ಶಿವಸೇನೆಯ 'ಮಹಾ ಸಿಎಂ' ಆಸೆಯನ್ನು ಮತ್ತೊಮ್ಮೆ ಹೇಳಿದ ಉದ್ಧವ್ ಠಾಕ್ರೆ
ಮುಂಬೈ, ಅಕ್ಟೋಬರ್ 7: ಮಗ ಆದಿತ್ಯ ಠಾಕ್ರೆ ರಾಜಕೀಯ ಪ್ರವೇಶ ಮಾಡಿದಾಕ್ಷಣ ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗ್ತೀನಿ ಅಂತಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಮುಖವಾಣಿ 'ಸಾಮ್ನಾ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜತೆಗೆ ಮೈತ್ರಿ ಪಕ್ಷವಾದ ಬಿಜೆಪಿ ಜತೆಗೆ ಮಾಡಿಕೊಂಡ ಹೊಂದಾಣಿಕೆ ಬಗ್ಗೆ ಕೂಡ ಮಾತನಾಡಿದ್ದಾರೆ.
ಮುಂದೆ ರಚನೆ ಆಗಲಿರುವ ಹೊಸ ಸರ್ಕಾರದಲ್ಲಿ ಶಿವಸೇನಾದಿಂದ 'ಸಮಾನ' ಜವಾಬ್ದಾರಿ ನಿರೀಕ್ಷಿಸಲಾಗಿತ್ತು ಎಂದು ಹೇಳಿದ್ದಾರೆ. ಈ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಫಲಿತಾಂಶ ಬಂದ ನಂತರ ನನ್ನ ಮಗ ಆದಿತ್ಯ (ವೊರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ) CM ಅಥವಾ DCM ಆಗುವ ಗುರಿ ಇಟ್ಟುಕೊಂಡಿಲ್ಲ ಎಂದಿದ್ದಾರೆ ಉದ್ಧವ್.
ಮಹಾರಾಷ್ಟ್ರ ಚುನಾವಣೆ: ಎನ್ ಸಿಪಿ- ಕಾಂಗ್ರೆಸ್ ಮೈತ್ರಿಯಿಂದ ಭರ್ಜರಿ ಪ್ರಣಾಳಿಕೆ
ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆಗೆ ಇಳಿದಿದ್ದಾರೆ. ಶಿವಸೇನೆ ಸ್ಥಾಪಕ ಬಾಳ್ ಠಾಕ್ರೆ ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಆಧಿಕಾರ ನಡೆಸಲು ಬಯಸಿದ್ದವರು. ಆದರೆ ಈ ಬಾರಿ ಅವರ ಮೊಮ್ಮಗ ಆದಿತ್ಯ ಸ್ಪರ್ಧಿಸುತ್ತಿದ್ದಾರೆ.
"ಆದಿತ್ಯ ಸ್ಪರ್ಧಿಸುತ್ತಿರುವ ಅರ್ಥ ತಕ್ಷಣ ಸಿಎಂ ಅಥವಾ ಡಿಸಿಎಂ ಆಗುತ್ತಾನೆ ಅಂತಲ್ಲ. ಶಾಸಕನಾಗಿ ಅನುಭವ ಪಡೆಯಲು ಬಯಸಿದ್ದಾನೆ. ಆತನಿಗೆ ಅದರಲ್ಲಿ ಆಸಕ್ತಿ ಇದೆ" ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಆದರೆ, ಮುಂದೆ ಒಂದಲ್ಲ್ ಒಂದು ದಿನ ಶಿವ ಸೈನಿಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾನೆ. ಇದು ನನ್ನ ತಂದೆ- ಶಿವ ಸೇನಾ ಸ್ಥಾಪಕರಾದ ಬಾಳ್ ಠಾಕ್ರೆ ಅವರಿಗೆ ಕೊಟ್ಟಿದ್ದ ಮಾತು ಎಂದು ಉದ್ಧವ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಒಟ್ಟು ವಿಧಾನಸಭಾ ಸ್ಥಾನಗಳು 288. ಅದರಲ್ಲಿ ಶಿವಸೇನಾ 124 ಸ್ಥಾನಗಳಲ್ಲಿ ಹಾಗೂ ಮೈತ್ರಿ ಪಕ್ಶ್ಶ ಬಿಜೆಪಿ 150 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಸಣ್ಣ- ಪುಟ್ಟ ಮಿತ್ರ ಪಕ್ಷಗಳಿಗೆ 14 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ.