು. ಅಲ್ಲದೇ, ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಮತಾ ಬ್ಯಾನರ್ಜಿ ಟ್ವಿಟರ್ ನಲ್ಲಿ ಶುಭಾಷಯವನ್ನು ಸಹ ಕೋರಿದ್ದಾರೆ ಎಂದು ಓಬ್ರಿಯನ್ ಹೇಳಿದ್ದಾರೆ.