ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯೇಟು ಕೊಡ್ಬೇಕೆನಿಸಿದೆ : ಉದ್ಧವ್ ಠಾಕ್ರೆ
ಮುಂಬೈ, ಮೇ 27: ಛತ್ರಪತಿ ಶಿವಾಜಿ ಮಹಾರಾಜ್ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಾದರಕ್ಷೆ ತೊಟ್ಟು ಅವಮಾನ ಮಾಡಿದ್ದಾರೆ. ಆದಿತ್ಯನಾಥ್ ಗೆ ಚಪ್ಪಲಿಯೇಟು ಕೊಡಬೇಕಿನಿಸುತ್ತದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಉದ್ಧವ್, ಆತ ಯೋಗಿಯಲ್ಲ, ಭೋಗಿ ಎಂದು ಜರೆದಿದ್ದಾರೆ. ಮಹಾರಾಷ್ಟ್ರದ ಪಲ್ಘರ್ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ಶಿವಸೇನಾ ನಡುವೆ ಮಹಾರಾಷ್ಟ್ರದಲ್ಲಿ ಮೈತ್ರಿ ಇದ್ದೂ ಇಲ್ಲದ್ದಂತಾಗಿರುವ ಪರಿಸ್ಥಿತಿಯಲ್ಲಿ ಯೋಗಿ ಅವರ ಭೇಟಿ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಪ್ರಮಾದವನ್ನು ಉಲ್ಲೇಖಿಸಿ, ಟೀಕಿಸಲಾಗಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಶಿವಸೇನಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜಿದ್ದಾಜಿದ್ದಿಯ ಹೋರಾಟ ನಿರೀಕ್ಷಿಸಲಾಗಿದೆ.
ಉದ್ಧವ್ ಠಾಕ್ರೆ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ, ಆತನಿಗೆ ಸತ್ಯ ಗೊತ್ತಿಲ್ಲ, ನಾನು ಉದ್ಧವ್ ಠಾಕ್ರೆಯಿಂದ ಸಂಸ್ಕಾರ ಕಲಿಯಬೇಕಾಗಿಲ್ಲ, ನಾನು ಆತನಿಗಿಂತ ಸಂಸ್ಕಾರವಂತ, ಗೌರವ ಸಲ್ಲಿಸುವುದು ಹೇಗೆ ಎಂಬುದನ್ನು ಅವರಿಂದ ಅರಿಯಬೇಕಿಲ್ಲ ಎಂದಿದ್ದಾರೆ.
ಮೇ 28ರಂದು ನಡೆಯಲಿರುವ ಚುನಾವಣೆಗಾಗಿ ಪ್ರಚಾರ ನಡೆಸುವ ವೇಳೆಯಲ್ಲಿ ಉದ್ಧವ್, "ತಮ್ಮದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲ್ಲಲಾರದವರನ್ನು ಇಲ್ಲಿಗೆ ಕರೆಸಿ ಪ್ರಚಾರ ಮಾಡಿಸುತ್ತಾರೆ," ಎಂದು ಬಿಜೆಪಿಯನ್ನು ಅಪಹಾಸ್ಯ ಮಾಡಿದರು. ಪೂಜ್ಯ ಸ್ಥಳಗಳಲ್ಲಿ ಚಪ್ಪಲಿ ತೆಗೆದು ಹೋಗುವುದು ಹಿಂದೂಗಳ ಸಂಪ್ರದಾಯ. ಆದರೆ, ಯೋಗಿ ದುರಹಂಕಾರದಿಂದ ವರ್ತಿಸಿದ್ದಾರೆ. ಮರಾಠ ಚಕ್ರವರ್ತಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.