ಮುಂಬೈ ಕುರಿತ ಸವದಿ ಹೇಳಿಕೆಗೆ ತಿರುಗಿಬಿದ್ದ ಶಿವಸೇನೆ ಮುಖಂಡ
ಮುಂಬೈ, ಜನವರಿ 28: ಮುಂಬೈ ಅನ್ನು ಅಧೀಕೃತವಾಗಿ ಕರ್ನಾಟಕಕ್ಕೆ ಸೇರಿಸುವವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂಬ ಕರ್ನಾಟಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ತಿರುಗಿಬಿದ್ದಿದ್ದಾರೆ.
"ಲಕ್ಷ್ಮಣ ಸವದಿ ಇತಿಹಾಸವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡ ಭಾಷಿಗರು ಕರ್ನಾಟಕದಲ್ಲಿನ ಮರಾಠಿ ಭಾಷಿಗರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬಯಸುತ್ತಿದ್ದಾರೆ. ಆದರೆ ಸವದಿಯವರು ಕರ್ನಾಟಕಕ್ಕೆ ಮುಂಬೈ ಸೇರುವವರೆಗೂ ಈ ಪ್ರದೇಶವನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕಾಗಿ ಹೇಳಿದ್ದಾರೆ. ಇದು ಎಷ್ಟು ಸರಿ?" ಎಂದು ದೂಷಿಸಿದ್ದಾರೆ. ಮುಂದೆ ಓದಿ...
"ಸವದಿ ಹೇಳಿಕೆಗೆ ಪ್ರಾಮುಖ್ಯ ಕೊಡುವ ಅಗತ್ಯವಿಲ್ಲ"
ಸಚಿವ ಸವದಿ ಹೇಳಿಕೆಗೆ ಪ್ರಾಮುಖ್ಯ ಕೊಡುವ ಅಗತ್ಯವಿಲ್ಲ ಎಂದು ಹೇಳಿರುವ ರಾವತ್, "ಜನರು ಏನು ಬೇಕಾದರೂ ಮಾತನಾಡಲಿ, ಅದು ನಮಗೆ ತೊಂದರೆಯಿಲ್ಲ. ಸವದಿ ಮೊದಲು ಇತಿಹಾಸ ಅರ್ಥ ಮಾಡಿಕೊಳ್ಳಲಿ. ಮರಾಠಿ ಜನರ ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಕರ್ನಾಟಕದೊಂದಿಗೆ ಈ ವಿವಾದ ಉಂಟಾಗಿದೆ" ಎಂದು ಹೇಳಿದ್ದಾರೆ.
ಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟು
"ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿದ್ದೇವೆ"
"ಸವದಿ ಮೊದಲು ಮುಂಬೈ ಹಾಗೂ ಮಹಾರಾಷ್ಟ್ರಕ್ಕೆ ಬರಲಿ. ಇಲ್ಲಿನ ಕನ್ನಡಿಗರನ್ನು ಮಾತನಾಡಿಸಲಿ. ಆಗ ಬೆಳಗಾವಿ ಹಾಗೂ ಮರಾಠಿ ಭಾಷಿಗರಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲಿ ಎಂದು ಅವರೇ ಹೇಳುತ್ತಾರೆ ಎಂದರು. ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳಿಗೆ, ಗ್ರಂಥಾಲಯಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಟ್ಟಿದೆ. ಬೆಳಗಾವಿಯಲ್ಲಿ ಹೀಗಾಗಿದೆಯೇ" ಎಂದು ಪ್ರಶ್ನಿಸಿದ್ದಾರೆ.
ಕಿಚ್ಚು ಹೊತ್ತಿಸಿದ ಮಹಾರಾಷ್ಟ್ರ ಸಿಎಂ ಹೇಳಿಕೆ
ಕರ್ನಾಟಕದಲ್ಲಿನ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದರು. "ಮಹಾರಾಷ್ಟ್ರ-ಕರ್ನಾಟಕ ಗಡಿ ತಗಾದೆ-ಹೋರಾಟ ಮತ್ತು ನಿಶ್ಚಯ" ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿ ಬಗೆಹರಿಯುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿದ್ದರು .
ಉದ್ಧವ್ ಠಾಕ್ರೆಗೆ ತಿರುಗೇಟು ಕೊಟ್ಟಿದ್ದ ಸವದಿ
ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಪ್ರತಿಯಾಗಿ ಉತ್ತರಿಸಿದ್ದ ಡಿಸಿಎಂ ಲಕ್ಷ್ಮಣ ಸವದಿ, ಮುಂಬೈ ಅನ್ನು ಅಧಿಕೃತವಾಗಿ ಕರ್ನಾಟಕಕ್ಕೆ ಸೇರಿಸುವವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು. ಈ ಭಾಗವನ್ನು ಮುಂಬೈ-ಕರ್ನಾಟಕ ಎಂದು ಕರೆಯಲಾಗುತ್ತದೆ. ನಾವೂ ಮುಂಬೈ ಕರ್ನಾಟಕ ಭಾಗದವರು. ಮುಂಬೈ ನಮ್ಮದು. ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸುವ ಕುರಿತು ಮಹಾಜನ್ ಆಯೋಗದ ತೀರ್ಪು ಬಂದಿದೆ. ಇನ್ನು ಮುಂಬೈ ಕೂಡ ನಮ್ಮದು ಎಂಬ ಬೇಡಿಕೆ ಇಡಲು ಶುರುಮಾಡುತ್ತೇವೆ ಎಂದು ತಿರುಗೇಟು ನೀಡಿದ್ದರು.