ಮಹಾರಾಷ್ಟ್ರ: ನಿವೃತ್ತ ನೌಕಾಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತರಿಂದ ಹಲ್ಲೆ
ಮುಂಬೈ, ಸೆಪ್ಟೆಂಬರ್ 11: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕುರಿತಾದ ಕಾರ್ಟೂನ್ ಒಂದನ್ನು ವಾಟ್ಸಾಪ್ನಲ್ಲಿ ಫಾರ್ವರ್ಡ್ ಮಾಡಿದ್ದಕ್ಕಾಗಿ ನೌಕಾ ಪಡೆಯ ನಿವೃತ್ತ ಅಧಿಕಾರಿ ಮೇಲೆ ಶಿವಸೇನಾದ ಕಾರ್ಯಕರ್ತರು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಪೂರ್ವ ಕೊಂಡಿವಳಿ ಪ್ರದೇಶದಲ್ಲಿ ನಡೆದ ಈ ಘಟನೆ ಸಂಬಂಧ ಶಿವ ಸೇನಾದ ಶಾಖಾ ಪ್ರಮುಖ್ ಕಮಲೇಶ್ ಕದಂ ಮತ್ತು ಪಕ್ಷದ ಮತ್ತೊಬ್ಬ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಉದ್ಧವ್ ಠಾಕ್ರೆ ಅವರನ್ನು ಅಣಕಿಸುವಂತಹ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಸಮ್ತಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತಮಗೆ ಬಂದಿದ್ದ ವಾಟ್ಸಾಪ್ ಸಂದೇಶದಲ್ಲಿದ್ದ ಕಾರ್ಟೂನ್ ಒಂದನ್ನು 62 ವರ್ಷದ ಮದನ್ ಶರ್ಮಾ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹಂಚಿಕೊಂಡಿದ್ದರು. ಕೆಲವು ಸಮಯದ ಬಳಿಕ ಅವರಿಗೆ ಕರೆ ಮಾಡಿದ ಕೆಲವರು ನಿಮ್ಮ ಬಳಿ ಮಾತನಾಡಬೇಕು, ಮನೆಯಿಂದ ಹೊರಬನ್ನಿ ಎಂದು ಹೇಳಿದ್ದರು. ಅದರ ಅರಿವಿಲ್ಲದ ಮದನ್ ಶರ್ಮಾ, ತಮ್ಮ ನಿವಾಸದಿಂದ ಹೊರಗೆ ಬರುತ್ತಿದ್ದಂತೆಯೇ ಶಿವಸೇನಾದ ಸುಮಾರು ಆರು ಕಾರ್ಯಕರ್ತರು ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಮದನ್ ಶರ್ಮಾ ಅವರ ಕೊರಳಪಟ್ಟಿ ಹಿಡಿದೆಳೆದು ಮುಖದ ಮೇಲೆ ಬಾರಿಸುವ ದೃಶ್ಯಗಳು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.
ಘಟನೆಯಲ್ಲಿ ಹಲ್ಲೆಗೊಳಗಾದ ಮದನ್ ಶರ್ಮಾ ಅವರನ್ನೇ ಐಟಿ ಕಾಯ್ದೆಯಡಿ ಅವಹೇಳನಾಕಾರಿ ಸಂದೇಶ ರವಾನಿಸಿದ ಆರೋಪದಡಿ ಬಂಧಿಸಲು ಪೊಲೀಸರು ಮುಂದಾಗಿದ್ದರು ಎಂದೂ ಆರೋಪಿಸಲಾಗಿದೆ.
ಈ ಘಟನೆ ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
'ತೀವ್ರ ಖೇದನೀಯ ಮತ್ತು ಆಘಾತಕಾರಿ ಘಟನೆ. ನಿವೃತ್ತ ನೌಕಾಧಿಕಾರಿಯನ್ನು ವಾಟ್ಸಾಪ್ ಫಾರ್ವರ್ಡ್ ಕಾರಣಕ್ಕಾಗಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಈ ಗೂಂಡಾರಾಜ್ಅನ್ನು ದಯವಿಟ್ಟು ನಿಲ್ಲಿಸಿ ಉದ್ಧವ್ ಠಾಕ್ರೆ. ಈ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಹಾಗೂ ಶಿಕ್ಷೆಗೆ ಒತ್ತಾಯಿಸುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.