ಶಿವಸೈನಿಕರು ಇನ್ನೂ ಬೀದಿಗೆ ಇಳಿದಿಲ್ಲ, ಜೋಕೆ: ಮೋದಿ ಮತ್ತು ಶಾಗೆ ರಾವುತ್ ಎಚ್ಚರಿಕೆ
ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದೊಳಗಿನ ಭಿನ್ನಮತ ಮತ್ತು ಬಂಡಾಯ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಮಹಾ ವಿಕಾಸ್ ಆಘಾಡಿ ಸರಕಾರದ ಅಲುಗಾಟ ಇನ್ನೂ ಮುಂದುವರಿದಿದೆ. ಎನ್ಸಿಪಿ ಮುಖಂಡರು ಏನು ಮಾಡಬೇಕೆಂದು ದಿಕ್ಕು ತೋಚದೆ ಉಳಿದಿದ್ದಾರೆ. ಕಾಂಗ್ರೆಸ್ ಮೂಕಪ್ರೇಕ್ಷಕನಾಗಿ ಉಳಿದಿದೆ. ಬಂಡಾಯದ ಮಾಸ್ಟರ್ ಮೈಂಡ್ ಎನ್ನಲಾದ ಬಿಜೆಪಿ ಎಲ್ಲವನ್ನೂ ಮಾಡಿ ಈಗ ತಾರ್ಕಿಕ ಅಂತ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಂತಿದೆ.
ಬಂಡಾಯ ಎದ್ದಿರುವ ಏಕನಾಥ್ ಶಿಂದೆ ಬಳಿ 40ಕ್ಕೂ ಹೆಚ್ಚು ಶಾಸಕರು ಇದ್ದಾರೆ. ಶಿಂದೆ ತನ್ನ ಬಳಿ ಶಿವಸೇನೆಯ 40 ಸೇರಿ 50ಕ್ಕೂ ಹೆಚ್ಚು ಶಾಸಕರು ಬೆಂಬಲವಾಗಿ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ತಾರ್ತಿಕ ಅಂತ್ಯ ಯಾವ ಕಡೆ ಹೋಗುತ್ತದೆ ಎಂಬುದು ಸದ್ಯ ಡೆಪ್ಯುಟಿ ಸ್ಪೀಕರ್ ಕೈಯಲ್ಲಿ ಇರುವುದರಿಂದ ನರಹರಿಯನ್ನು ಆ ಸ್ಥಾನದಿಂದ ಕೆಳಗಿಳಿಸಲು ಏಕನಾಥ್ ಶಿಂದೆ ಬೇಡಿಕೆ ಇಟ್ಟಿದ್ದಾರೆ.
ಇತ್ತ, ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಸಂಸದ ಸಂಜಯ್ ರಾವುತ್, ಭಿನ್ನಮತೀಯರ ವಿರುದ್ಧದ ಟೀಕೆಗಳ ಮಹಾಪೂರವನ್ನೇ ಹರಿಸಿದ್ಧಾರೆ.
ಶಾಸಕರು Yes ಎಂದರೆ 'ಮಹಾ' ವಿಕಾಸ ಅಘಾಡಿಗೆ ಶಿವಸೇನೆ ಟಾಟಾ.. ಬಾಯ್ ಬಾಯ್!
ಭಿನ್ನಮತೀಯರ ಪೈಕಿ ಅಸ್ಸಾಂ ರಾಜ್ಯದ ರೆಸಾರ್ಟ್ನಲ್ಲಿರುವ 16 ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಇದೇ ವೇಳೆ ಶಿವಸೇನಾ ಕೇಳಿದೆ.
|
ಪವಾರ್ಗೆ ತೊಂದರೆ ಕೊಟ್ಟರೆ ಸುಮ್ಮನರಿಲ್ಲ
ಬಿಜೆಪಿಯ ಕೇಂದ್ರ ನಾಯಕರಿಂದ ಶರದ್ ಪವಾರ್ಗೆ ಬೆದರಿಕೆ ಬರುತ್ತಿದೆ ಎಂದು ಇದೇ ವೇಳೆ ಶಿವಸೇನಾ ಸಂಸದ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಎಂವಿಎ ಸರಕಾರವನ್ನು ರಕ್ಷಿಸಲು ಪ್ರಯತ್ನಿಸಿದರೆ ಶರದ್ ಪವಾರ್ಗೆ ಮನೆಗೆ ಹೋಗಲು ಬಿಡಲ್ಲ ಅಂತ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಾರೆ. ಎಂವಿಎ ಸರಕಾರ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ಶರದ್ ಪವಾರ್ ಬಗ್ಗೆ ಈ ರೀತಿ ಮಾತನಾಡುವುದು ತರವಲ್ಲ" ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ, ನಾವು ಶಿವಸೇನಾ ಮತ್ತೆ ಕಟ್ಟುತ್ತೇವೆ: ರಾವತ್
ಶಿವಸೈನಿಕರು ಬೀದಿಗೆ ಬರ್ತಾರೆ ಹುಷಾರ್...
"ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ಇಲ್ಲಿ ಕೇಳಿ. ನಿಮ್ಮ ಕೆಲವು ಮುಖಂಡರು ಶರದ್ ಪವಾರ್ಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಈಗ ಕಾನೂನು ಸಮರವಾಗಿದೆ. ಇದುವರೆಗೆ ಶಿವಸೈನಿಕರು ರಸ್ತೆಗೆ ಇಳಿದಿಲ್ಲ. ಅಗತ್ಯ ಬಿದ್ದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ" ಎಂದೂ ಶಿವಸೇನಾ ಸಂಸದ ತಿಳಿಸಿದ್ದಾರೆ.
ಎಂವಿಎ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಂಜಯ್ ರಾವುತ್ ಬಿಜೆಪಿಯ ಕಟ್ಟರ್ ವಿರೋಧಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಮೊನಚು ಮಾತುಗಳಿಂದ ಚುಚ್ಚಿ ಇರಿದಿದ್ದಿದೆ.
ಇದೀಗ ಶಿಂದೆ ಬಳಿ ಅಗತ್ಯ ಸಂಖ್ಯೆ ಇದೆ ಎನ್ನುವ ವರದಿ ಬಗ್ಗೆ ಪ್ರತಿಕ್ರಿಯಿಸಿದರುವ ರಾವುತ್, "ಕೆಲ ನಿರ್ದಿಷ್ಟ ನಿಯಮಗಳಿವೆ. ಸುಪ್ರೀಂ ಕೋರ್ಟ್ ಆದೇಶಗಳಿವೆ. ಈಗ ಇದು ಕಾನೂನು ಹೋರಾಟವಾಗಿದೆ. ಶಿಂದೆ ಬಳಿ ೪೦ ಶಾಸಕರು ಇದ್ದಾರೆ ಅಂತ ಕೆಲವು ಹೇಳುತ್ತಾರೆ, ಇನ್ನೂ ಕೆಲಸವರು ಇನ್ನೊಂದು ಸಂಖ್ಯೆ ಹೇಳುತ್ತಾರೆ. ಶಾಸಕರೆಲ್ಲರೂ ಮುಂಬೈಗೆ ಬಂದಾಗ ಎಲ್ಲವೂ ಸ್ಪಷ್ಟವಾಗುತ್ತದೆ. ಸಂಖ್ಯೆ ಆಗಲಿ, ದಾಖಲೆ ಆಗಲಿ, ಬೀದಿ ಆಗಲಿ, ಯುದ್ಧ ಎಲ್ಲೇ ನಡೆಯಲಿ ಗೆಲ್ಲುವುದು ನಾವೆಯೇ" ಎಂದು ಹೇಳಿಕೊಂಡಿದ್ದಾರೆ.
ಅಜಿತ್ ಪವಾರ್ ಹೇಳಿಕೆ
ಇಂದು ಜೂನ್ 24ರ ಸಂಜೆಯ ನಂತರ ಎನ್ಸಿಪಿ ಮುಖಂಡರು ಸಿಎಂ ಉದ್ಧವ್ ಠಾಕ್ರೆಯವರ ನಿವಾಸ ಮಾತೋಶ್ರೀಗೆ ಆಗಮಿಸಲಿದ್ದು ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದಾರೆ.
ನಿನ್ನೆ ನಮ್ಮ ನಿಲುವು ಏನಿತ್ತೂ ಇವತ್ತೂ ಅದೇ ಇದೆ. ಸರಕಾರ ಸ್ಥಿರವಾಗಿ ಉಳಿಯುವಂತೆ ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ ಎನ್ಸಿಪಿ ಮುಖಂಡ ಅಜಿತ್ ಪವಾರ್, "ಏಕನಾಥ್ ಶಿಂದೆ ಬಣದವರು ತಮ್ಮನ್ನು ತಾವು ಶಿವಸೇನಾ ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ಶಿವಸೇನಾ + ಎನ್ಸಿಪಿ + ಕಾಂಗ್ರೆಸ್ ಮೂರು ಪಕ್ಷ ಸೇರಿದತೆ ನಾವೇ ಬಹುಮತ ಬರುವುದು" ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಭಿನ್ನಮತೀಯರ ವಿರುದ್ಧ ಠಾಕ್ರೆ ಕಿಡಿ
ಶಿವಸೇನಾ ಪಕ್ಷದೊಳಗೆ ಬಂಡಾಯದ ಬಾವುಟ ಹಾರಿಸಿ ಹೊರನಡೆಯಲು ಸಿದ್ಧರಾಗಿರುವ ಏಕನಾಥ್ ಶಿಂದೆ ಮತ್ತಿತರರ ವಿರುದ್ಧ ಸಿಎಂ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಪಕ್ಷ ಹಾಕಿದ ಅನ್ನ ಉಂಡು ಹೋಗಿ ದ್ರೋಹ ಬಗೆಯುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
"ಬೇಕಿದ್ದರೆ ಸಾಯುತ್ತೇನೆ ಹೊರತು ಶಿವಸೇನಾ ತೊರೆಯುವುದಿಲ್ಲ ಎಂದು ಹಿಂದೆ ಘೋಷಿಸಿಕೊಂಡವರು ಈಗ ಓಡಿ ಹೋಗಿದ್ದಾರೆ... ಶಿವಸೇನಾ ಮತ್ತು ಠಾಕ್ರೆ ಹೆಸರು ಬಳಸದೇ ಎಷ್ಟು ದೂರ ಹೋಗಬಲ್ಲಿರಿ? ನೀವು ಗಿಡದ ಹಣ್ಣು, ಹೂವು, ಕಾಂಡಗಳನ್ನು ಕತ್ತರಿಸಿಕೊಂಡು ಹೋಗಬಹುದು. ಆದರೆ, ಬೇರನ್ನು ಕೀಳಲು ಆಗಲ್ಲ" ಎಂದು ಉದ್ಧವ್ ಠಾಕ್ರೆ ಮಾರ್ಮಿಕವಾಗಿ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)