'ರಾಮಮಂದಿರಕ್ಕೆ ಅಡಿಗಲ್ಲು ಹಾಕಿದರೂ ಜಂಗಲ್ ರಾಜ್ ಆಳ್ವಿಕೆ ಬದಲಾಗಿಲ್ಲ'
ಮುಂಬೈ, ಅಕ್ಟೋಬರ್ 3: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನಾ, ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರೂ ಅಲ್ಲಿ ಈಗಲೂ 'ಜಂಗಲ್ ರಾಜ್' ಉಳಿದುಕೊಂಡಿದೆ ಎಂದು ಟೀಕಿಸಿದೆ.
ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಿದ್ದರು. ಆದರೆ ಉತ್ತರ ಪ್ರದೇಶದಲ್ಲಿ 'ರಾಮರಾಜ್ಯ' ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸನ್ನಿವೇಶದಲ್ಲಿ ಅಲ್ಲಿನ್ನೂ ಜಂಗಲ್ ರಾಜ್ ಮೇಲುಗೈ ಸಾಧಿಸಿದೆ ಎಂದು ಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ವಾಗ್ದಾಳಿ ನಡೆಸಿದೆ.
ದಲಿತ ಜೀವಗಳೂ ಮುಖ್ಯವೇ? ಬಿಹಾರ ಚುನಾವಣೆ ಮೇಲೆ ಹತ್ರಾಸ್ ಘಟನೆ ಪ್ರಭಾವ ಹೇಗಿರಲಿದೆ?
ಮಹಿಳೆಯರ ಮೇಲಿನ ದೌರ್ಜನ್ಯಗಳು ಮುಂದುವರಿಯುತ್ತಿವೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯ ಘಟನೆಗಳು ಹೆಚ್ಚುತ್ತಲೇ ಇದೆ ಎಂದು ಆರೋಪಿಸಿದೆ.
ಹತ್ರಾಸ್ನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಇದು ದೇಶದಾದ್ಯಂತ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಸಾಯುವ ಮೊದಲು ನೀಡಿದ ಹೇಳಿಕೆಯಲ್ಲಿ ಮಹಿಳೆಯು ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ತಿಳಿಸಿದ್ದಾಳೆ. ಆದರೆ ಯೋಗಿ ಸರ್ಕಾರ ಆಕೆಯ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಈಗ ಹೇಳುತ್ತಿದೆ. ಇದಾದ ಕೂಡಲೇ ಬಲರಾಮಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಮ್ನಾ ಕಿಡಿಕಾರಿದೆ.
ಹತ್ರಾಸ್ ಅತ್ಯಾಚಾರ: ಎಸ್ಐಟಿ, ಸಿಬಿಐ ಮೇಲೆ ನಂಬಿಕೆ ಇಲ್ಲ, ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಲಿ
ಆದರೆ ಇಷ್ಟೆಲ್ಲ ಆದರೂ ದೆಹಲಿಯ ಆಡಳಿತಗಾರರಾಗಲೀ ಯೋಗಿ ಆದಿತ್ಯನಾಥರ ಸರ್ಕಾರವಾಗಲೀ ಕೊಂದವೂ ಕದಲಿಲ್ಲ. ಅಲ್ಲಿ ಅತ್ಯಾಚಾರ ಆಗಿಲ್ಲ ಎಂದು ಸರ್ಕಾರವೇ ಹೇಳುತ್ತಿದೆ, ವಿರೋಧಪಕ್ಷಗಳು ಏಕೆ ತಪ್ಪು ನಡೆದಿದೆ ಎಂದು ಆರೋಪಿಸುತ್ತಿವೆ? ಆದರೆ ಅತ್ಯಾಚಾರ ನಡೆಯದೆ ಹೋಗಿದ್ದರೆ ಆಕೆಯ ಮೃತದೇಹವನ್ನು ಪೊಲೀಸರು ರಾತ್ರಿ ವೇಳೆ ತಂದು ಏಕೆ ಅಂತ್ಯಸಂಸ್ಕಾರ ನಡೆಸಬೇಕಿತ್ತು? ಈ ಹಿಂದೆ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಯೋಗಿ ಆದಿತ್ಯನಾಥರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಾಗ ಅವರು ಸಂಸತ್ನಲ್ಲಿ ಅತ್ತಿದ್ದರು. ಈಗ ಅವರೇ ಮುಖ್ಯಮಂತ್ರಿ. ಆದರೆ ಅವರ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂದು ಸೇನಾ ಟೀಕಿಸಿದೆ.