ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ಹೊರಹಾಕಬೇಕು: ಶಿವಸೇನಾ ಹೇಳಿಕೆ
ಮುಂಬೈ, ಜನವರಿ 25: ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು ಎಂದು ಶಿವಸೇನಾ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಒಂದೆಡೆ ವಿರೋಧ ವ್ಯಕ್ತಪಡಿಸುತ್ತಲೇ ಅದಕ್ಕೆ ಬೆಂಬಲ ನೀಡುತ್ತಿರುವ ಶಿವಸೇನಾ, ನೆರೆಯ ದೇಶಗಳಿಂದ ಬಂದು ಭಾರತದಲ್ಲಿ ನೆಲೆಸಿರುವ ಮುಸ್ಲಿಮರನ್ನು ಹೊರಹಾಕಬೇಕು. ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದಿದೆ.
ಬಿಜೆಪಿಯನ್ನು ಮೊಹಮ್ಮದ್ ಘೋರಿಗೆ ಹೋಲಿಸಿದ ಶಿವಸೇನಾ
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಕೆಲವು ಲೋಪದೋಷಗಳಿದ್ದು, ಬದಲಾವಣೆಗಳು ಆಗಬೇಕಿದೆ ಎಂದಿರುವ ಶಿವಸೇನಾದ ಮುಖವಾಣಿ 'ಸಾಮ್ನಾ', ಈ ಕಾಯ್ದೆಗಾಗಿ ತಮ್ಮ ಧ್ವಜದ ಬಣ್ಣ ಬದಲಿಸಿಕೊಂಡಿದ್ದಾರೆ ಎಂದು ಠಾಕ್ರೆ ಕುಟುಂಬದವರೇ ಆದ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಟೀಕಿಸಿದೆ.
ಪಾಕ್-ಬಾಂಗ್ಲಾ ಮುಸ್ಲಿಮರನ್ನು ಹೊರಹಾಕಬೇಕು
'ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಅದನ್ನು ಮಾಡಲು ನೀವು ನಿಮ್ಮ ರಾಜಕೀಯ ಪಕ್ಷದ ಧ್ವಜವನ್ನು ಬದಲಿಸಿಕೊಂಡಿದ್ದೀರಿ. ಇದು ಬಹಳ ಅಚ್ಚರಿಯ ವಿಷಯ. ಶಿವಸೇನಾ ಎಂದಿಗೂ ತನ್ನ ಧ್ವಜ ಬದಲಿಸಿಲ್ಲ. ಅದು ಎಂದಿಗೂ ಕೇಸರಿಯಾಗಿಯೇ ಇರುತ್ತದೆ. ಶಿವಸೇನಾ ಎಂದಿಗೂ ಹಿಂದುತ್ವಕ್ಕಾಗಿ ಹೋರಾಡುತ್ತಲೇ ಇದೆ. ಸಿಎಎದಲ್ಲಿ ಕೆಲವು ಲೋಪದೋಷಗಳಿವೆ' ಎಂದು ಶಿವಸೇನಾದ ಮುಖವಾಣಿ 'ಸಾಮ್ನಾ'ತನ್ನ ಶನಿವಾರದ ಸಂಪಾದಕೀಯದಲ್ಲಿ ಹೇಳಿದೆ.
ಮತಗಳಿಕೆ ಅಜೆಂಡಾ
ಇತ್ತೀಚೆಗೆ ತಮ್ಮ ಧ್ವಜದ ಬಣ್ಣವನ್ನು ಕೇಸರಿಯಾಗಿ ಬದಲಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಸಾಮ್ನಾ ಟೀಕಿಸಿದೆ. ಬಿಜೆಪಿಯೊದಿಗೆ ಸೇರಿ ಮತಗಳಿಕೆಗಾಗಿ ರಾಜ್ ಠಾಕ್ರೆ ಹಿಂದುತ್ವವನ್ನು ತಮ್ಮ ಮುಖ್ಯ ಅಜೆಂಡಾವಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಪಾದಕೀಯ ಹೇಳಿದೆ.
ಬಿಜೆಪಿ ಒತ್ತಾಯದಂತೆ ಹಿಂದುತ್ವ
'ಪಕ್ಷದ ಧ್ವಜವನ್ನು ಕೇಸರಿಯಾಗಿ ಬದಲಿಸಿಕೊಂಡಿರುವುದು ಯಾವುದನ್ನೂ ಸಮರ್ಥಿಸಿಕೊಳ್ಳುವುದಿಲ್ಲ. 14 ವರ್ಷಗಳ ಹಿಂದೆ ರಾಜ್ ಠಾಕ್ರೆ ಎಂಎನ್ಎಸ್ಅನ್ನು ಮರಾಠಿ ಸಿದ್ಧಾಂತದೊಂದಿಗೆ ಸ್ಥಾಪಿಸಿದ್ದರು. ಆದರೆ ಅದೀಗ ತನ್ನ ದಿಕ್ಕನ್ನು ಹಿಂದುತ್ವಕ್ಕೆ ಬದಲಿಸಿಕೊಂಡಿದೆ. ರಾಜ್ ಠಾಕ್ರೆ ತಮ್ಮ ಭಾಷಣದಲ್ಲಿ ನನ್ನ ಹಿಂದೂ ಸಹೋದರ ಸಹೋದರಿಯರಗೆ ಸ್ವಾಗತ ಎಂದು ಹೇಳಲು ಆರಂಭಿಸಿದ್ದಾರೆ. ಇದು ಬಿಜೆಪಿಯವರ ಬೇಡಿಕೆಯಂತೆ ಆಗುತ್ತಿರುವುದು. ಎಂಎನ್ಎಸ್ ಹಿಂದೆ ಕೂಡ ಏನನ್ನೂ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ, ಇಂದೂ ಏನನ್ನೂ ಪಡೆದುಕೊಳ್ಳುವುದಿಲ್ಲ' ಎಂದು ವ್ಯಂಗ್ಯವಾಡಿದೆ.
ಹಿಂದೂಗಳಿಗೂ ತೊಂದರೆ
'ಕೆಲವೇ ವಾರಗಳ ಹಿಂದೆ ಇದೇ ರಾಜ್ ಠಾಕ್ರೆ ಸಿಎಎ ವಿರುದ್ಧ ಇದ್ದರು. ಈಗ ಅವರು ಕೇವಲ ಮತ ಗಳಿಕೆಗಾಗಿ ತಮ್ಮ ಬಣ್ಣ ಬದಲಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಬಯಸಿರುವುದು ಸ್ಪಷ್ಟ. ಸಿಎಎಯಿಂದ ಮುಸ್ಲಿಮರು ಮಾತ್ರವಲ್ಲ ಶೇ 30-40ರಷ್ಟು ಹಿಂದೂಗಳಿಗೂ ತೊಂದರೆಯಾಗಲಿದೆ. ಈ ಕಾನೂನಿನಲ್ಲಿ ಸೈನಿಕರು, ಮಾಜಿ ಅಧ್ಯಕ್ಷರ ಕುಟುಂಬದವರನ್ನು ಸೇರಿಸಿಕೊಳ್ಳುತ್ತಿಲ್ಲ ಮತ್ತು ಅವರನ್ನು ಹೊರಗಿನವರು ಎಂದು ತೋರಿಸಲಾಗುತ್ತಿದೆ' ಎಂದು ಸಾಮ್ನಾ ಆಕ್ಷೇಪ ವ್ಯಕ್ತಪಡಿಸಿದೆ.