ದೆಹಲಿಯಲ್ಲಿ ಪಟಾಕಿ ನಿಷೇಧ: ವಿರೋಧಿಸಿದ ಶಿವ ಸೇನೆ
ಮುಂಬೈ, ಅಕ್ಟೋಬರ್ 12: ನವದೆಹಲಿಯಲ್ಲಿ ಪಟಾಕಿ ನಿಷೇಧಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಶಿವಸೇನೆ ವಿರೋಧಿಸಿದೆ. ಇದು ಹಿಂದುಗಳ ಪ್ರಮುಖ ಹಬ್ಬವಾದ ದೀಪಾವಳಿಯ ಉತ್ಸಾಹವನ್ನೇ ಕಸಿಯುತ್ತಿದೆ ಎಂದು ದೂರಿದೆ.
ಕರ್ನಾಟಕದಲ್ಲೂ ಪಟಾಕಿ ನಿಷೇಧಿಸಬೇಕಾ? ಒನ್ ಇಂಡಿಯಾ ಓದುಗರು ಏನಂತಾರೆ?
ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ "ಪಟಾಕಿಯಿಂದ ವಾಯುಮಾಲಿನ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಇವುಗಳಿಂದ ಎಷ್ಟು ಪ್ರಮಾಣದ ವಾಯುಮಾಲಿನ್ಯವಾಗುತ್ತಿದೆ ಎಂಬ ಬಗ್ಗೆ ಎಲ್ಲಿಯೂ ಹೇಳಿಲ್ಲ. ನಿಜಕ್ಕೂ ಪಟಾಕಿಯಿಂದ ಮಾಲಿನ್ಯವಾಗುತ್ತದೆಯೇ ಎಂಬುದು ಯೋಚಿಸಬೇಕಾದ ವಿಷಯ" ಎಂದಿದೆ.
"ಪಟಾಕಿ ನಿಷೇಧದ ನಿರ್ಧಾರದಿಂದ ಪಟಾಕಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸಾವಿರಾರು ಜನ ಕೆಲಸ ಕಳೆದುಕೊಳ್ಳುತ್ತಾರೆ. ಅವರು ಹೊಟ್ಟೆ ಪಾಡಿಗೆ ಏನು ಮಾಡಬೆಕು? ಅವರ ಜೀವನಕ್ಕೆ ಪರ್ಯಾಯವಾಗಿ ಯಾವುದಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ? ಅಥವಾ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕೆ?" ಎಂದು ಖಾರವಾಗಿ ಪ್ರಶ್ನಿಸಿದೆ.
ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿರುವ ಕಾರಣದಿಂದ ಪರಿಸರ ಸ್ನೇಹಿ ದೀಪಾವಳಿಗೆ ನಾಂದಿಹಾಡಲು ಸುಪ್ರೀಂ ಕೋರ್ಟ್, ಪಟಾಕಿಗಳ ಮೇಲೆ ನಿಷೇಧ ಹೇರಿತ್ತು.