ನವೆಂಬರ್.25ರಂದು ಸಂಜೆ 7 ಗಂಟೆಗೆ 'ಮಹಾ' ರಾಜಭವನದಲ್ಲಿ ನಡೆಯೋದೇ ಬೇರೆ!
ಮುಂಬೈ, ನವೆಂಬರ್.25: ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಮಾಡಿದ್ದ ವಿಪಕ್ಷಗಳು ಪ್ಲಾನ್ ಎಲ್ಲ ಉಲ್ಟಾ ಹೊಡೆದಿದ್ದು ಆಗಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಸರ್ಕಾರ ರಚಿಸಿರುವ ಬಿಜೆಪಿಗೆ ಚೆಕ್ ಮೇಟ್ ಕೊಡಲು ಮಿತ್ರಪಕ್ಷಗಳು ಅಣಿಯಾಗುತ್ತಿವೆ. ಒಂದೆಡೆ ಎನ್ ಸಿಪಿಯ ಎಲ್ಲ ಶಾಸಕರು ತಮ್ಮ ಜೊತೆಗೇ ಇದ್ದಾರೆ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸುವ ಮಾತೇ ಇಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆ ನೀಡಿದ್ದು ಆಗಿದೆ.
ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟ
ಸುಪ್ರೀಂಕೋರ್ಟ್ ಅಂಗಳದಲ್ಲಿ ಸರ್ಕಾರದ ಭವಿಷ್ಯ ನಿಂತಿದೆ. ನವೆಂಬರ್.25ರಂದು ದೇವೇಂದ್ರ ಫಡ್ನವೀಸ್ ಸರ್ಕಾರದ ಬಗ್ಗೆ ಮಹತ್ವದ ತೀರ್ಪು ಹೊರಡಿಸುವ ನಿರೀಕ್ಷೆಗಳಿವೆ. ಇದರ ಮಧ್ಯೆ ಶಿವಸೇನೆ ಮುಖಂಡ ಸಂಜಯ್ ರಾವತ್ ಶಾಕಿಂಗ್ ಟ್ವೀಟ್ ಮಾಡಿದ್ದಾರೆ.
'ಮಹಾ' ರಾಜಭವನದಲ್ಲಿ ಶಾಸಕರ ಪರೇಡ್
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿ ತನಗೆ ಎನ್ ಸಿಪಿ ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದೆ. ಇದರ ಮಧ್ಯೆ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ನಾಯಕರೆಲ್ಲ ಸೇರಿಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇಂದು ಸಂಜೆ ಮಹಾರಾಷ್ಟ್ರ ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಎದುರು ಮೂರು ಪಕ್ಷದ ಶಾಸಕರು ಪರೇಡ್ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, 162 ಮಂದಿ ಶಾಸಕರ ಬೆಂಬಲ ನಮಗಿದೆ. ರಾಜ್ಯಪಾಲರ ಎದುರಿನಲ್ಲಿ ಎಲ್ಲ ಶಾಸಕರು ಸೇರಿಕೊಂಡು ಪರೇಡ್ ನಡೆಸಲಿದ್ದಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.