ಶಿವಸೇನೆ-ಎನ್ಸಿಪಿ ಸರಕಾರ ಸಾಧ್ಯತೆ: ಅದೆಷ್ಟು ವ್ಯಥೆ ಪಡುತ್ತಿದೆಯೋ ಬಾಳಾ ಠಾಕ್ರೆ ಆತ್ಮ!
ಮಹಾರಾಷ್ಟ್ರ ಚುನಾವಣೆಯ ಪ್ರಚಾರದ ವೇಳೆ, ಬಿಜೆಪಿಯ ಮುಖಂಡರು ಶಿವಸೇನೆಯ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕ್ಷೇತ್ರದಲ್ಲೂ ಪ್ರಚಾರ ನಡೆಸಿದ್ದರು. ಕಾರಣ, ಬಿಜೆಪಿ-ಶಿವಸೇನೆಯ ಚುನಾವಣಾಪೂರ್ವ ಮೈತ್ರಿ. ಬಿಜೆಪಿ ಅತ್ಯಂತ ಸ್ಪಷ್ಟವಾಗಿ ದೇವೇಂದ್ರ ಫಡ್ನವೀಸ್ ತನ್ನ ಸಿಎಂ ಅಭ್ಯರ್ಥಿಯೆಂದು ಘೋಷಿಸಿತ್ತು.
ಆದರೆ, ಚುನಾವಣಾ ಫಲಿತಾಂಶದಿಂದ ಬದಲಾದ ರಾಜಕೀಯ ಸಮೀಕರಣದಿಂದಾಗಿ ಶಿವಸೇನೆ 50:50 ಫಾರ್ಮುಲಾ ಎಂದು ಹೇಳುತ್ತಿದೆ. ಜೊತೆಗೆ, ಸಿಎಂ ಹುದ್ದೆಯೂ ಬೇಕು ಎನ್ನುತ್ತಿದೆ.
ಮುಖ್ಯಮಂತ್ರಿ ಹುದ್ದೆಯ ಮೇಲಿನ ಸೆಳೆತ, ರಾಜಕಾರಣಿಗಳಿಗೆ ಸಹಜ. ಆದರೆ, ಬಿಜೆಪಿಯನ್ನು ದೂರ ತಳ್ಳಿ, ಎನ್ಸಿಪಿ-ಕಾಂಗ್ರೆಸ್ ಜೊತೆ, ಶಿವಸೇನೆ ಕೈಜೋಡಿಸಲು ಮುಂದಾಗಿದೆ. ಇದು, ಸಮಾಯಾಧಾರಿತ/ಅನೂಕಲ ಸಿಂಧು ರಾಜಕಾರಣ, ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದನ್ನು ಮಹಾರಾಷ್ಟ್ರ ರಾಜಕೀಯ ತೋರಿಸುತ್ತಿದೆ.
ಸರ್ಕಾರ ರಚಿಸಲು ಶಿವಸೇನಾಗೆ ಆಹ್ವಾನ ನೀಡಿದ ಮಹಾ ರಾಜ್ಯಪಾಲ
ಯಾವ ಪಕ್ಷದ ಜೊತೆಗೆ ಶಿವಸೇನೆ ಮೈತ್ರಿ ಮಾಡಿಕೊಳ್ಳಲು ಈಗ ಮುಂದಾಗಿದೆಯೋ, ಆ ಪಕ್ಷದ ಮುಖಂಡರನ್ನು ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಹಿಂದೊಮ್ಮೆ 'ಥಗ್ಸ್ ಆಫ್ ಇಂಡಿಯಾ' ಎಂದು ಜರಿದಿದ್ದರು. ಈಗ, ಅವರ ಆತ್ಮ ಅದೆಷ್ಟು ವ್ಯಥೆ ಪಡುತ್ತಿದೆಯೋ ಎಂದು ಬಿಜೆಪಿ ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ. ಬಾಳಾ ಠಾಕ್ರೆ ಹಿಂದೆ ಹೇಳಿರುವ ಮಾತಿನ ರಿವೈಂಡ್..
ಥಗ್ಸ್ ಆಫ್ ಇಂಡಿಯಾ' ಎಂದು ಜರಿದಿದ್ದ ಠಾಕ್ರೆ
"ಈ ಗಾಂಧಿ ಕುಟುಂಬದ ಐದು ಕುಡಿಗಳಿವೆಯಲ್ಲಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ, ರಾಬರ್ಟ್ ವಾಧ್ರಾ ಮತ್ತು ಅಹಮದ್ ಪಟೇಲ್ ಇವರೆಲ್ಲಾ ಭಾರತದ ದೊಡ್ಡ ಕೊಲೆಗಡುಕರು. ಈ ಐವರಲ್ಲಿ ಸೋನಿಯಾ ವಿದೇಶಿ ಮೂಲದವಳು" ಎಂದು ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಹೇಳಿದ್ದರು.
ಪಕ್ಷದ ಉತ್ತಮ ನಾಯಕರನ್ನು ಬಿಟ್ಟು ಇಟೆಲಿ ಮಹಿಳೆಯ ಪಾದಕ್ಕೆ ಬಿದ್ದರು
"ಈ ಕಾಂಗ್ರೆಸ್ಸಿನವರು ಹೇಗೆಂದರೆ, ಪಕ್ಷದ ಉತ್ತಮ ನಾಯಕರನ್ನು ಬಿಟ್ಟು ಇಟೆಲಿ ಮಹಿಳೆಯ ಪಾದಕ್ಕೆ ಬಿದ್ದರು. ಅವರೆಲ್ಲಾ ಎಷ್ಟು ಅಸಹಾಯಕ ಹಿಂದೂಗಳೆಂದರೆ, ಅವರ ಬಗ್ಗೆ ನನ್ನ ಬಾಯಿಯಿಂದ ಹೇಳದೇ ಇರುವುದೇ ಉತ್ತಮ" ಎಂದು ಠಾಕ್ರೆ, ಕಾಂಗ್ರೆಸ್ಸಿಗರ ಹುಟ್ಟಿನ ಮೂಲವನ್ನೇ ಕೆದಕಿದ್ದರು.
ಬಾಳ್ ಠಾಕ್ರೆ, ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನ
"ಯಾರು ಇಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಆಮೇಲಿನ ಮಾತು. ಮೊದಲು ನಾವು (ಬಿಜೆಪಿ-ಶಿವಸೇನೆ) ಸರಕಾರ ರಚಿಸಬೇಕು. ನಮ್ಮಿಬ್ಬರಲ್ಲಿ ಯಾವ ಪಕ್ಷದ ಹೆಚ್ಚಿನ ಶಾಸಕರು ಇದ್ದರೋ, ಆ ಪಕ್ಷದವರೇ ಮುಖ್ಯಮಂತ್ರಿಯಾಗುವುದೇ ನೈತಿಕತೆ" ಎಂದು ಬಾಳಾ ಠಾಕ್ರೆ, ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಎನ್ಸಿಪಿ - ಕಾಂಗ್ರೆಸ್ ಮೈತ್ರಿ 'ಅಫ್ಜಲ್ ಖಾನ್ ಕೀ ಔಲಾದ್'
ಇನ್ನು ಚುನಾವಣಾ ಪ್ರಚಾರದ ವೇಳೆ ಶಿವಸೇನೆಯ ಮುಖಂಡರು, ಎನ್ಸಿಪಿ - ಕಾಂಗ್ರೆಸ್ ಮೈತ್ರಿಯನ್ನು 'ಅಫ್ಜಲ್ ಖಾನ್ ಕೀ ಔಲಾದ್' ಎಂದು ಟೀಕಿಸಿದ್ದರು. ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಶರದ್ ಪವಾರ್ ಮತ್ತು ಸೋನಿಯಾ ಗಾಂಧಿ ವಿರುದ್ದ ಸಂಪಾದಕೀಯದಲ್ಲಿ ಟೀಕಿಸಿದ ಉದಾಹರಣೆ ಲೆಕ್ಕವಿಲ್ಲದಷ್ಟು.
ಅಮಿತ್ ಶಾ ಎಂಡ್ ಗ್ಯಾಂಗ್ ಶಿವಸೇನೆಯನ್ನು ಮುಗಿಸಲು ಹೊರಟಿದೆ
ಅಯೋಧ್ಯೆಯ ತೀರ್ಪು ಈಗ ಹೊರಬಿದ್ದಿದೆ. ದಶಕಗಳ ಕೆಳಗೆ ಶಿವಸೇನೆ ಮತ್ತು ಬಿಜೆಪಿ ಜಂಟಿಯಾಗಿ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಬೀದಿಗಿಳಿದಿದ್ದವು. "ಸಿಹಿಯಾಗಿ ಮಾತನಾಡುತ್ತಾ ಅಮಿತ್ ಶಾ ಎಂಡ್ ಗ್ಯಾಂಗ್ ಶಿವಸೇನೆಯನ್ನು ಮುಗಿಸಲು ಹೊರಟಿದೆ" ಎನ್ನುವುದು ಉದ್ಧವ್ ಠಾಕ್ರೆ ಅಭಿಪ್ರಾಯ.
ಶಿವಸೇನೆಗೆ ಸರಕಾರ ರಚಿಸಲು ಆಹ್ವಾನ
ಸರಕಾರ ರಚಿಸಲು ರಾಜ್ಯಪಾಲರಿಂದ ಆಹ್ವಾನ ಬಂದಿದ್ದರೂ, ಬಿಜೆಪಿ ನಂಬರ್ ಗೇಮ್ ಇಲ್ಲದೇ ಇರುವುದರಿಂದ ಹಿಂದಕ್ಕೆ ಸರಿದಿದೆ. ರಾಜ್ಯಪಾಲರು, ಶಿವಸೇನೆಯನ್ನು ಸರಕಾರ ರಚಿಸಲು ಆಹ್ವಾನಿಸಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ರಾಜ್ಯದಲ್ಲಿ ಎನ್ಸಿಪಿ ಜೊತೆ ನೇರಾನೇರಾ ಭಿನ್ನಾಭಿಪ್ರಾಯ ಹೊಂದಿದ್ದ, ಬಾಳಾ ಠಾಕ್ರೆ ಆತ್ಮ, ಈಗ ಮಗನ ನಿರ್ಧಾರದಿಂದ ಅದೆಷ್ಟು ವ್ಯಥೆ ಪಡುತ್ತಿದೆಯೋ?